ಮಂಗಳೂರು ಪೊಲೀಸರ ದೌರ್ಜನ್ಯದ ಭೀಕರ ಅನುಭವ ಹಂಚಿಕೊಂಡ ಕೇರಳ ಪತ್ರಕರ್ತರು
ತಿರುವನಂತಪುರಂ, ಡಿಸೆಂಬರ್ 21: ಮಂಗಳೂರಿನಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯನ್ನು ವರದಿ ಮಾಡಲು ಬಂದಿದ್ದ ಕೇರಳದ ಪತ್ರಕರ್ತರ ಗುಂಪನ್ನು, ನಕಲಿ ಪತ್ರಕರ್ತರ ಸೋಗಿನಲ್ಲಿ ದಾಳಿ ಮಾಡಲು ಬಂದಿದ್ದ ದುಷ್ಕರ್ಮಿಗಳು ಎಂದು ಪೊಲೀಸರು ವಶಕ್ಕೆ ಪಡೆದುಕೊಂಡು, ಬಳಿಕ ಬಿಡುಗಡೆ ಮಾಡಿದ ಘಟನೆ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
ಜತೆಗೆ ಪ್ರತಿಭಟನಾಕಾರರನ್ನು ಗುರಿಯನ್ನಾಗಿರಿಸಿಕೊಂಡ ಪೊಲೀಸರು ಆಸ್ಪತ್ರೆಯೊಂದರ ಒಳಗೆ ದಾಳಿ ನಡೆಸಿದ ಘಟನೆ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿದ್ದು, ಪೊಲೀಸರ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಮಂಗಳೂರಿನಲ್ಲಿ ಕರ್ನಾಟಕ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಕೇರಳದ ಪತ್ರಕರ್ತರ ಗುಂಪನ್ನು ಶುಕ್ರವಾರ ಸುಮಾರು ಏಳು ಗಂಟೆಗಳ ಬಳಿಕ ಕೇರಳ-ಕರ್ನಾಟಕ ಗಡಿಯಲ್ಲಿ ಕೇರಳ ಪೊಲೀಸರ ವಶಕ್ಕೆ ಒಪ್ಪಿಸಲಾಗಿತ್ತು.
ಮಂಗಳೂರಿನಲ್ಲಿ ವಶಕ್ಕೆ ಪಡೆದಿದ್ದ 50 ಮಂದಿ ಕೇರಳ ಪತ್ರಕರ್ತರ ಬಿಡುಗಡೆ
ಶುಕ್ರವಾರ ಮಧ್ಯಾಹ್ನ 3.45ರ ವೇಳೆಗೆ ಏಳು ಮಂದಿ ಪತ್ರಕರ್ತರನ್ನು ತಲಪ್ಪಾಡಿ ಸಮೀಪ ಬಿಡಲಾಯಿತು. ಆಸ್ಪತ್ರೆ ಮುಂಭಾಗದಿಂದ ವರದಿ ಮಾಡುತ್ತಿದ್ದ ಪತ್ರಕರ್ತರನ್ನು ಮೊದಲು ಪೊಲೀಸರು ಅಲ್ಲಿಂದ ತೆರಳುವಂತೆ ಸೂಚಿಸಿದರು. ಬಳಿಕ ಅವರನ್ನು ವಶಕ್ಕೆ ತೆಗೆದುಕೊಂಡು ಅವರ ಗುರುತಿನ ಪತ್ರಗಳನ್ನು ಪರಿಶೀಲಿಸಲು ಆರಂಭಿಸಿದರು.
ಆಸ್ಪತ್ರೆ ಹೊರಗಿನಿಂದ ವರದಿ
ಮಲಯಾಳಂನ ಕೆಲವು ಪ್ರಮುಖ ವಾಹಿನಿಗಳ ಪತ್ರಕರ್ತರು ಮಂಗಳೂರಿನಲ್ಲಿ ನಡೆಯುತ್ತಿದ್ದ ಸಿಎಎ ವಿರುದ್ಧದ ಪ್ರತಿಭಟನೆಯ ವರದಿಗಾಗಿ ಶುಕ್ರವಾರ ಬೆಳಿಗ್ಗೆ ತೆರಳಿದ್ದರು. ಪೊಲೀಸರು ನಡೆಸಿದ ಗೋಲಿಬಾರ್ಗೆ ಇಬ್ಬರು ಮೃತಪಟ್ಟ ಘಟನೆ ಬಳಿಕ ಮಂಗಳೂರಿನ ಪರಿಸ್ಥಿತಿಯನ್ನು ವರದಿ ಮಾಡಲು ತೆರಳಿದ್ದರು. ಬೆಳಿಗ್ಗೆ ಎಂಟು ಗಂಟೆಗೆ ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಇರಿಸಿದ್ದ ವೆನ್ಲಾಕ್ ಆಸ್ಪತ್ರೆಯ ಹೊರಗೆ ನಿಂತು ವರದಿ ರವಾನಿಸುತ್ತಿದ್ದರು.
ಫೋನ್, ಕ್ಯಾಮೆರಾ ಕಸಿದುಕೊಂಡರು
'ನಮ್ಮನ್ನು ಏಕೆ ಬಂಧಿಸಲಾಯಿತು ಎನ್ನುವುದು ನನಗೆ ಕಿಂಚಿತ್ತೂ ಗೊತ್ತಿಲ್ಲ. ಮೊದಲು ಅಧಿಕಾರಿಗಳು ನನ್ನ ಗುರುತಿನ ಚೀಟಿ ಕೇಳಿದರು. ಅದನ್ನು ತೋರಿಸಿದ ಬಳಿಕ ಮಾನ್ಯತಾ ಪತ್ರ ಕೇಳಿದರು. ಅದನ್ನೂ ತೋರಿಸಿದೆ. ನಂತರ ನನ್ನ ಮಾನ್ಯತಾ ಗುರುತಿನ ಚೀಟಿಯನ್ನು ಪರಿಶೀಲಿಸಬೇಕು ಎಂದು ಪೊಲೀಸ್ ವಾಹನದ ಒಳಗೆ ಹತ್ತುವಂತೆ ಸೂಚಿಸಿದರು. ನಾವು ವಾಹನದ ಒಳಗೆ ಹೋಗುತ್ತಿದ್ದಂತೆಯೇ ನಮ್ಮ ಫೋನ್ಗಳು ಮತ್ತು ಕ್ಯಾಮೆರಾಗಳನ್ನು ಕಸಿದುಕೊಂಡರು. ನಾಲ್ಕು ಗಂಟೆ ಬಸ್ನಲ್ಲಿ, ನಂತರ ಮೂರು ಗಂಟೆ ಪೊಲೀಸ್ ಠಾಣೆಯಲ್ಲಿ ಕೂರುವಂತಾಯಿತು' ಎಂದು ಪತ್ರಕರ್ತರೊಬ್ಬರು ವಿವರಿಸಿದರು.
ಗೋಲಿಬಾರ್: ಯಡಿಯೂರಪ್ಪಗೆ ಕೇರಳ ಸಿಎಂ ಪತ್ರ
|
ಸೀಟು ಇದ್ದರೂ ನೆಲದ ಮೇಲೆ ಕೂರಿಸಿದರು
'ನಾವು ಆಸ್ಪತ್ರೆಯ ಹೊರಭಾಗದಲ್ಲಿ ನಿಂತು ವರದಿ ಮಾಡುತ್ತಿದ್ದಾಗ ಮಂಗಳೂರು ಪೊಲೀಸ್ ಆಯುಕ್ತರು ಬಂದು ಅಲ್ಲಿಂದ ಹೋಗುವಂತೆ ನಮಗೆ ಹೇಳಿದರು. ಅವರು ಹೇಳಿದಂತೆ ಆಸ್ಪತ್ರೆಯ ಆವರಣದಿಂದ ಹೊರಬಂದೆವು. ಅವರು ಮತ್ತೆ ಬಂದು ನಮ್ಮ ಐಡಿಗಳನ್ನು ಕೇಳಿದರು. ಅದನ್ನು ತೋರಿಸಿದ ಬಳಿಕ ನಮ್ಮ ನೇರ ವರದಿಗಾರಿಕೆಗೆ ಅಡ್ಡಿಪಡಿಸಿ ಮೈಕ್ಅನ್ನು ದೂರ ತಳ್ಳಲು ಪ್ರಯತ್ನಿಸಿದರು. ನಂತರ ನಾವು ನಮ್ಮ ಕಾರ್ ಒಳಗೆ ಹೋಗಿ ಕುಳಿತೆವು. ಕೆಲವು ನಿಮಿಷಗಳ ಬಳಿಕ ಕೆಲವು ಪೊಲೀಸರು ಬಂದು ನಮ್ಮನ್ನು ಕಾರ್ನಿಂದ ಹೊರಗೆ ಎಳೆದು ಬಲವಂತವಾಗಿ ಪೊಲೀಸ್ ಬಸ್ಗೆ ತುಂಬಿದರು. ಬಸ್ನಲ್ಲಿ ಸೀಟುಗಳಿದ್ದರೂ ನೆಲದ ಮೇಲೆ ಕೂರುವಂತೆ ಸೂಚಿಸಿದರು. ನಮ್ಮನ್ನು ಅಪರಾಧಿಗಳಂತೆ ನಡೆಸಿಕೊಂಡರು' ಎಂದು ಮತ್ತೊಬ್ಬ ವರದಿಗಾರ ಅನುಭವ ಹಂಚಿಕೊಂಡರು.
ಸಿಕ್ಕಿದ್ದು ಒಂದು ಬಾಟಲಿ ನೀರು ಮಾತ್ರ
'ನಮ್ಮನ್ನು ಯಾವ ನಿರ್ದಿಷ್ಟ ಕಾರಣವೂ ಇಲ್ಲದೆ ಬಂಧಿಸಲಾಗಿತ್ತು. ಅವರು ತಮ್ಮ ನಡೆಗೆ ಸೂಕ್ತ ಸಮರ್ಥನೆಯನ್ನೂ ನೀಡುವ ಸ್ಥಿತಿಯಲ್ಲಿರಲಿಲ್ಲ. ಯಾವ ಕಾರಣವೂ ಇಲ್ಲದೆ ನಾವು ಏಳು ಗಂಟೆಗೂ ಹೆಚ್ಚು ಸಮಯ ಬಂಧನದಲ್ಲಿರಬೇಕಾಯಿತು. ಇಡೀ ದಿನ ನಮಗೆ ಸಿಕ್ಕಿದ್ದು ಒಂದು ಬಾಟಲಿ ನೀರು ಮಾತ್ರ. ಸ್ಪಷ್ಟವಾಗಿ ಇದು ದೌರ್ಜನ್ಯವಾಗಿದೆ. ಪೊಲೀಸ್ ವಾಹನದೊಳಗೆ ಕುಳಿತಿದ್ದ ನಮಗೆ ಇತರೆ ರಾಷ್ಟ್ರೀಯ ವಾಹಿನಿ ಹಾಗೂ ಕನ್ನಡ ವಾಹಿನಿಗಳ ಪತ್ರಕರ್ತರು ವರದಿಗಾರಿಕೆ ಮಾಡುತ್ತಿರುವುದು ಕಾಣಿಸುತ್ತಿತ್ತು' ಎಂದು ಇನ್ನೊಬ್ಬ ಪತ್ರಕರ್ತ ಹೇಳಿದರು.
ಸರ್ಕಾರವೇ ಮುಂದೆ ನಿಂತು ಕೊಂದಿದೆ: ಎಚ್ ಡಿ ಕುಮಾರಸ್ವಾಮಿ ಆರೋಪ
|
ಆಸ್ಪತ್ರೆಯಲ್ಲಿ ಪೊಲೀಸರ ದಾಳಿ
ಗುರುವಾರ ಇಬ್ಬರನ್ನು ಗೋಲಿಬಾರ್ನಲ್ಲಿ ಹತ್ಯೆ ಮಾಡಿದ ಘಟನೆ ಬಳಿಕ ಯುವಕರ ಗುಂಪೊಂದು ಸಂಜೆ ಆರು ಗಂಟೆ ಸುಮಾರಿಗೆ ಘೋಷಣೆ ಕೂಗುತ್ತಾ ಹೈಲ್ಯಾಂಡ್ಸ್ ಆಸ್ಪತ್ರೆಗೆ ಪ್ರವೇಶಿಸಿದ್ದರು. ಕೆಲವು ನಿಮಿಷದ ಬಳಿಕ ಆಸ್ಪತ್ರೆ ಆವರಣದಲ್ಲಿದ್ದ ಯುವಕನೊಬ್ಬ ಆಸ್ಪತ್ರೆಯ ಗೋಡೆಗೆ ಕಲ್ಲು ಹೊಡೆದಿದ್ದ. ಸ್ವಲ್ಪ ಹೊತ್ತಿನಲ್ಲಿಯೇ ಒಂದು ಅಶ್ರುವಾಯು ಶೆಲ್ ಆಸ್ಪತ್ರೆಯ ಹೊರಾಂಗಣದಲ್ಲಿ ಬಿದ್ದಿತು. ಆಸ್ಪತ್ರೆಯ ಆವರಣದಲ್ಲಿ ನಿಂತಿದ್ದ ಜನರಿಗೆ ಹೊಡೆಯುತ್ತಾ ಬಂದ ಪೊಲೀಸರು ಸ್ಪೆಷಲ್ ವಾರ್ಡ್ ಮತ್ತು ಐಸಿಯು ಇರುವ ಸ್ಥಳಕ್ಕೆ ಬಂದರು. ಪ್ರತಿಭಟನಾಕಾರರು ಅಡಗಿದ್ದಾರೆ ಎಂಬ ಶಂಕೆಯಲ್ಲಿ ಬಾಗಿಲುಗಳನ್ನು ಒದ್ದು ತೆಗೆಯಲು ಪ್ರಯತ್ನಿಸಿದರು. ಕೆಲವು ವಾರ್ಡ್ಗಳ ಬಾಗಿಲುಗಳನ್ನುತೆರೆದಾಗ ರೋಗಿಗಳು ಮತ್ತು ಶುಶ್ರೂಕರು ಮಾತ್ರವೇ ಕಂಡಿದ್ದರು. ಬಳಿಕ ಅವರು ಐಸಿಯು ಒಳಗೆ ಪ್ರವೇಶಿಸಲು ಪ್ರಯತ್ನಿಸಿದರು. ಈ ಎಲ್ಲ ಘಟನೆಗಳೂ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.