ಮದ್ಯದ ನಶೆಯಲ್ಲಿ ಪತ್ರಕರ್ತನ ಮೇಲೆ ಕಾರು ಹತ್ತಿಸಿದ ಐಎಎಸ್ ಅಧಿಕಾರಿ
ತಿರುವನಂತಪುರಂ, ಆಗಸ್ಟ್ 03: ಐಎಎಸ್ ಅಧಿಕಾರಿ ಶ್ರೀರಾಂ ವೆಂಕಟರಾಮನ್ ಕಾರು ಢಿಕ್ಕಿಯಾಗಿ ಪತ್ರಕರ್ತರೊಬ್ಬರ ಮರಣ ಹೊಂದಿರುವ ಘಟನೆ ಕೇರಳದಲ್ಲಿ ನಡೆದಿದೆ.
ಮಲೆಯಾಳಂ ದಿನಪತ್ರಿಕೆ ಒಂದರಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತ ಕೆ.ಎಂ.ಬಶೀರ್ (35) ಅಪಘಾತದಲ್ಲಿ ಮೃತರಾಗಿದ್ದು, ಐಎಎಸ್ ಅಧಿಕಾರಿ ಶ್ರೀರಾಂ ವೆಂಕಟರಾಮನ್ ಅವರು ಕುಡಿದ ಮತ್ತಿನಲ್ಲಿ ಕಾರು ವೇಗವಾಗಿ ಚಾಲನೆ ಮಾಡುತ್ತಿದ್ದುದೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಈ ಮೊದಲು ಅಧಿಕಾರಿ ವೆಂಕಟರಾಮನ್ ಕಾರು ಚಲಾಯಿಸುತ್ತಿರಲಿಲ್ಲ ಎಂದು ಹೇಳಲಾಗಿತ್ತು. ಆದರೆ ನಂತರ ಡಿಸಿಪಿ ಕೋರಿ ಸಂಜಯ್ಕುಮಾರ್ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, 'ಸಂಗ್ರಹಿಸಿರುವ ಸಾಕ್ಷಿ ಮತ್ತು ಪ್ರತ್ಯಕ್ಷದರ್ಶಿಗಳ ಪ್ರಕಾರ ಅಧಿಕಾರಿ ವೆಂಕಟರಾಮನ್ ಅವರೇ ಕಾರು ಚಲಾಯಿಸುತ್ತಿದ್ದುದ್ದಾಗಿ ಗೊತ್ತಾಗಿದೆ' ಎಂದು ಮಾಹಿತಿ ನೀಡಿದ್ದಾರೆ.
ತಿರುವನಂತಪುರಂ ನ ಮ್ಯೂಸಿಯಂ ಪೊಲೀಸ್ ಠಾಣೆಯ ಹತ್ತಿರವೇ ಅಪಘಾತ ಸಂಭವಿಸಿದ್ದು, ಪತ್ರಕರ್ತ ಬಶೀರ್ ಅಪಘಾತ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಅಪಘಾತದ ನಂತರ ಐಎಎಸ್ ಅಧಿಕಾರಿ ಮತ್ತು ಅವರ ಗೆಳತಿಯನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆಗ ಐಎಎಸ್ ಅಧಿಕಾರಿ ಮದ್ಯದ ನಶೆಯಲ್ಲಿರುವುದನ್ನು ವೈದ್ಯರು ಗಮಿಸಿದ್ದಾರೆ. ಆದರೆ ಈ ಬಗ್ಗೆ ವಿಶೇಷ ಪರೀಕ್ಷೆಯನ್ನು ಮಾಡಲಾಗಿಲ್ಲ. ಪರೀಕ್ಷೆ ಬೇಡವೆಂದು ಪೊಲೀಸರು ಹೇಳಿದ್ದಾಗಿಯೂ ಗುಮಾನಿ ಇದೆ.