ಮಾಂಸಕ್ಕೆ 'ಗೋಮಾತಾ' ಎಂದ ರೆಹನಾ ಫಾತಿಮಾಗೆ ಹೈಕೋರ್ಟ್ ನಿರ್ಬಂಧ
ತಿರುವನಂತಪುರಂ, ನವೆಂಬರ್ 24: ತನ್ನ ಅಡುಗೆ ಕಾರ್ಯಕ್ರಮದಲ್ಲಿ ಮಾಂಸಕ್ಕೆ ಬದಲಾಗಿ 'ಗೋಮಾತಾ' ಎಂಬ ಪದವನ್ನು ಬಳಸುವ ಮೂಲಕ ವಿವಾದ ಸೃಷ್ಟಿಸಿದ್ದ ಸಾಮಾಜಿಕ ಕಾರ್ಯಕರ್ತೆ ರೆಹಾನಾ ಫಾತಿಮಾ ಅವರು ತಮ್ಮ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದೃಶ್ಯ ಅಥವಾ ವಿದ್ಯುನ್ಮಾನ ಮಾಧ್ಯಮದಲ್ಲಿ ತಮ್ಮ ಅಭಿಪ್ರಾಯ ಅಥವಾ ಹೇಳಿಕೆಯನ್ನು ನೀಡುವಂತಿಲ್ಲ ಎಂದು ಕೇರಳ ಹೈಕೋರ್ಟ್ ಸೋಮವಾರ ಆದೇಶ ಹೊರಡಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ವಿವಾದ ಸೃಷ್ಟಿಸುತ್ತಿರುವ ಫಾತಿಮಾ, ತಾವು ಅಡುಗೆ ಕಾರ್ಯಕ್ರಮವೊಂದರಲ್ಲಿ ಮಾಂಸಕ್ಕೆ ಪರ್ಯಾಯವಾಗಿ ಗೋಮಾತಾ ಎಂಬ ಪದವನ್ನು ಹಲವು ಬಾರಿ ಹೇಳಿದ್ದರು. 'ಗೋಮಾಂಸಮ್ ಉಲಾಥಿಯತ್' ಎಂಬ ಶೀರ್ಷಿಕೆಯ ಈ ಕಾರ್ಯಕ್ರಮದ ವಿಡಿಯೋ ಫೆಬ್ರವರಿಯಲ್ಲಿ ಯೂಟ್ಯೂಬ್ಗೆ ಅಪ್ಲೋಡ್ ಆಗಿತ್ತು.
ಸಾಮಾಜಿಕ ಮಾಧ್ಯಮದಲ್ಲಿ ನಿರಂತರವಾಗಿ ಆಕ್ಷೇಪಾರ್ಹ ಪೋಸ್ಟ್ಗಳನ್ನು ಹಾಕಿದ್ದಕ್ಕಾಗಿ 2018ರಲ್ಲಿ ಜಾಮೀನು ಪಡೆದುಕೊಂಡಿದ್ದನ್ನು ನೆನಪಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನಿಲ್ ಥಾಮಸ್, ಅವರು ಬಳಸಿರುವ 'ಗೋಮಾತಾ' ಪದವು ಲಕ್ಷಾಂತರ ಹಿಂದೂಗಳ ಧಾರ್ಮಿಕ ಭಾವನೆಗೆ ನೋವನ್ನುಂಟು ಮಾಡುವಂತಿದೆ ಎಂದರು. ಮುಂದೆ ಓದಿ.
ಉದ್ದೇಶಪೂರ್ವಕ ಕೃತ್ಯ
'ಭಾರತದ ಯಾವ ಭಾಗದಲ್ಲಿಯೂ ಮಾಂಸಕ್ಕೆ ಸಮಾನಾರ್ಥವಾಗಿ ಗೋಮಾತಾ ಎಂಬ ಪದವನ್ನು ಬಳಸಲಾಗುತ್ತದೆ ಎಂಬುದನ್ನು ನ್ಯಾಯಾಲಯದ ಮುಂದೆ ಯಾವುದೇ ಪುರಾವೆ ಇಲ್ಲ. 'ಗೋಮಾತಾ ಉಳರ್ಥ್' ಎಂಬ ಪದ ಬಳಸಿರುವುದು ಉದ್ದೇಶಪೂರ್ವಕ ಯೋಜನೆ ಎಂದು ಮೇಲ್ನೋಟಕ್ಕೆ ಎನಿಸುತ್ತದೆ. ಇಂತಹ ತೀವ್ರ ಆಕ್ಷೇಪಾರ್ಹ ವಿಡಿಯೋವನ್ನು ಸಾರ್ವಜನಿಕರ ವೀಕ್ಷಣೆಗೆ ಅಪ್ಲೋಡ್ ಮಾಡಿರುವುದು ಭಕ್ತರ ಮೂಲಭೂತ ಹಕ್ಕುಗಳಿಗೆ ಧಕ್ಕೆ ತರುವಂತೆ ಇದೆ' ಎಂದು ಆದೇಶದಲ್ಲಿ ಹೇಳಲಾಗಿದೆ.
ಫಾತಿಮಾಗೆ ಕೊನೆಯ ಅವಕಾಶ
ಈ ರೀತಿಯ ಗಂಭೀರ ಉಲ್ಲಂಘನೆಯನ್ನು ಪರಿಗಣಿಸಿ ಅವರ ಜಾಮೀನನ್ನು ರದ್ದುಗೊಳಿಸಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿತ್ತು. ಆದರೆ ಫಾತಿಮಾ ಅವರು ಅನ್ಯರ ಹಕ್ಕನ್ನು ಗೌರವಿಸುತ್ತಾರೆ ಎಂಬ ನಂಬಿಕೆಯೊಂದಿಗೆ ಕೊನೆಯ ಅವಕಾಶ ನೀಡಲು ಬಯಸಿರುವುದಾಗಿ ಕೋರ್ಟ್ ಹೇಳಿತು.
ಎಲ್ಲಿಯೂ ಅಭಿಪ್ರಾಯ ಹಂಚುವಂತಿಲ್ಲ
2018ರ ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವವರೆಗೂ ಫಾತಿಮಾ ಅವರು ನೇರವಾಗಿ ಅಥವಾ ಪರೋಕ್ಷವಾಗಿ ಅಥವಾ ಯಾವುದೇ ವ್ಯಕ್ತಿಯ ಮೂಲಕ ತಮ್ಮ ಯಾವುದೇ ಅಭಿಪ್ರಾಯವನ್ನು ಅಥವಾ ವಿಚಾರವನ್ನು ಸಾರ್ವಜನಿಕರಿಗೆ ಮುಕ್ತವಾಗಿರುವ ಯಾವುದೇ ದೃಶ್ಯ ಮತ್ತು ವಿದ್ಯುನ್ಮಾನ ಮಾಧ್ಯಮದ ಮೂಲಕ ಪ್ರಕಟಿಸುವ, ಹರಡಿಸುವ, ಪ್ರಸಾರ ಮಾಡುವ, ಹಂಚಿಕೊಳ್ಳುವ ಅಥವಾ ಅಪ್ಲೋಡ್ ಮಾಡುವ ಹಾಗೆ ಇಲ್ಲ ಎಂದ ಕೋರ್ಟ್, ಎಲ್ಲ ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ಈ ವಿಡಿಯೋವನ್ನು ತೆಗೆದುಹಾಕಲು ಅರ್ಜಿದಾರರು ಪೊಲೀಸರನ್ನು ಸಂಪರ್ಕಿಸಬಹುದು ಎಂದು ತಿಳಿಸಿದೆ.
ಶಬರಿಮಲೆ ವಿವಾದ
2018ರಲ್ಲಿ ಶಬರಿಮಲೆ ದೇವಸ್ಥಾನ ಪ್ರವೇಶಿಸುವ ಪ್ರಯತ್ನದಲ್ಲಿ ಫಾತಿಮಾ ಸುದ್ದಿಯಾಗಿದ್ದರು. ಎಲ್ಲ ವಯಸ್ಸಿನ ಮಹಿಳೆಯರೂ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಬಹುದು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದ ಬಳಿಕ ಪೊಲೀಸರ ಭದ್ರತೆಯೊಳಗೆ ಶಬರಿಮಲೆ ಪ್ರವೇಶಿಸಲು ತೆರಳಿದ್ದ ಫಾತಿಮಾ ಅವರನ್ನು ಭಕ್ತರು ಮತ್ತು ಬಲಪಂಥೀಯ ಸಂಘಟನೆಗಳ ತೀವ್ರ ವಿರೋಧದೊಂದಿಗೆ ವಾಪಸ್ ಕಳುಹಿಸಲಾಗಿತ್ತು. ಅಯ್ಯಪ್ಪ ಭಕ್ತರನ್ನು ನಿಂದಿಸುವ ಮತ್ತು ಅವಮಾನಿಸುವ ಫೋಟೊಗ್ರಾಫ್ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದಕ್ಕೆ ಆಕೆ ವಿರುದ್ಧ ಪ್ರಕರಣ ದಾಖಲಾಗಿತ್ತು.