ಶಬರಿಮಲೆ ಕೋವಿಡ್ ಪರೀಕ್ಷೆ ಕ್ರಮ: ಅಯ್ಯಪ್ಪ ಸ್ವಾಮಿ ಭಕ್ತರಿಗೆ ಕೊಂಚ ನಿರಾಳ
ಕೊಚ್ಚಿ, ಡಿಸೆಂಬರ್ 30: ಶಬರಿಮಲೆಯಲ್ಲಿ ಮಕರವಿಳಕ್ಕು ಅವಧಿಯಲ್ಲಿ ಭಕ್ತರು ನೀಡುವ ರಿಯಲ್ ಟೈಮ್ ಆರ್ಟಿ-ಲ್ಯಾಂಪ್ ಮತ್ತು ಎಕ್ಸ್ಪ್ರೆಸ್ ನ್ಯಾಟ್ ಕೋವಿಡ್ ಪರೀಕ್ಷೆಯ ಪ್ರಮಾಣಪತ್ರಗಳನ್ನು ಕೂಡ ಸ್ವೀಕರಿಸಬೇಕು ಎಂದು ಕೇರಳ ಹೈಕೋರ್ಟ್ ಸೂಚನೆ ನೀಡಿದೆ. ಇದುವರೆಗೂ ಕೇರಳ ಸರ್ಕಾರದ ಉನ್ನತ ಮಟ್ಟದ ಸಮಿತಿಯು ಯಾತ್ರೆಗೆ ಬರುವ ಭಕ್ತರು ಡಿಸೆಂಬರ್ 30ರಿಂದ ಆರ್ಟಿ- ಪಿಸಿಆರ್ ಮಾದರಿಯ ಪರೀಕ್ಷೆಗೆ ಕಡ್ಡಾಯವಾಗಿ ಒಳಪಟ್ಟು ಕೊರೊನಾ ವೈರಸ್ ನೆಗೆಟಿವ್ ವರದಿಯನ್ನು ತರುವಂತೆ ನಿರ್ದೇಶಿಸಿತ್ತು.
'ರಿಯಲ್ ಟೈಮ್ ಆರ್ಟಿ ಲ್ಯಾಂಪ್ ಕೋವಿಡ್ ಟೆಸ್ಟ್ ಕಿಟ್'ಅನ್ನು ಅಧಿಕೃತವಾಗಿ ಉತ್ಪಾದಿಸುವ ಪರವಾನಗಿ ಹೊಂದಿರುವ ಎರ್ನಾಕುಲಂ ಮೂಲದ ಕಂಪೆನಿಯೊಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ನ ದೇವಸ್ವಂ ಪೀಠ ಈ ಆದೇಶ ನೀಡಿದೆ.
ಶಬರಿಮಲೆ: ಡಿ.30 ರಿಂದ 5 ಸಾವಿರ ಭಕ್ತರಿಗೆ ಪ್ರವೇಶ ಅವಕಾಶ
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ಐಸಿಎಂಆರ್) ತನ್ನ ಕೋವಿಡ್ ಪರೀಕ್ಷೆಯ ಉತ್ಪನ್ನವನ್ನು ಅನುಮೋದಿಸಿದೆ ಎಂದು ಕಂಪೆನಿ ಅರ್ಜಿಯಲ್ಲಿ ಹೇಳಿದೆ. ಶಬರಿಮಲೆ ಯಾತ್ರೆಯ ಕುರಿತಾದ ಪರಿಷ್ಕೃತ ಆರೋಗ್ಯ ಸಲಹಾಸೂಚಿ ಕೂಡ ಕೋವಿಡ್-19ರ ಪತ್ತೆಗೆ ರಿಯಲ್ ಟೈಮ್ ಆರ್ಟಿ-ಲ್ಯಾಂಪ್ ಕೋವಿಡ್-19 ಪರೀಕ್ಷೆಯ ಶಿಫಾರಸು ನೀಡಿದೆ ಎಂದು ಅದು ಹೇಳಿತ್ತು. ಇದನ್ನು ಪರಿಗಣಿಸಿರುವ ಹೈಕೋರ್ಟ್ ಪೀಠ, ಆರ್ಟಿ-ಲ್ಯಾಂಪ್ ಪರೀಕ್ಷೆಯ ಜತೆಗೆ, ಆರೋಗ್ಯ ಇಲಾಖೆ ಶಿಫಾರಸು ಮಾಡಿರುವಂತೆ ಎನ್ಎಬಿಎಲ್ ಅನುದಾನಿತ, ಐಸಿಎಂಆರ್ ಅನುಮೋದಿತ ಲ್ಯಾಬೊರೇಟರಿಗಳಲ್ಲಿ ಎಕ್ಸ್ಪ್ರೆಸ್ ನ್ಯಾಟ್ ಪರೀಕ್ಷೆಯ ಪ್ರಮಾಣಪತ್ರ ಕೂಡ ಹಾಜರುಪಡಿಸಬಹುದು ಎಂದು ಆದೇಶದಲ್ಲಿ ತಿಳಿಸಿದೆ.
ಶಬರಿಮಲೆ ಯಾತ್ರೆಗೆ ಆಗಮಿಸುವ ಭಕ್ತರು ನಿಳಕ್ಕಳ್ಗೆ ಬಂದ 48 ಗಂಟೆಗಳ ಒಳಗಾಗಿ ಕೋವಿಡ್ ಪರೀಕ್ಷೆಗೆ ಒಳಗಾಗಿ ನೆಗೆಟಿವ್ ವರದಿ ಪಡೆದುಕೊಳ್ಳಬೇಕಿದೆ. ಆಂಟಿಜೆನ್ ಮಾದರಿಯನ್ನು ಅಂತಿಮ ಪರೀಕ್ಷೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.