ಶಾಲಾ, ಕಾಲೇಜುಗಳಲ್ಲಿ ಮುಷ್ಕರ ಮಾಡುವಂತಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು
ತಿರುವನಂತಪುರಂ, ಫೆಬ್ರವರಿ 26: ಶಾಲಾ, ಕಾಲೇಜುಗಳಲ್ಲಿ ನಡೆಯುವ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಶಾಲೆ ಮತ್ತು ಕಾಲೇಜ್ ಆವರಣಗಳಲ್ಲಿ ತರಗತಿಗಳಿಗೆ ತೊಂದರೆಯಾಗಂತೆ ಮುಷ್ಕರಗಳು, ಜಾಥಾಗಳು ಹಾಗೂ ಘೆರಾವ್ಗಳನ್ನು ನಡೆಸದಂತೆ ಕೇರಳ ಹೈಕೋರ್ಟ್ ಬುಧವಾರ ತೀರ್ಪು ನೀಡಿದೆ.
ಪ್ರತಿಭಟನೆಗಳು ಅಥವಾ ಮುಷ್ಕರಗಳಲ್ಲಿ ಪಾಲ್ಗೊಳ್ಳುವಂತೆ ಯಾರೂ ವಿದ್ಯಾರ್ಥಿಗಳಿಗೆ ಕರೆ ನೀಡುವಂತಿಲ್ಲ. ಇದರಿಂದ ತರಗತಿಗಳು ಸರಾಗವಾಗಿ ನಡೆಯಲು ತೊಂದರೆಯಾಗುತ್ತದೆ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.
ಪಥನಮ್ತಿಟ್ಟ ಜಿಲ್ಲೆಯ ರನ್ನಿ ಎಂಬಲ್ಲಿನ ಎರಡು ಶಾಲೆಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯ ಬಳಿಕ ಹೈಕೋರ್ಟ್ ಈ ಆದೇಶ ಹೊರಡಿಸಿದೆ.
ಹುಬ್ಬಳ್ಳಿ ಸರ್ಕಾರಿ ಶಾಲೆ ಗೋಡೆ ಮೇಲೆ "ಪಾಕಿಸ್ತಾನ ಜಿಂದಾಬಾದ್"
ವಿವಿಧ ವಿದ್ಯಾರ್ಥಿಗಳಿಗೆ ಸಂಘಟನೆಗಳ ರಾಜಕೀಯ ಚಟುವಟಿಕೆಗಳಿಂದ ತರಗತಿಗಳು ನಡೆಸಲಾಗದೆ ತೊಂದರೆಯಾಗಿದೆ. ಹೀಗಾಗಿ ವಿಚಾರವಾಗಿ ನ್ಯಾಯಾಲಯ ಮಧ್ಯಪ್ರವೇಶಿಸಬೇಕು ಎಂದು ಶಾಲೆಗಳು ಮನವಿ ಮಾಡಿದ್ದರು. ಶಾಲಾ ಆವರಣಗಳಲ್ಲಿ ರಾಜಕೀಯ ಚಟುವಟಿಕೆಗಳಿಗೆ ಹೈಕೋರ್ಟ್ ನಿಷೇಧ ವಿಧಿಸಿದ್ದರೂ, ಅದರ ಆದೇಶ ಜಾರಿಯಾಗುತ್ತಿಲ್ಲ ಎಂದು ಶಾಲಾ ಅಧಿಕಾರಿಗಳು ಆರೋಪಿಸಿದ್ದಾರೆ.
ಮುಷ್ಕರ, ಪ್ರತಿಭಟನೆ ಮಾಡಬಾರದು
ಶೈಕ್ಷಣಿಕ ಸಂಸ್ಥೆಗಳಲ್ಲಿನ ಕಾರ್ಯ ಚಟುವಟಿಕೆಗಳಿಗೆ ತೊಂದರೆಯುಂಟು ಮಾಡುವಂತಹ ಪ್ರತಿಭಟನೆಗಳು, ಜಾಥಾಗಳು, ಮುಷ್ಕರ ಅಥವಾ ಘೆರಾವ್ ಹಾಕುವಂತಹ ಯಾವುದೇ ಚಟುವಟಿಕೆಗಳನ್ನು ನಡೆಸುವಂತಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಪ್ರತಿಭಟನೆಗೆ ಕರೆಯುವಂತಿಲ್ಲ
ಶೈಕ್ಷಣಿಕ ಸಂಸ್ಥೆಗಳು ಇರುವುದು ಶಿಕ್ಷಣಕ್ಕಾಗಿ ಮಾತ್ರ. ಇದರ ಆವರಣಗಳು ಮುಷ್ಕರ ಅಥವಾ ಪ್ರತಿಭಟನೆಯ ಸ್ಥಳಗಳಾಗಬಾರದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಹಾಗೆಯೇ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಯಾವ ವಿದ್ಯಾರ್ಥಿಯೂ ಮತ್ತೊಬ್ಬರಿಗೆ ಒತ್ತಡ ಹೇರುವ ಹಕ್ಕು ಹೊಂದಿಲ್ಲ. ಹಾಗೆ ಮಾಡುವುದು ಕಾನೂನು ಬಾಹಿರ ಎಂದು ಪರಿಗಣಿಸಬೇಕಾಗುತ್ತದೆ ಎಂದು ತಿಳಿಸಿದೆ.
ಅಜ್ಜಂಪುರದಲ್ಲಿ ಲೇಟಾಗಿ ಬಂದ ಟೀಚರ್ ಗೆ ವಿದ್ಯಾರ್ಥಿಗಳಿಂದ ಶಿಕ್ಷೆ
ಓದುವ ಹಕ್ಕು ಕಸಿಯುವಂತಿಲ್ಲ
ವಿದ್ಯಾರ್ಥಿಗಳ ಓದುವ ಹಕ್ಕನ್ನು ಅತಿಕ್ರಮಣ ಮಾಡುವ ಹಕ್ಕು ಯಾರಿಗೂ ಇಲ್ಲ. ನ್ಯಾಯಾಲಯವು ನೀಡಿರುವ ಆದೇಶವನ್ನು ಯಾರಾದರೂ ಕಡೆಗಣಿಸಿದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದೆ.
ಪೊಲೀಸರನ್ನೂ ಕರೆಯಬಹುದು
ಒಂದು ವೇಳೆ ಅಂತಹ ಘಟನೆಗಳು ಶಾಲೆಗಳಲ್ಲಿ ನಡೆದರೆ, ಜಿಲ್ಲಾ ಶಿಕ್ಷಣ ಅಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ತಪ್ಪು ಮಾಡುವ ವಿದ್ಯಾರ್ಥಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು. ಸಂಸ್ಥೆಯ ಆವರಣದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಅವರ ಪೊಲೀಸರಿಗೂ ಕರೆ ನೀಡಬಹುದು ಎಂದು ತಿಳಿಸಿದೆ.
ಕಾಲೇಜುಗಳಲ್ಲಿ ಪ್ರತಿಭಟನೆ ಮಾಡುವಂತಿಲ್ಲ
ಇದೇ ರೀತಿಯ ಕ್ರಮಗಳನ್ನು ಕಾಲೇಜು ಆವರಣಗಳಲ್ಲಿಯೂ ತೆಗೆದುಕೊಳ್ಳುವಂತೆ ಕೋರ್ಟ್ ತಿಳಿಸಿದೆ. ಆದರೆ ಕಾಲೇಜು ಆವರಣಗಳಲ್ಲಿ ಶಾಂತಿಯುತ ಚರ್ಚೆಗಳು ಮತ್ತು ಯಾವುದೇ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಗಳ ಹಂಚಿಕೆಯನ್ನು ಮಾಡಿಕೊಳ್ಳಬಹುದಾಗಿದೆ. ಹಾಗೆಂದು ಇದು ವಿದ್ಯಾರ್ಥಿಗಳಿಗೆ ತೊಂದರೆಯುಂಟು ಮಾಡುವಂತೆ ಇರುವಂತಿಲ್ಲ ಅಥವಾ ಮುಷ್ಕರಕ್ಕೆ ಎಡೆಮಾಡಿಕೊಡುವಂತಿಲ್ಲ ಎಂದು ಕೋರ್ಟ್ ತಿಳಿಸಿದೆ.