ಶಬರಿಮಲೆ ಬೆಲ್ಲ ವಿವಾದ: ಅರ್ಜಿದಾರರಲ್ಲಿ 'ಹಲಾಲ್' ಅರ್ಥ ಕೇಳಿದ ಹೈಕೋರ್ಟ್
ತಿರುವನಂತಪುರಂ, ನವೆಂಬರ್ 24: ಶಬರಿಮಲೆಯಲ್ಲಿ ಅರಾವಣ ಮತ್ತು ಅಪ್ಪಂ ತಯಾರಿಕೆಗೆ 'ಹಲಾಲ್ ಬೆಲ್ಲ'ವನ್ನು ಬಳಸಲಾಗಿದೆ ಎಂಬ ವರದಿಗಳು ಆಗುತ್ತಿದ್ದಂತೆ ಈ ವಿಚಾರವು ಹೈಕೋರ್ಟ್ ಮೆಟ್ಟಿಲು ಏರಿದೆ. ಹಿಂದೂ ಸಂಘಟನೆಯೊಂದು ಹಲಾಲ್ ಬೆಲ್ಲದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಕೇರಳ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ಆದರೆ ಈ ಅರ್ಜಿದಾರರು ಮೊದಲು ಹಲಾಲ್ ಅರ್ಥ ಏನೆಂದು ನಮಗೆ ಪ್ರತಿಕ್ರಿಯೆ ನೀಡಬೇಕು ಎಂದು ಕೇರಳ ಹೈಕೋರ್ಟ್ ಅರ್ಜಿದಾರರಿಗೆ ಹೇಳಿದೆ. ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರನ್ ಮತ್ತು ಪಿ ಜಿ ಅಜಿತ್ಕುಮಾರ್ ಅವರಿದ್ದ ವಿಭಾಗೀಯ ಪೀಠವು, "ಅರ್ಜಿದಾರರ ಪ್ರಕಾರ 'ಹಲಾಲ್' ಪದದ ಸ್ಪಷ್ಟವಾದ ಅರ್ಥ ಏನು," ಎಂದು ಅರ್ಜಿದಾರರ ಪರ ವಕೀಲರನ್ನು ಪ್ರಶ್ನಿಸಿದೆ.
ಶಬರಿಮಲೆಯಲ್ಲಿ ಅರಾವಣ ಮತ್ತು ಅಪ್ಪಂ ತಯಾರಿಕೆಗೆ 'ಹಲಾಲ್ ಬೆಲ್ಲ'ವನ್ನು ಬಳಸಲಾಗಿದೆ ಎಂಬ ವರದಿಗಳು ಆಗುತ್ತಿದ್ದಂತೆ ಈ ವಿಚಾರವು ಭಾರೀ ವಿವಾದಕ್ಕೆ ಕಾರಣವಾಗಿದೆ. ಶಬರಿಮಲೆಯ ಗೋದಾಮುಗಳಲ್ಲಿ ಹಲಾಲ್ ಸೀಲ್ ಇರುವ ಬೆಲ್ಲದ ಪ್ಯಾಕೆಟ್ಗಳನ್ನು ಸಂಗ್ರಹ ಮಾಡಲಾಗಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದೆ.
ಒಂದೆಡೆ ಹಲಾಲ್ ಆಹಾರದ ಗುಣಮಟ್ಟದ ಬಗ್ಗೆ ಚರ್ಚೆ ನಡೆಯುತ್ತಿರುವಾಗ, ಶಬರಿಮಲೆಯಲ್ಲಿ ಹಲಾಲ್ ಬೆಲ್ಲದ ಬಳಕೆಗೆ ಹಿಂದೂ ಐಕ್ಯವೇದಿ ವಿರೋಧ ವ್ಯಕ್ತಪಡಿಸಿದೆ. ಹಲಾಲ್ ಬೆಲ್ಲ ಬಳಕೆಗೆ ವಿರೋಧ ವ್ಯಕ್ತಪಡಿಸಿ ಮಾತನಾಡಿದ ಹಿಂದೂ ಐಕ್ಯವೇದಿ ಅಧ್ಯಕ್ಷೆ ಕೆ ಪಿ ಶಶಿಕಲಾ, "ಹಲಾಲ್ ಆದ ವಸ್ತುವನ್ನು ಬಳಸಿ ಪ್ರಸಾದ ತಯಾರಿ ಮಾಡುವುದು ಭಕ್ತರಿಗೆ ಹಾಗೂ ದೇವರಿಗೆ ಒಂದು ಸವಾಲು. ಈ ವಿಚಾರವಾಗಿ ದೇವಸ್ವಂ ಮಂಡಳಿ ಸ್ಪಷ್ಟಣೆಯನ್ನು ನೀಡಬೇಕು," ಎಂದು ಆಗ್ರಹ ಮಾಡಿದ್ದಾರೆ.
ವಿವಾದಕ್ಕೆ ಕಾರಣವಾದ ಶಬರಿಮಲೆಯಲ್ಲಿ ಕಂಡ 'ಹಲಾಲ್ ಬೆಲ್ಲ'
"ಹಾಗೆಯೇ ಈ ಗಂಭಿರ ಅಪರಾಧವನ್ನು ನಾವು ಒಪ್ಪಿಕೊಂಡು ಸುಮ್ಮನೆ ಬಿಡಲು ಸಿದ್ಧರಿಲ್ಲ," ಎಂದು ಕೂಡಾ ಶಶಿಕಲಾ ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ದೇವಸ್ವಂ ಬೋರ್ಡ್ನ ಹಿರಿಯ ಅಧಿಕಾರಿಗಳು, "ಶಬರಿಮಲೆಯಲ್ಲಿ ಹಲಾಲ್ ಬೆಲ್ಲವನ್ನು ಬಳಸಲಾಗಿಲ್ಲ," ಎಂದು ಸ್ಪಷ್ಟಣೆಯನ್ನು ನೀಡಿದ್ದಾರೆ. "ಮಹಾರಾಷ್ಟ್ರದ ವರ್ಧಮಾನ ಗ್ರೂಪ್ ಈ ಹಿಂದೆ ಬೆಲ್ಲವನ್ನು ಒದಗಿಸುತ್ತಿತ್ತು. ಆ ಬಳಿಕ ಅವರ ಕಾಂಟ್ರಾಕ್ಟ್ ಅವಧಿ ಕೊನೆಯಾಯಿತು. ಪ್ರಸ್ತುತ ಎಸ್ಪಿ ಸಕ್ಕರೆ ಕಾರ್ಖಾನೆ ನಮಗೆ ಬೆಲ್ಲದ ಹುಡಿಯನ್ನು ಒದಗಿಸುತ್ತಿದ್ದಾರೆ. ಈ ಪ್ಯಾಕೆಟ್ಗಳಲ್ಲಿ ಹಲಾಲ್ ಎಂಬುವುದುನ್ನು ಪ್ರಿಂಟ್ ಮಾಡಿಲ್ಲ," ಎಂದು ತಿಳಿಸಿದ್ದಾರೆ.
'ಹಲಾಲ್' ಪದದ ನಿಖರ ಅರ್ಥ ಹೇಳಿ ಎಂದ ಕೋರ್ಟ್
ಹಲಾಲಾ ಎಂಬುವುದು ಒಂದು ಇಸ್ಲಾಮಿಕ್ ಪರಿಕಲ್ಪನೆಯಾಗಿದೆ. ಆಹಾರ ಪದಾರ್ಥ ಸೇರಿ ಯಾವುದು ನ್ಯಾಯಬದ್ಧವಾದುದು ಮತ್ತು ಅನುಮತಿಸಲಾದುದು ಎಂಬುವುದುನ್ನು ಮಾತ್ರ ಈ ಮೂಲಕ ವ್ಯಾಖ್ಯಾನ ಮಾಡಲಾಗುತ್ತದೆ. ಹಾಗಿರುವಾಗ ಈಗ ಅರ್ಜಿದಾರರು ಯಾವುದನ್ನು ಸ್ಪಷ್ಟವಾಗಿ ವಿರೋಧ ಮಾಡುತ್ತಿದ್ದಾರೆ ಎಂಬ ಬಗ್ಗೆ ಸ್ಪಷ್ಟತೆಯನ್ನು ನೀಡಬೇಕು," ಎಂದು ಅರ್ಜಿದಾರರ ಪರವಾದ ವಕೀಲರನ್ನು ಪ್ರಶ್ನೆ ಮಾಡಿದೆ.
ಇನ್ನು ಈ ಬಗ್ಗೆ ವಿವರಿಸಿದ ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರನ್, "ಹಲಾಲ್ ಪರಿಕಲ್ಪನೆಯಲ್ಲಿ ಕೆಲವು ವಿಷಯವನ್ನು ನಿಷೇಧ ಮಾಡಲಾಗಿದೆ ಎಂದು ಹೇಳಲಾಗುತ್ತದೆ. ಉಳಿದ ವಸ್ತುಗಳು ಹಲಾಲ್ ಎಂಬುವುದು ಆಗಿರುತ್ತದೆ. ಈ ಪ್ರಮಾಣೀಕರಣದ ಪ್ರಕಾರ ಈ ನಿಷೇಧ ಮಾಡಲಾದ ವಸ್ತುಗಳು ಈ ಉತ್ಪನ್ನದಲ್ಲಿ ಇಲ್ಲ ಎಂದು ಹೇಳುತ್ತದೆ. ಈ ಪರಿಕಲ್ಪನೆ ಇಂಗ್ಲೆಂಡ್ನಂತಹ ದೇಶಗಳಲ್ಲಿ ಇದೆ. ಈ ಬಗ್ಗೆ ಸುಪ್ರೀಂ ಕೋರ್ಟ್ನ ಕೆಲವು ತೀರ್ಪುಗಳು ಉಲ್ಲೇಖ ಮಾಡಿದೆ," ಎಂದು ತಿಳಿಸಿದರು. ಹಾಗೆಯೇ ಕೇರಳ ಹೈಕೋರ್ಟ್ ಈ ಪದದ ಬಗ್ಗೆ ಅರ್ಜಿದಾರರಿಗೆ ಇರುವ ಮಾಹಿತಿ ಬಗ್ಗೆ ಪದೇ ಪದೇ ಪ್ರಶ್ನೆ ಮಾಡಿದೆ.
(ಒನ್ಇಂಡಿಯಾ ಸುದ್ದಿ)