ಕೋಮು ಆಧಾರದಲ್ಲಿ ಚುನಾವಣೆ; ಮುಸ್ಲಿಂ ಲೀಗ್ ಶಾಸಕನ ಅನರ್ಹಗೊಳಿಸಿದ ಹೈ ಕೋರ್ಟ್
ತಿರುವನಂತಪುರ, ನವೆಂಬರ್ 9: ಮುಸ್ಲಿಂ ಲೀಗ್ ಶಾಸಕ ಕೆ.ಎಮ್.ಶಾಜಿ ಅವರನ್ನು ಅನರ್ಹಗೊಳಿಸಿ ಕೇರಳ ಹೈ ಕೋರ್ಟ್ ಶುಕ್ರವಾರ ತೀರ್ಪು ನೀಡಿದೆ. ಕೋಮು ಆಧಾರದಲ್ಲಿ 2016ರ ವಿಧಾನಸಭೆ ಚುನಾವಣೆ ಪ್ರಚಾರ ಮಾಡಿದ್ದ ಆರೋಪದಲ್ಲಿ ಅವರ ಶಾಸಕತ್ವ ರದ್ದುಗೊಳಿಸಲಾಗಿದೆ.
ಶಾಜಿ ಪ್ರತಿಸ್ಪರ್ಧಿ ಎಂ.ವಿ.ನಿಕೇಶ್ ಕುಮಾರ್ ಉತ್ತರ ಕೇರಳದ ಕಣ್ಣೂರು ಜಿಲ್ಲೆಯ ಅಳಿಕ್ಕೋಡ್ ಕ್ಷೇತ್ರದಲ್ಲಿ ಭಾರೀ ಅಂತರದಿಂದ ಸೋತಿದ್ದರು. ಆ ನಂತರ ಕೋಮು ವಿಷಯವನ್ನು ಮುಂದಿಟ್ಟುಕೊಂಡು ಶಾಜಿ ಗೆಲುವು ಸಾಧಿಸಿದ್ದಾರೆ ಎಂದು ಆರೋಪಿಸಿ, ಅವರು ಕೋರ್ಟ್ ಮೆಟ್ಟಿಲೇರಿದ್ದರು.
ಶಾಜಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ ಹೈಕೋರ್ಟ್ ನ ಏಕಸದಸ್ಯ ಪೀಠ, ಅಳಿಕ್ಕೋಡ್ ಕ್ಷೇತ್ರದಲ್ಲಿ ಹೊಸದಾಗಿ ಚುನಾವಣೆ ನಡೆಸುವಂತೆ ಸೂಚನೆ ನೀಡಿದೆ. ಇನ್ನು ಸೋತ ಅಭ್ಯರ್ಥಿಗೆ ಕೋರ್ಟ್ ಶುಲ್ಕ ಐವತ್ತು ಸಾವಿರ ರುಪಾಯಿ ಪಾವತಿಸುವಂತೆ ಶಾಜಿ ಅವರಿಗೆ ಸೂಚನೆ ನೀಡಿದೆ.
ಇದೇ ಕ್ಷೇತ್ರದಿಂದ ಎರಡು ಬಾರಿ ಸ್ಪರ್ಧಿಸಿದ್ದ ಶಾಜಿ, ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ.
"ಚುನಾವಣೆ ಸಂದರ್ಭದಲ್ಲಿ ಕೆಲವು ಆಕ್ಷೇಪಾರ್ಹ ವಿಚಾರಗಳನ್ನು ಒಳಗೊಂಡ ನೋಟಿಸ್ ಗಳನ್ನು ಕ್ಷೇತ್ರದಲ್ಲಿ ಹಂಚಲಾಗಿತ್ತು. ಅದು ನಮ್ಮದಲ್ಲ ಎಂದು ಆಗಲೇ ಖಾತ್ರಿ ಪಡಿಸಿದ್ದೆವು. ನಮ್ಮ ಅಭ್ಯರ್ಥಿಯನ್ನು ಕೆಟ್ಟದಾಗಿ ಬಿಂಬಿಸುವ ಯತ್ನ ಅದಾಗಿತ್ತು. ಶಾಜಿ ಏನು ಎಂಬುದು ಎಲ್ಲರಿಗೂ ಗೊತ್ತಿದೆ. ಈ ವಿಚಾರದಲ್ಲಿ ಅವರ ತಪ್ಪಿಲ್ಲ ಎಂದು ಸಾಬೀತುಪಡಿಸಲು ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸುತ್ತೇವೆ" ಎಂದು ಮುಸ್ಲಿಂ ಲೀಗ್ ಪ್ರಧಾನ ಕಾರ್ಯದರ್ಶಿ ಪಿ.ಕೆ.ಕುನ್ಹಾಲಿಕುಟ್ಟಿ ಹೇಳಿದ್ದಾರೆ.