ಸೋಲಾರ್ ಹಗರಣ: ಸಿಬಿಐ ತನಿಖೆಗೆ ಒಪ್ಪಿಸಲು ಕೇರಳ ಸರ್ಕಾರ ನಿರ್ಧಾರ
ತಿರುವನಂತಪುರ,ಜನವರಿ 24: ಸೋಲಾರ್ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಕೇರಳ ಸರ್ಕಾರ ಮುಂದಾಗಿದೆ.
2003 ರಲ್ಲಿ ಟೀಮ್ ಸೋಲಾರ್ ಎಂಬ ಹೆಸರಿನ ನಕಲಿ ಕಂಪನಿ ಇಬ್ಬರು ಮಹಿಳೆಯರನ್ನು ಬಳಸಿಕೊಂಡು ಕೇರಳ ರಾಜ್ಯದಲ್ಲಿ ಸೌರ ವಿದ್ಯುತ್ ಘಟಕಗಳ ಸ್ಥಾಪನೆಗೆ ಮುಂದಾಗಿತ್ತು.
ಈ ಮಹಿಳೆಯರು ಅಂದಿನ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಆಪ್ತ ಸಿಬ್ಬಂದಿ ಜತೆ ಸಂಪರ್ಕ ಸಾಧಿಸಿ, 70 ಮಿಲಿಯನ್ ಮೊತ್ತದ ಯೋಜನೆ ಅನುಷ್ಠಾನಗೊಳಿಸಲು ಮುಂದಾಗಿದ್ದರು.
ಈ ನಕಲಿ ಕಂಪನಿಯ ನಿರ್ದೇಶಕರಾಗಿದ್ದ ಬಿಜು ರಾಧಾಕೃಷ್ಣನ್ ಹಾಗೂ ಸರಿತಾ ನಾಯರ್ ಸಾವಿರಾರು ಹೂಡಿಕೆದಾರರಿಂದ ಹಣ ಸಂಗ್ರಹಿಸಿ, ಪಾಲುದಾರಿಕೆ ಆಮಿಷ ಒಡ್ಡಿದ್ದರು. ಈ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಚಾಂಡಿ ಅವರ ಆಪ್ತ ಟೆನ್ನಿ ಎಂಬಾತನನ್ನು ಬಂಧಿಸಲಾಗಿತ್ತು.
ಕೇರಳದ ಮಾಜಿ ಸಿಎಂ ಚಾಂಡಿ ವಿರುದ್ಧ ರೇಪ್ ಕೇಸ್, ಎಫ್ಐಆರ್
ಕೇರಳದ ವಿಪಕ್ಷ ನಾಯಕರು ಮತ್ತು ಕಾಂಗ್ರೆಸ್ ಪಕ್ಷದ ನಾಯಕರಾದ ಮಾಜಿ ಸಿಎಂ ಉಮ್ಮನ್ ಚಾಂಡಿ, ಕೆ.ಸಿ.ವೇಣುಗೋಪಾಲ್, ಎಪಿ ಅನಿಲ್ ಕುಮಾರ್ ಮತ್ತು ಅಡೂರ್ ಪ್ರಕಾಶ್ ಮತ್ತು ಹಿಬಿ ಈಡನ್ ಮತ್ತು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಎಪಿ ಅಬ್ದುಲ್ಲಾ ಕುಟ್ಟಿ ಸೇರಿದಂತೆ ಹಲವು ನಾಯಕರ ಹೆಸರು ಹಗರಣದಲ್ಲಿ ಕೇಳಿಬಂದಿತ್ತು.
ಸಚಿವರಾದ ಶಿಬು ಬೇಬಿ ಜಾನ್ ಮತ್ತು ಎ.ಪಿ.ಅನಿಲ್ ಕುಮಾರ,ಕಾಂಗ್ರೆಸ್ ಶಾಸಕರಾದ ಹೈಬಿ ಎಡೆನ್ ಮತ್ತು ಎ.ಪಿ.ಅಬ್ದುಲ್ಲಾ ಕುಟ್ಟಿ, ಕಾಂಗ್ರೆಸ್ ನಾಯಕ ಆರ್ಯದನ್ ಶೌಕತ್ತು ಮತ್ತು ಅನಿಲ್ ಕುಮಾರರ ಆಪ್ತ ಕಾರ್ಯದರ್ಶಿಗಳು ಹಗರಣದ ಪ್ರಮುಖ ಅಪರಾಧಿ ಸರಿತಾ ನಾಯರ್ ರನ್ನು ಲೈಂಗಿಕವಾಗಿ ಬಳಸಿಕೊಂಡಿದ್ದರು ಎಂದು ಬಿಜು ಆರೋಪಿಸಿದ್ದರು.
ಪೆರುಂಬವೂರ್ ನಿವಾಸಿ ಸಜ್ಜದ್ ಎನ್ನುವವರು ಸೋಲಾರ್ ಹಗರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದರು. ಮಾಜಿ ಸಿಎಂ ಉಮ್ಮನ್ ಚಾಂಡಿಗೆ ಸರಿತಾ ಮತ್ತು ರಾದಾಕೃಷ್ಣನ್ ಪರಮಾಪ್ತರೆನ್ನುವ ವಿಚಾರ ರಾಜಕೀಯ ಮಹತ್ವವನ್ನು ಪಡೆದಿತ್ತು.
ಹಗರಣದ ಆರೋಪಿಗಳಾಗಿದ್ದ ಸರಿತಾ ಎಸ್ ನಾಯರ್ ಮತ್ತು ಬಿಜು ರಾಧಾಕೃಷ್ಣರಿಗೆ ಜಿಲ್ಲಾ ನ್ಯಾಯಾಲಯ 3 ವರ್ಷ ಜೈಲುಶಿಕ್ಷೆ, 10 ಸಾವಿರ ದಂಡವನ್ನು ವಿಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಟಿ ಶಾಲೂ ಮೆನನ್ ಮತ್ತು ಆಕೆಯ ತಾಯಿಯನ್ನು ಖುಲಾಸೆಗೊಳಿಸಲಾಗಿದೆ.