20,000 ಕೋಟಿ ರೂಪಾಯಿಯ 2ನೇ ಪರಿಹಾರ ಪ್ಯಾಕೇಜ್ ಘೋಷಿಸಿದ ಕೇರಳ ಸರ್ಕಾರ
ತಿರುವನಂತಪುರಂ, ಜೂನ್ 4: ಕೊರೊನಾವೈರಸ್ನ ಎರಡನೇ ಅಲೆಯಲ್ಲಿ ಲಾಕ್ಡೌನ್ ಘೋಷಣೆ ಮಾಡಿದ ಬಳಿಕ ಕೇರಳ ಸರ್ಕಾರ ಎರಡನೇ ಪರಿಹಾರ ಪ್ಯಾಕೇಜ್ ಘೋಷಿಸಿದೆ. 20,000 ಕೋಟಿ ರೂಪಾಯಿಯ ಪರಿಹಾರ ಪ್ಯಾಕೇಜ್ ಇದಾಗಿದೆ. ಶುಕ್ರವಾರ ಮಂಡಿಸಲಾದ ಪರಿಷ್ಕೃತ ಬಜೆಟ್ನಲ್ಲಿ ಈ ಪರಿಹಾರ ಪ್ಯಾಕೇಜ್ ಘೋಷಿಸಲಾಯಿತು.
ಅಧಿಕಾರವನ್ನು ಮರಳಿ ಗಳಿಸಿದ ಪಿಣರಾಯಿ ವಿಜಯ್ ನೇತೃತ್ವದ ಸರ್ಕಾರ ಶುಕ್ರವಾರ ತನ್ನ ಬಜೆಟ್ ಮಂಡನೆ ಮಾಡಿದೆ. ಕೇರಳ ಸರ್ಕಾರದ ಹಣಕಾಸು ಸಚಿವ ಕೆಎನ್ ಬಾಲಗೋಪಾಲ್ ಈ ಬಜೆಟ್ ಮಂಡಿಸಿದ್ದಾರೆ.
ಸುಸ್ಥಿರ ಅಭಿವೃದ್ಧಿ ಸೂಚ್ಯಂಕ; ಕೇರಳಕ್ಕೆ ನಂಬರ್ ಒನ್ ಸ್ಥಾನ
ಈ 20,000 ಕೋಟಿ ರೂಪಾಯಿಯ ಹಣಕಾಸಿನ ನೆರವನ್ನು ಹೊರತುಪಡಿಸಿ ಲಸಿಕೆಗಾಗಿ 1000 ಕೋಟಿ ರೂಪಾಯಿಯನ್ನು 18 ವರ್ಷಕ್ಕಿಂತ ಮೇಲ್ಪಟ್ಟವರ ಉಚಿತ ಲಸಿಕೆಗಾಗಿ ಸರ್ಕಾರ ತೆಗೆದಿಟ್ಟಿದೆ. ಅಲ್ಲದೆ ಉಚಿತ ಲಸಿಕೆ ನೀಡಲು ಪೂರಕ ಸಲಕರಣೆಗಳ ಖರೀದಿಗಾಗಿ 500 ಕೋಟಿ ಹೆಚ್ಚುವರಿಯಾಗಿ ನೀಡಲಾಗುತ್ತದೆ ಎಂದು ತಿಳಿಸಿದೆ.
ಈ ಹಿಂದಿನ ಸರ್ಕಾರ 20,000 ಕೋಟಿಯ ಪರಿಹಾರವನ್ನು ಘೋಷಿಸಿದ್ದು ಅದನ್ನು ಸಂಪೂರ್ಣವಾಗಿ ಬಳಸಿಕೊಳ್ಳಲಾಗಿದೆ ಎಂದು ಈ ಸಂದರ್ಭದಲ್ಲಿ ಹಣಕಾಸು ಸಚಿವರು ತಿಳಿಸಿದ್ದಾರೆ. ಈ ಹೊಸ ಬಜೆಟ್ ಎಲ್ಲರಿಗೂ ಆರೋಗ್ಯ ಮತ್ತು ಆಹಾರವನ್ನು ಖಚಿತಪಡಿಸುತ್ತದೆ ಎಂದಿರುವ ಅವರು, ಕೊರೊನಾ ವೈರಸ್ನ ತೀವ್ರತೆಯನ್ನು ತಗ್ಗಿಸಲು ಹಾಗೂ ಮೂರನೇ ಅಲೆ ರಾಜ್ಯಕ್ಕೆ ಬಾರದಂತೆ ತಡೆಯಲು ಈ ಪರಿಷ್ಕೃತ ಬಜೆಟ್ ಸಹಕಾರಿಯಾಗಲಿದೆ ಎಂದಿದ್ದಾರೆ.
ಕೊರೊನಾ ವೈರಸ್ನ ಮೂರನೇ ಅಲೆಯ ಆತಂಕವನ್ನು ನಾವು ಪರಿಗಣಿಸುತ್ತೇವೆ. ಸದ್ಯಕ್ಕೆ ರಾಜ್ಯದಲ್ಲಿರುವ ಆರೋಗ್ಯ ತುರ್ತು ಪರಿಸ್ಥಿತಿ ಅಭಿವೃದ್ಧಿಯ ದೃಷ್ಟಿಕೋನದಿಂದ ಭವಿಷ್ಯಕ್ಕೆ ಸವಾಲಾಗಲಿದೆ ಎಂದು ಇದೇ ಸಂದರ್ಭದಲ್ಲಿ ಹಣಕಾಸು ಸಚಿವ ಕೆಎನ್ ಬಾಲಗೋಪಾಲ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಮಾಜಿ ಹಣಕಾಸು ಸಚಿವ ಟಿ ಎಂ ಥಾಮಸ್ ಐಸಾಕ್ ಅವರು ಜನವರಿ 15 ರಂದು 2021-22ರ ಹಣಕಾಸು ವರ್ಷದ ಪೂರ್ಣ ಬಜೆಟ್ ಮಂಡಿಸಿದ್ದರು. ಇದಕ್ಕೆ ಕೆಲ ಅಗತ್ಯ ಬದಲಾವಣೆಗಳು ಮತ್ತು ಸೇರ್ಪಡೆಗಳೊಂದಿಗೆ ಬಾಲಗೋಪಾಲ್ ಅವರು 'ಪರಿಷ್ಕೃತ ಬಜೆಟ್' ಮಂಡನೆ ಮಾಡಿದ್ದಾರೆ.