ಸಿಎಎ ವಿರುದ್ಧ ಕೇರಳ ಸರ್ಕಾರ: ವರದಿ ಕೇಳಿದ ರಾಜ್ಯಪಾಲ
ತಿರುವನಂತಪುರಂ, ಜನವರಿ 20: ಪೌರತ್ವ ತಿದ್ದುಪಡಿ ಕಾಯ್ದೆ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವ ಕೇರಳ ಸರ್ಕಾರದ ಬಗ್ಗೆ ವಿವರಣೆ ನೀಡುವಂತೆ ಸ್ಥಳೀಯ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ವರದಿ ಕೇಳಿದ್ದಾರೆ.
ದೇಶದ ಕೆಲವೆಡೆ ವಿರೋಧಕ್ಕೊಳಗಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ ಅಸಂವಿಧಾನಿಕವಾಗಿದ್ದು, ಇದನ್ನು ರದ್ದುಪಡಿಸಬೇಕು ಎಂದು ಕೋರಿ ಕೇರಳ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.
ಸಿಎಎ ಸಂಬಂಧ ಕೇಂದ್ರದ ವಿರುದ್ಧ ಕೇರಳ ಸಿಎಂ ಸಿಡಿಮಿಡಿ
ಕೇರಳ ಸರ್ಕಾರದ ಈ ಕ್ರಮವೇ ಅಸಂವಿಧಾನಿಕ ಎಂದು ಕೇರಳ ರಾಜ್ಯಪಾಲರೇ ಬಹಿರಂಗವಾಗಿ ಟೀಕಿಸಿದ್ದರು. ಈಗ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಆರಿಫ್ ಖಾನ್ ಕೂಡಲೇ ರಾಜ್ಯ ಸರ್ಕಾರದ ಕ್ರಮದ ಬಗ್ಗೆ ವಿವರಣೆ ನೀಡುವಂತೆ ನಿರ್ದೇಶಿಸಿದ್ದಾರೆ.
ಕೇಂದ್ರ ಸರ್ಕಾರದ ಕ್ರಮ ಹೇಗೆ ಅಸಂವಿಧಾನಿಕ ಸುಪ್ರೀಂಕೋರ್ಟ್ನಲ್ಲಿ ಕೇಂದ್ರ ಸರ್ಕಾರದ ಕ್ರಮ ಪ್ರಶ್ನಿಸಲು ರಾಜ್ಯ ಸರ್ಕಾರ ಪರಿದಿ ಏನು?, ಯಾವ ಕಾನೂನು ವ್ಯಾಪ್ತಿಯಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಲಾಗಿದೆ.
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರಾಜ್ಯ ಸರ್ಕಾರ ಪ್ರಶ್ನಿಸಬಹುದೇ? ಹಾಗೂ ರಾಜ್ಯ ಸರ್ಕಾರದ ಈ ಕ್ರಮವನ್ನು ರಾಜ್ಯಪಾಲರಿಗೆ ಏಕೆ ತಿಳಿಸಲಾಗಿಲ್ಲ ಎಂದು ಪತ್ರದಲ್ಲಿ ಪ್ರಶ್ನಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯಪಾಲ ಆರಿಫ್ ಖಾನ್ , ಇದು ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರ ನಡುವಿನ ತಿಕ್ಕಾಟವಲ್ಲ, ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಮಾಡುವ ಕೆಲಸ ಹಾಗೂ ತೆಗೆದುಕೊಳ್ಳುವ ನಿರ್ಣಯಗಳ ಬಗ್ಗೆ ವರದಿ ಸಲ್ಲಿಸುವುದು ಅತಿಮುಖ್ಯ.
ಸುಪ್ರೀಂಕೋರ್ಟ್ ಕೂಡ ಇದನ್ನು ಸ್ಪಷ್ಟಪಡಿಸಿದೆ. ಆದರೆ ಸಿಎಎ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವ ಬಗ್ಗೆ ನನ್ನ ಕಚೇರಿಗೆ ಮಾಹಿತಿ ನೀಡಿಲ್ಲ, ಈ ಕುರಿತು ವರದಿ ಕೇಳಿದ್ದೇನ. ಸರ್ಕಾರ ಉತ್ತರ ನೀಡಲಿ ಬಳಿಕ ನನ್ನ ನಿರ್ಧಾರ ಪ್ರಕಟಿಸುತ್ತೇನೆ ಎಂದು ರಾಜ್ಯಪಾಲರು ತಿಳಿಸಿದ್ದಾರೆ.