ವರದಕ್ಷಿಣೆ ವಿರುದ್ಧ ಜಾಗೃತಿ ಮೂಡಿಸಲು ಕೇರಳ ರಾಜ್ಯಪಾಲರಿಂದ ಉಪವಾಸ ಸತ್ಯಾಗ್ರಹ
ತಿರುವನಂತಪುರಂ, ಜುಲೈ 14: ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಇಂದು ಒಂದು ದಿನದ ಉಪವಾಸ ಆರಂಭಿಸಿದ್ದಾರೆ.
ರಾಜ್ಯದಲ್ಲಿ ವರದಕ್ಷಿಣೆ ಪಿಡುಗಿಗೆ ಹಲವಾರು ಮಂದಿ ಮಹಿಳೆಯರು ತುತ್ತಾಗಿರುವ ಪ್ರಕರಣ ಖಂಡಿಸಿ ಮತ್ತು ಪಿಡುಗಿನ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಒಂದು ದಿನದ ಉಪವಾಸ ಕೈಗೊಂಡಿದ್ದಾರೆ.
ಜತೆಗೆ ರಾಜಧಾನಿಯಲ್ಲಿ ಸಂಜೆ ನಡೆಯಲಿರುವ ಕಾರ್ಯಕ್ರಮದಲ್ಲಿಯೂ ಪಾಲ್ಗೊಳ್ಳಲಿದ್ದಾರೆ. ಕೇರಳದಲ್ಲಿ ಗಾಂಧಿ ತತ್ವ ಅನುಸರಿಸುವ ಹಲವು ಸಂಘಟನೆಗಳು ಜಾಗೃತಿ ಮೂಡಿಸುವ ಉಪವಾಸ ಸತ್ಯಾಗ್ರಹ ಆಯೋಜಿಸಿವೆ.
ಕಳೆದ ತಿಂಗಳೇ ರಾಜ್ಯಪಾಲರು ವರದಕ್ಷಿಣೆ ವಿರೋಧಿ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕನಾಗಿ ಭಾಗವಹಿಸುವುದಾಗಿ ವಾಗ್ಧಾನ ಮಾಡಿದ್ದರು.
ಸಾಮಾಜಿಕ ಸಮಸ್ಯೆಯನ್ನು ಎತ್ತಿ ಹಿಡಿಯಲು ಉಪವಾಸ ಸತ್ಯಾಗ್ರಹ ಕುಳಿತುಕೊಳ್ಳುವ ಜನರ ಜತೆ ಸೇರುವುದಾಗಿಯೂ ಅವರು ತಿಳಿಸಿದ್ದರು. ಕಳೆದ ತಿಂಗಳು ವರದಕ್ಷಿಣೆಗೆ ಬಲಿಯಾದ ಸಂತ್ರಸ್ತೆಯ ಕುಟುಂಬದವರನ್ನು ಭೇಟಿಯಾದ ಬಳಿಕ ಆರಿಫ್ ಮೊಹಮ್ಮದ್ ಖಾನ್ ಈ ಹೇಳಿಕೆ ನೀಡಿದ್ದರು. ವರದಕ್ಷಿಣೆಯ ವಿರುದ್ಧ ಸಾಮಾಜಿಕ ಜಾಗೃತಿ ಮೂಡಿಸುವ ಅವಶ್ಯಕತೆಯನ್ನು ರಾಜ್ಯಪಾಲರು ಒತ್ತಿ ಹೇಳಿದ್ದರು.
ವರದಕ್ಷಿಣೆ ಪಿಡುಗು ರಾಜ್ಯದ ಹಲವಾರು ಮಹಿಳೆಯರ ಆತ್ಮಹತ್ಯೆಗೆ ಕಾರಣವಾಗಿದೆ. ಇದಕ್ಕೆ ಬೇಸರ ವ್ಯಕ್ತಪಡಿಸಿರುವ ಅವರು, ವರದಕ್ಷಿಣೆ ವಿರುದ್ಧ ಸ್ವಯಂಸೇವಕರಾಗಿ ಕೆಲಸ ಮಾಡುವುದಾಗಿ ಕಳೆದ ತಿಂಗಳು ಭರವಸೆ ನೀಡಿದ್ದರು.