ಕೇರಳ ಮೀನುಗಾರರ ಕೊಲೆ ಪ್ರಕರಣ: ಇಟಾಲಿಯನ್ ಅಧಿಕಾರಿಗಳಿಗೆ ರಿಲೀಫ್?
ತಿರುವನಂತಪುರಂ, ಜುಲೈ.03: ಕಳೆದ 2012ರಲ್ಲಿ ಕೇರಳ ಕರಾವಳಿಯಲ್ಲಿ ಇಬ್ಬರು ಮೀನುಗಾರರನ್ನು ಕೊಂದ ಆರೋಪದ ಮೇಲೆ ಇಟಾಲಿಯನ್ ನೌಕಾಪಡೆ ಅಧಿಕಾರಿಗಳ ವಿಚಾರಣೆಯು ಭಾರತದಲ್ಲಿ ನಡೆಯುತ್ತಿಲ್ಲ ಎಂಬುದು ದುರಾದೃಷ್ಟಕರ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬೇಸರ ವ್ಯಕ್ತಪಡಿಸಿದ್ದಾರೆ.
ಸುಪ್ರೀಂಕೋರ್ಟ್ ನಿಂದ ಪ್ರಕರಣವನ್ನು ಹಿಂಪಡೆಯುವಲ್ಲಿ ರಾಜ್ಯದ ಸಮ್ಮತಿಯಿಲ್ಲ ಎಂದು ಸಿಎಂ ಪಿಣರಾಯಿ ವಿಜಯನ್ ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ಇಬ್ಬರು ಭಾರತೀಯ ಮೀನುಗಾರರ ಕೊಲೆಗೆ ಸಂಬಂಧಿಸಿದಂತೆ ಎನ್ರಿಕಾ ಲೆಕ್ಸಿ ಪ್ರಕರಣದಲ್ಲಿ ನೌಕಾಪಡೆ ಸಿಬ್ಬಂದಿ ವಿರುದ್ಧ ಆರೋಪಿಸಲಾಗಿತ್ತು. ಹೇಗ್ ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಮಂಡಳಿ ಮಧ್ಯಸ್ಥಿಕೆಯಲ್ಲಿ ಭಾರತಕ್ಕೆ ಗೆಲುವು ಸಿಕ್ಕಿತ್ತು. ಆದರೆ ನ್ಯಾಯಮಂಡಳಿಯು ನೌಕಾಪಡೆಗಳಿಗೆ ಅಧಿಕೃತ ವಿನಾಯಿತಿ ಹೊಂದಿರುವ ಕಾರಣ ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದಿಲ್ಲ ಎಂದು ಹೇಳಿತ್ತು.
ಇಟಾಲಿಯನ್ ಮಹಿಳೆಗೆ 24/7 ಭದ್ರತೆ ನೀಡಲು ಸೂಚಿಸಿದ್ದೇಕೆ ಹೈಕೋರ್ಟ್?
ಭಾರತದಲ್ಲಿಯೇ ಆರೋಪಿಗಳ ವಿಚಾರಣೆ ನಡೆಯದಿರುವುದು ದೃರಾದೃಷ್ಟಕರವಾಗಿದೆ. ನ್ಯಾಯಮಂಡಳಿಯ ಎದುರು ಸಮರ್ಥವಾಗಿ ನಮ್ಮ ವಾದವನ್ನು ಮಂಡಿಸಲು ಸಾಧ್ಯವಾಗುತ್ತಿಲ್ಲ ಎಂದು ಕೆಲವು ಮಾಧ್ಯಮಗಳು ವರದಿ ಮಾಡುತ್ತಿವೆ. ಹೇಗಾದರೂ ಸರಿಯೇ ಪರಿಹಾರವನ್ನು ಪಡೆಯುವ ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದು ಸಿಎಂ ಪಿಣರಾಯಿ ವಿಜಯನ್ ಆಗ್ರಹಿಸಿದ್ದಾರೆ.
ಕೇಂದ್ರದ ಪ್ರಸ್ತಾವನೆಗೆ ಕೇರಳ ಸರ್ಕಾರದ ವಿರೋಧ
ಕೇರಳ ಮೀನುಗಾರರ ಕೊಲೆ ಪ್ರಕರಣವನ್ನು ಹಿಂಪಡೆಯುವ ಬಗ್ಗೆ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್ ನಲ್ಲಿ ಅಫಿಡಿವೇಟ್ ಸಲ್ಲಿಸಲು ಮುಂದಾಗಿದೆ. ನಾವು ಅದಕ್ಕೆ ಯಾವುದೇ ಕಾರಣಕ್ಕೂ ಬೆಂಬಲ ಸೂಚಿಸುವುದಿಲ್ಲ. ಒಂದು ವೇಳೆ ಕೇಂದ್ರ ಸರ್ಕಾರ ಪ್ರಕರಣವನ್ನು ಹಿಂಪಡೆಯುವುದಕ್ಕೆ ಮುಂದಾದರೆ, ಕೇರಳ ಸರ್ಕಾರವು ಅದಕ್ಕೆ ಒಪ್ಪಿಗೆ ನೀಡುವುದಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತರುತ್ತೇವೆ ಎಂದು ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಜಾಗತಿಕ ಸಮುದ್ರ ನೀತಿ ಉಲ್ಲಂಘನೆ ಬಗ್ಗೆ ಉಲ್ಲೇಖ
ಇಟಾಲಿಯನ್ ನೌಕಾಪಡೆಯ ಇಬ್ಬರು ಅಧಿಕಾರಿಗಳು ಅಂತಾರಾಷ್ಟ್ರೀಯ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ಅಲ್ಲದೇ ಜಾಗತಿಕ ಸಮುದ್ರ ನೀತಿ ಮತ್ತು ಕಾನೂನು ಅಡಿಯಲ್ಲಿ ಭಾರತದ ಸ್ವಾತಂತ್ರ್ಯ ಸಂಚರಣೆಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್ ತಿಳಿಸಿದ್ದಾರೆ.
ಕೇರಳ ಮೀನುಗಾರರ ಕೊಲೆ ಪ್ರಕರಣದ ಹಿನ್ನೆಲೆ ಏನು?
ಕಳೆದ 2012ರ ಫೆಬ್ರವರಿಯಲ್ಲಿ ಭಾರತದ ವಿಶೇಷ ಆರ್ಥಿಕ ವಲಯದಲ್ಲಿ ಕೇರಳ ಕರಾವಳಿಯಲ್ಲಿ ಮೀನುಗಾರಿಕಾ ಹಡಗಿನಲ್ಲಿದ್ದ ಇಬ್ಬರು ಭಾರತೀಯ ಮೀನುಗಾರರನ್ನು ಕೊಲೆ ಮಾಡಲಾಗಿದೆ. ಎಂ.ವಿ ಎನ್ರಿಕಾ ಲೆಕ್ಸಿ - ಇಟಾಲಿಯನ್ ಫ್ಲ್ಯಾಗಡ್ ಆಯಿಲ್ ಟ್ಯಾಂಕರ್ ಹಡಗಿನಲ್ಲಿದ್ದ ಇಬ್ಬರು ಇಟಾಲಿಯನ್ ನೌಕಾಪಡೆಗಳಾದ ಸಾಲ್ವಟೋರ್ ಗಿರೋನ್ ಮತ್ತು ಮಾಸ್ಸಿಮಿಲಿಯಾನೊ ಲ್ಯಾಟೊರೆ ವಿರುದ್ಧ ಭಾರತವು ಆರೋಪಿಸಿತ್ತು. ಈ ಪ್ರಕರಣದ ಬಗ್ಗೆ ನ್ಯಾಯವ್ಯಾಪ್ತಿಯ ವಿಷಯವು ಉಭಯ ದೇಶಗಳ ನಡುವೆ ದೊಡ್ಡ ವಾದವಾಯಿತು.
ಇಟಲಿ ಮತ್ತು ಭಾರತದ ನಡುವಿನ ವಾದಗಳೇನು?
ಭಾರತೀಯ ಜಲ ಪ್ರದೇಶದಲ್ಲೇ ಈ ಘಟನೆಯು ನಡೆದಿದ್ದು, ಕೊಲೆಯಾದ ಇಬ್ಬರು ಮೀನುಗಾರರು ಭಾರತೀಯರೇ ಎಂಬುದು ಭಾರತದ ವಾದವಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಕಾನೂನು ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿತ್ತು. ಆದರೆ ಭಾರತೀಯ ಜಲ ಪ್ರದೇಶದಿಂದ ಹೊರಭಾಗದಲ್ಲಿ ಗುಂಡಿನ ದಾಳಿ ನಡೆಸಿದ್ದು, ಇಬ್ಬರು ನೌಕಾಪಡೆ ಅಧಿಕಾರಿಗಳು ಇಟಲಿಯ ಹಡಗಿನಲ್ಲಿದ್ದರು ಎಂದು ಇಟಲಿ ವಾದಿಸುತ್ತಿದೆ. ಈ ಘಟನೆ ಬಳಿಕ ಇಬ್ಬರು ನೌಕಾಪಡೆ ಸಿಬ್ಬಂದಿಯನ್ನು ಭಾರತಕ್ಕೆ ಕರೆ ತರಲಾಗಿತ್ತು. ತದನಂತರದಲ್ಲಿ ಸುಪ್ರೀಂಕೋರ್ಟ್ ನಿರ್ದಿಷ್ಠ ಷರತ್ತುಗಳನ್ನು ವಿಧಿಸಿ ಇಬ್ಬರು ಅಧಿಕಾರಿಗಳು ಇಟಲಿಗೆ ವಾಪಸ್ ತೆರಳುವುದಕ್ಕೆ ಅನುಮತಿ ನೀಡಿತು.