ಸ್ಮಗಲಿಂಗ್ ಕೇಸ್: ಸ್ವಪ್ನ ಸೇರಿ 8 ಮಂದಿ ಆಸ್ತಿ ಜಪ್ತಿಗೆ ಮುಂದಾದ ಇಡಿ
ತಿರುವನಂತಪುರಂ, ಆ.6: ಕೇರಳದ ಚಿನ್ನದ ಸ್ಮಗಲಿಂಗ್ ಪ್ರಕರಣದಲ್ಲಿ ಮನಿ ಲಾಂಡ್ರಿಂಗ್ ನಡೆದಿರುವುದು ಕಂಡು ಬಂದಿದ್ದರಿಂದ ಜಾರಿ ನಿರ್ದೇಶನಾಲಯವು ಎಫ್ಐಆರ್ ದಾಖಲಿಸಿಕೊಂಡಿದೆ. ಪ್ರಮುಖ ಆರೋಪಿ ಸ್ವಪ್ನ ಸುರೇಶ್ ಸೇರಿದಂತೆ 8 ಮಂದಿ ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದೆ. ಈ ನಡುವೆ ಆರೋಪಿಗಳ ಆಸ್ತಿ, ಬ್ಯಾಂಕ್ ಖಾತೆ ಜಪ್ತಿ ಮಾಡಲು ಇಡಿ ಮುಂದಾಗಿದೆ.
ಕೇರಳದ ಚಿನ್ನದ ಸ್ಮಗಲಿಂಗ್ ಪ್ರಕರಣದ ಆರೋಪಿಗಳ ಮೇಲೆ ಮನಿಲಾಂಡ್ರಿಂಗ್ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಚಿನ್ನದ ಸ್ಮಗಲಿಂಗ್ ಕೇಸಲ್ಲಿ 20ಕ್ಕೂ ಅಧಿಕ ಹವಾಲ ಗ್ಯಾಂಗ್!
ಈ ಪ್ರಕರಣದಲ್ಲಿ ಇಲ್ಲಿ ತನಕ ತಿರುವನಂತಪುರಂನ ರಾಜತಾಂತ್ರಿಕ ಕಚೇರಿಯ ಪಿಆರ್ ಒ ಪಿಎಸ್ ಸರಿತ್ ಕುಮಾರ್ ಸೇರಿದಂತೆ 13 ಮಂದಿಯನ್ನು ಬಂಧಿಸಲಾಗಿದೆ. ಈತನಿಗೆ ಹವಾಲಾ ಗ್ಯಾಂಗ್ ಪರಿಚಯವಿದ್ದು, ಸ್ವಪ್ನ ಸುರೇಶ್ ಮೂಲಕ ಸುಲಭವಾಗಿ ಕಳ್ಳ ಸಾಗಣೆ ನಡೆಸಿದ್ದರು ಎಂದು ತಿಳಿದು ಬಂದಿದೆ.
ಯಾರು ಯಾರಿಗೆ ಆಸ್ತಿ ಜಪ್ತಿ ಭೀತಿ
ಸ್ವಪ್ನ ಸುರೇಶ್, ಸಂದೀಪ್ ನಾಯರ್, ಪಿಎಸ್ ಸರೀತ್ ಅವರ ಬ್ಯಾಂಕ್ ಖಾತೆ ಜಪ್ತಿ ಮಾಡಲು ಇಡಿ ಮುಂದಾಗಿದೆ. ಎಲ್ಲರ ಆಸ್ತಿ ವಿವರಗಳನ್ನು ಕಲೆ ಹಾಕಲಾಗಿದೆ. ಈ ಕುರಿತಂತೆ ಜಾರಿ ನಿರ್ದೇಶನಾಲಯವು ರಿಜಿಸ್ಟ್ರೇಷನ್ ಹಾಗೂ ಕಂದಾಯ ಇಲಾಖೆಗೆ ಪತ್ರ ಬರೆದಿದ್ದು, ಆರೋಪಿಗಳ ಹೆಸರಿನಲ್ಲಿರುವ ನಿವೇಶನ, ನಿರ್ಮಾಣ ಹಂತದ ಕಟ್ಟಡ ಎಲ್ಲದರ ಮಾಹಿತಿ ಕಲೆ ಹಾಕಲು ಸೂಚಿಸಿದೆ.
ಮಲ್ಲಪುರಂನ ಕೆ.ಟಿ ರಮೀಸ್ ಮೊಬೈಲ್ ಪೀಸ್ ಪೀಸ್
ಮಲ್ಲಪುರಂನ ಕೆ.ಟಿ ರಮೀಸ್ ಈ ಪ್ರಕರಣವು ಬೆಳಕಿಗೆ ಬರುವುದಕ್ಕೆ ಮುನ್ನವೇ ತನ್ನ ಬಳಿ ಇದ್ದ ಮೊಬೈಲ್ ಪೀಸ್ ಪೀಸ್ ಮಾಡಿರುವುದು ಕಂಡು ಬಂದಿದೆ. ಇದರಲ್ಲಿ ಹವಾಲ ಗ್ಯಾಂಗಿನ ಎಲ್ಲರ ಹೆಸರು ವಿಳಾಸ ಇತ್ತು ಎಂಬ ಮಾಹಿತಿಯಿದೆ. ಜೂನ್ 30ರಂದೇ ತಮ್ಮ ಬಳಿ ಇದ್ದ ಫೋನ್ ದಾಖಲೆ ಅಳಿಸಿ, ಮೊಬೈಲ್ ಜಜ್ಜಿ ಹಾಕಿದ್ದಾರೆ. ಜುಲೈ 5ರಂದು ವಿಮಾನ ನಿಲ್ದಾಣದಲ್ಲಿ ಚಿನ್ನ ಇದ್ದ ಬ್ಯಾಗೇಜ್ ಪತ್ತೆಯಾಗಿ ಇಡೀ ಸ್ಮಗಲಿಂಗ್, ಹವಾಲ ಕೇಸ್ ಬೆಳಕಿಗೆ ಬಂದಿದೆ. ಸದ್ಯ ಎನ್ಐಎ ವಶದಲ್ಲಿರುವ ರಮೀಶ್ ವಿಚಾರಣೆ ಕೈಗೊಳ್ಳಲು ಕಸ್ಟಮ್ಸ್ ಅಧಿಕಾರಿಗಳು, ಜಾರಿ ನಿರ್ದೇಶನಾಲಯವು ಮುಂದಾಗಿದೆ.
ಕೇರಳದ ಚಿನ್ನ ಸ್ಮಗಲಿಂಗ್: ದುಬೈನಲ್ಲಿ ಆರೋಪಿ ಫೈಜಲ್ ಬಂಧನ
100 ಕೋಟಿ ಅಕ್ರಮ ಕಳ್ಳ ಸಾಗಣೆಗೆ ಸಾಕ್ಷಿ
ರಾಜತಾಂತ್ರಿಕ ಭದ್ರತೆ ಉಪಯೋಗಿಸಿಕೊಂಡು ಸುಮಾರು 100 ಕೋಟಿ ರು ಗೂ ಅಧಿಕ ಮೌಲ್ಯದ ಚಿನ್ನ ಕಳ್ಳ ಸಾಗಣೆ ನಡೆಸಲಾಗಿದೆ ಎಂದು ಕೋರ್ಟಿಗೆ ಎನ್ಐಎ ತಿಳಿಸಿದೆ. ಸರೀತ್, ಸಂದೀಪ್, ಫೈಸಲ್, ಕೆಟಿ ರಮೀಸ್ ಎಲ್ಲರೂ ಈ ಜಾಲದ ಭಾಗವಾಗಿದ್ದು, ಹಲವು ವರ್ಷದಿಂದ ದಂಧೆ ನಡೆಸುತ್ತಿದ್ದಾರೆ ಎಂದು ಎನ್ಐಎ ಹೇಳಿದೆ. ರಮೀಸ್ ಸಹಾಯಕರಾದ ಶರಫುದ್ದೀನ್ ಹಾಗೂ ಶಫೀಕ್ ಎಂಬುವರನ್ನು ಬಂಧಿಸಲಾಗಿದ್ದು, ಹವಾಲಾ ಗ್ಯಾಂಗಿನ ಪೂರ್ಣ ವಿವರ ಕಲೆ ಹಾಕಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಚಿನ್ನದ ಕಳ್ಳಸಾಗಣೆ ನಡೆದಿದ್ದು ಹೇಗೆ?
ದುಬೈನಲ್ಲಿರುವ ಉದ್ಯಮಿ ಫೈಜಲ್ ಫರೀದ್ ದುಬೈನಲ್ಲಿ ಚಿನ್ನ ಖರೀದಿಸಿ ಕೇರಳದ ಕಾನ್ಸುಲೇಟ್ ಕಚೇರಿಗೆ ಕಳುಹಿಸುತ್ತಿದ್ದ ಇಲ್ಲಿ ಸ್ವಪ್ನ ಸುರೇಶ್, ಸರೀತ್ ಅದನ್ನು ಹವಾಲ ಗ್ಯಾಂಗಿಗೆ ಹಂಚುತ್ತಿದ್ದರು. ಕೇರಳದ ಹೊರಗಡೆ ಎಲ್ಲವೂ ಮಾರಾಟವಾಗುತ್ತಿತ್ತು ಎಂದು ತನಿಖೆಯಿಂದ ತಿಳಿದು ಬಂದಿದೆ
ಸರೀತ್ ಕುಮಾರ್ ನಿಂದ ಪಡೆದ ಚಿನ್ನವನ್ನು ಸಂದೀಪ್ ನಾಯರ್ ಪಡೆದುಕೊಂಡು ಮಲ್ಲಪುರಂನ ಕೆ.ಟಿ ರಮೀಸ್ ಗೆ ತಲುಪಿಸುತ್ತಿದ್ದ. ಸದ್ಯ ರಮೀಸ್ ಕಸ್ಟಮ್ ಅಧಿಕಾರಿಗಳ ವಶದಲ್ಲಿದ್ದಾನೆ. ರಮೀಸ್ ಈ ಬ್ಯಾಗೇಜನ್ನು ಮುವತ್ತುಪುಳದ ಪಿ.ಟಿ ಅಬ್ದು, ಮೊಹಮ್ಮದ್ ಶಫಿ, ಎಡಕಂದನ್ ಸೈಥಾಲವಿ, ಜಲಾಲ್ ಮೊಹಮ್ಮದ್ ಗೆ ತಲುಪಿಸುತ್ತಿದ್ದ, ಇವರಿಂದ ಹವಾಲ ಆಪರೇಟರ್ ಗಳು ಇದನ್ನು ಬಳಸುತ್ತಿದ್ದರು ಎಂದು ತಿಳಿದು ಬಂದಿದೆ. ಇತ್ತೀಚಿನ ಎಲ್ಲಾ ಮೊತ್ತವನ್ನು ಕಸ್ಟಮ್ ಅಧಿಕಾರಿಗಳು ಪಡೆದುಕೊಂಡಿದ್ದಾರೆ. ಆದರೆ, ಅಬ್ದುಗೆ ತಲುಪಿದ 78 ಕೆಜಿ ಚಿನ್ನ ಇನ್ನೂ ಎಲ್ಲೂ ಪತ್ತೆಯಾಗಿಲ್ಲ.