ದಾವೂದ್ ಗ್ಯಾಂಗ್ ಜೊತೆ ಕೇರಳದ ಚಿನ್ನದ ಸ್ಮಗ್ಲರ್ಸ್ ನಂಟು
ಕೊಚ್ಚಿ, ಅ. 15: ಕೇರಳ ಚಿನ್ನದ ಕಳ್ಳಸಾಗಣೆ ಆರೋಪಿಗಳಿಗೂ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗ್ಯಾಂಗಿಗೂ ಸಂಪರ್ಕವಿದೆ ಎಂದು ಕೊಚ್ಚಿ ವಿಶೇಷ ನ್ಯಾಯಾಲಯದಲ್ಲಿ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಅಧಿಕಾರಿಗಳು ಹೇಳಿದ್ದಾರೆ.
ದುಬೈನಿಂದ ಕೇರಳಕ್ಕೆ ಬರುವ ಚಿನ್ನವನ್ನು ಕಳ್ಳಸಾಗಣೆ ಮಾಡಲು ಹಾಗೂ ಹವಾಲ ನೆಟ್ವರ್ಕ್ ಬಳಸಿ ಅಕ್ರಮ ಹಣವನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂದು ಗುಪ್ತಚರ ಮಾಹಿತಿಯಿದೆ ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಎನ್ಐಎ ಅಧಿಕಾರಿಗಳು.
ಚಿನ್ನ ಸ್ಮಗಲಿಂಗ್: ಪಿಣರಾಯಿಗೆ ಕ್ಲೀನ್ ಚಿಟ್ ಕೊಟ್ಟ ಎನ್ಐಎ
ಆರೋಪಿಗಳ ಜಾಮೀನು ಅರ್ಜಿಯ ಕುರಿತಂತೆ ನ್ಯಾಯಾಲಯದಲ್ಲಿ ಇಂದು ನದೆದ ವಿಚಾರಣೆಯ ವೇಳೆ ಪ್ರಕರಣದ ಆರೋಪಿಗಳಿಗೆ ದಾವೂದ್ ಇಬ್ರಾಹಿಂ ಅವರ ಕಂಪನಿಯೊಂದಿಗೆ ಸಂಬಂಧವಿದೆ ಎಂದು ಎನ್ಐಎ ಬಹಿರಂಗಪಡಿಸಿದೆ.
ರಾಜತಾಂತ್ರಿಕ ರಕ್ಷಣೆ ಹೊಂದಿರುವ ''ಡಿಪ್ಲೊಮ್ಯಾಟಿಕ್ ಬ್ಯಾಗೇಜ್'' ನಲ್ಲಿದ್ದ 30 ಕೆಜಿ ಚಿನ್ನವನ್ನು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶ ಪಡಿಸಿಕೊಂಡಿದ್ದರು. ಸುಮಾರು 15 ಕೋಟಿ ರೂಪಾಯಿ ಮೌಲ್ಯದ ಈ ಚಿನ್ನ ಅಕ್ರಮ ಸಾಗಣೆಯ ಆರೋಪಿ ರಾಜತಾಂತ್ರಿಕ ಕಚೇರಿಯ ಮಾಜಿ ಸಿಬ್ಬಂದಿ ಸ್ವಪ್ನ ಸುರೇಶ್ ಎಂದು ಆರೋಪಿಸಲಾಗಿದೆ.
ಸಿಬಿಐಗೆ ಎನ್ಐಎ ವರದಿ ನೀಡಿದೆ
ಕಳೆದ ವರ್ಷ ಅಕ್ಟೋಬರ್ನಲ್ಲಿ ಸೆಂಟ್ರಲ್ ಬ್ಯೂರೋ ಆಫ್ ಎಕನಾಮಿಕ್ ಇಂಟೆಲಿಜೆನ್ಸ್ ಎನ್ಐಎಗೆ ವರದಿಯನ್ನು ಸಲ್ಲಿಸಿದೆ. ವರದಿಯನ್ನು ಎನ್ಐಎ ನ್ಯಾಯಾಲಯದ ಮುಂದಿಡಲಾಯಿತು. I ಈ ಪ್ರಕರಣದ 5ನೇ ಆರೋಪಿ ಕೆಟಿ ರಮೀಸ್ ಹಾಗೂ 13ನೇ ಆರೋಪಿ ಷರಾಫುದ್ದೀನ್ ಇಬ್ಬರು ತಾಂಜೇನಿಯಾಕ್ಕೆ ಹಲವು ಬಾರಿ ಭೇಟಿ ನೀಡಿದ್ದಾರೆ. ಅಲ್ಲಿ ದಾವೂದ್ ಜಾಲಕ್ಕೆ ಸಂಬಂಧಿಸಿದ ವ್ಯಕ್ತಿಗಳನ್ನು ಸಂಪರ್ಕಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ ಎಂದು ಎನ್ಐಎ ಹೇಳಿದೆ.
ದಾಖಲೆಗಳನ್ನು ಒದಗಿಸಿದ ಎನ್ಐಎ
ದಾವೂದ್ ಇಬ್ರಾಹಿಂ ಕುರಿತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಬಂಧ ಸಮಿತಿ ಬಿಡುಗಡೆ ಮಾಡಿದ ಪತ್ರ ಮತ್ತು ಯುಎಸ್ ಖಜಾನೆ ಇಲಾಖೆ ಪ್ರಕಟಿಸಿದ ಪರಿಶೀಲನಾ ವರಿಯಂತೆ ಡಿ ಗ್ಯಾಂಗ್ ಆಫ್ರಿಕಾದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಎನ್ಐಎ ನ್ಯಾಯಾಲಯಕ್ಕೆ ತಿಳಿಸಿದೆ. ದಾವೂದ್ ಆಪ್ತ ಫಿರೋಜ್ ಎಂಬ ವ್ಯಕ್ತಿ ತಾಂಜೇನಿಯಾದಲ್ಲಿ ವಜ್ರ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದಾನೆ ಆತನ ಜೊತೆ ರಮೀಸ್ ಸಂಪರ್ಕ ಹೊಂದಿದ್ದಾನೆ.
200 ಕೆ.ಜಿಗೂ ಅಧಿಕ ಚಿನ್ನ ಅಕ್ರಮ ಸಾಗಣೆ
ಯುಎಇ ಕಾನ್ಸುಲೇಟ್ ಅಧಿಕಾರಿಯಾಗಿದ್ದ ಪಿಎಸ್ ಸರೀತ್, ಮಾಜಿ ಉದ್ಯೋಗಿ ಸ್ವಪ್ನ ಸುರೇಶ್, ಸಂದೀಪ್ ನಾಯರ್, ಫೈಜಲ್ ಫರೀದ್ ಅವರ ವಿರುದ್ಧ Unlawful Activities (Prevention) Act ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಎನ್ಐಎ ತನಿಖೆ ಮುಂದುವರೆಸಿದೆ. 2019ರಿಂದ ಇಲ್ಲಿ ತನಕ ಸುಮಾರು 200 ಕೆ.ಜಿಗೂ ಅಧಿಕ ಚಿನ್ನವನ್ನು ಈ ರೀತಿ ಅಕ್ರಮವಾಗಿ ರವಾನೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ವಪ್ನ ಪ್ರಭ ಸುರೇಶ್, ಫಾಜೀಲ್ ಫರೀದ್, ಸಂದೀಪ್ ನಾಯರ್ ಹಾಗೂ ಸರೀತ್ ಕುಮಾರ್ ಅವರ ವಿಚಾರಣೆಗೆ ಅಗತ್ಯವಿದೆ ಎಂದು ಎನ್ಐಎ ಅಧಿಕಾರಿಗಳು ಚಾರ್ಜ್ ಶೀಟ್ ನಲ್ಲಿ ಹೇಳಿದ್ದಾರೆ.
ಹಲವರ ಬಂಧನವಾಗಿದೆ
ಈ ಪೈಕಿ ಫಾಜೀರ್ ಫರೀದ್ ದುಬೈನಲ್ಲಿ ಬಂಧನವಾಗಿದೆ. ಯುಎಇ ಕಾನ್ಸುಲೇಟ್ ಕಚೇರಿಯ ಪಿಆರ್ ಒ ಪಿಎಸ್ ಸರೀತ್ ಮೊದಲಿಗೆ ಬಂಧನವಾಗಿದ್ದು, ಆತನ ಮೂಲಕವೇ ಸ್ವಪ್ನ ಈ ಕೇಸಿನಲ್ಲಿರುವುದು ಪತ್ತೆಯಾಗಿತ್ತು. ಸಿಎಂ ಪಿಣರಾಯಿ ವಿಜಯನ್ ಪ್ರಧಾನ ಕಾರ್ಯದರ್ಶಿ ಶಿವಶಂಕರ್ ಜೊತೆ ಸ್ವಪ್ನ ಸಂಪರ್ಕದಲ್ಲಿರುವುದು ಪತ್ತೆಯಾಯಿತು.
ಪಿಣರಾಯಿ ವಿಜಯನ್ ಅವರಿಗೆ ಕ್ಲೀನ್ ಚಿಟ್
ಪ್ರಕರಣದ ಪ್ರಮುಖ ಆರೋಪಿ ಸ್ವಪ್ನ ಸುರೇಶ್ ಅವರಿಗೆ ಸಿಎಂ ಸಚಿವಾಲಯದ ಅಧೀನದ ಐಟಿ ಇಲಾಖೆಯಲ್ಲಿ ಗುತ್ತಿಗೆ ಆಧಾರಿತ ಹುದ್ದೆಯನ್ನು ಕೊಡಿಸುವಲ್ಲಿ ಶಿವಶಂಕರ್ ಮಹತ್ವದ ಪಾತ್ರ ವಹಿಸಿದ್ದರು ಎಂದು ಆರೋಪ ಕೇಳಿ ಬಂದಿದೆ. ಆರೋಪ ಕೇಳಿ ಬಂದ ಬಳಿಕ ಸಿಎಂ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಶಿವಶಂಕರ್ ಅವರನ್ನು ತೆಗೆದು ಹಾಕಲಾಗಿತ್ತು. ಜೊತೆಗೆ ಸಿಎಂ ಪಿಣರಾಯಿ ವಿಜಯನ್ ಅವರಿಗೂ ಕ್ಲೀನ್ ಚಿಟ್ ಸಿಕ್ಕಿರುವ ಸುದ್ದಿ ಬಂದಿದೆ.
ಕೇರಳ ಸಚಿವ ಕೆಟಿ ಜಲೀಲ್ ವಿಚಾರಣೆ
ಕೇರಳ ಸಚಿವ ಕೆಟಿ ಜಲೀಲ್ ಅವರು ಎಫ್ ಸಿ ಆರ್ ಎ ಉಲ್ಲಂಘನೆ ಮಾಡಿ ಯುಎಇ ಕಾನ್ಸುಲೇಟ್ ಮೂಲಕ ರಾಜತಾಂತ್ರಿಕ ಭದ್ರತೆಯೊಂದಿಗೆ ಪವಿತ್ರ ಖುರಾನ್ ತರೆಸಿಕೊಂಡಿದ್ದರು ಎಂದು ಟಿವಿ ವಾಹಿನಿಯೊಂದು ವಿಡಿಯೋ ಪ್ರಸಾರ ಮಾಡಿತ್ತು. ಈ ಬಗ್ಗೆ ಪ್ರಶ್ನಿಸಲು ಎನ್ಐಎ ಬಯಸಿದ್ದರಿಂದ ಖಾಸಗಿ ವಾಹನದ ಮೂಲಕ ಎನ್ಐಎ ಕಚೇರಿಗೆ ಬಂದು, ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಹೇಳಿಕೆ ದಾಖಲಿಸಿದ್ದರು. ಯುಎಇ ರಾಯಭಾರ ಕಚೇರಿಯಿಂದ ಸಾಮಾಗ್ರಿ ಸಾಗಣಿಕೆಯಲ್ಲಿ ಸ್ವಪ್ನಗೆ ನೆರವಾದ ಆರೋಪವೂ ಇದೆ.