ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಪಿಣರಾಯಿ ವಿಜಯನ್ ಭಾಗಿ: ಆರೋಪಿ ಬಾಯ್ಬಿಟ್ಟ ಸತ್ಯ
ತಿರುವನಂತಪುರಂ, ಮಾರ್ಚ್ 5: ಚುನಾವಣೆಯ ಬಿಸಿ ಹೆಚ್ಚುತ್ತಿರುವ ಕೇರಳದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಚಿನ್ನ ಕಳ್ಳಸಾಗಣೆ ಪ್ರಕರಣ ಪಿಣರಾಯಿ ಅವರಿಗೆ ಉರುಳಾಗಿ ಪರಿಣಮಿಸುವ ಸಾಧ್ಯತೆ ಇದೆ.
ಪ್ರಮುಖ ಆರೋಪಿಗಳ ಪೈಕಿ ಒಬ್ಬರಾದ ಸ್ವಪ್ನಾ ಸುರೇಶ್, ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ವಿಧಾನಸಭೆ ಸ್ಪೀಕರ್ ಪಿ. ಶ್ರೀರಾಮಕೃಷ್ಣನ್ ಮತ್ತು ರಾಜ್ಯದ ಇತರೆ ಮೂವರು ಸಚಿವರು ಭಾಗಿಯಾಗಿದ್ದಾರೆ ಎಂಬ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ ಎಂದು ಸುಂಕ ವಿಭಾಗದ ಮುಖ್ಯಸ್ಥರು ತಿಳಿಸಿದ್ದಾರೆ.
ಅಳಿಯನಿಗೆ ಜೈಲು: ಚುನಾವಣೆ ಸಮೀಪದಲ್ಲಿಯೇ ಕೇರಳ ಸಿಎಂ ಪಿಣರಾಯಿಗೆ ಆಘಾತ
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಯುಎಇಯ ಹಿಂದಿನ ಕಾನ್ಸುಲ್ ಜನರಲ್ ನಡುವೆ ಆಪ್ತ ಬಾಂಧವ್ಯವಿತ್ತು. ಅವರಿಬ್ಬರ ನಡುವೆ ಅಕ್ರಮ ಹಣ ವ್ಯವಹಾರ ನಡೆದಿತ್ತು ಎಂಬುದಾಗಿ ಸ್ವಪ್ನಾ ಸುರೇಶ್ ಬಹಿರಂಗಪಡಿಸಿದ್ದಾರೆ ಎಂದು ಕೇರಳ ಹೈಕೋರ್ಟ್ಗೆ ಸಲ್ಲಿಸಿರುವ ಹೇಳಿಕೆಯಲ್ಲಿ ಸುಂಕ ಆಯುಕ್ತ ಸುಮಿತ್ ಕುಮಾರ್ ತಿಳಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಹಳೆಯ ಪ್ರಕರಣವೊಂದರಲ್ಲಿ ಪಿಣರಾಯಿ ವಿಜಯನ್ ಅವರ ಅಳಿಯ ಮೊಹಮ್ಮದ್ ರಿಯಾಸ್ ಜೈಲು ಪಾಲಾಗಿದ್ದರು. ಈಗ ಚುನಾವಣೆಯ ಸಂದರ್ಭದಲ್ಲಿ ಮತ್ತೊಂದು ಸವಾಲು ಅವರಿಗೆ ಎದುರಾಗಿದೆ.
ಸಿಎಂ ತಂಡದೊಂದಿಗೆ ಬಾಂಧವ್ಯ
ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅವರ ಮುಖ್ಯ ಕಾರ್ಯದರ್ಶಿ ಮತ್ತು ಅವರ ಖಾಸಗಿ ಸಿಬ್ಬಂದಿ ತಂಡ ಒಬ್ಬ ಸದಸ್ಯರ ಜತೆಗೆ ತಮಗೆ ಉತ್ತಮ ಸಂಪರ್ಕವಿತ್ತು ಎಂದು ಸ್ವಪ್ನಾ ಸುರೇಶ್ ತಿಳಿಸಿದ್ದಾರೆ ಎಂಬುದಾಗಿ ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಸಿಎಂ ಸೂಚನೆಯಂತೆ ವ್ಯವಹಾರ
ಮುಖ್ಯಮಂತ್ರಿ ಹಾಗೂ ಸ್ಪೀಕರ್ ಅವರ ಸೂಚನೆಯ ಮೇರೆಗೆ ವಿದೇಶಿ ಕರೆನ್ಸಿಯನ್ನು ಕಳಸಾಗಣೆ ಮಾಡಲಾದ ಚಟುವಟಿಕೆಗಳ ಬಗ್ಗೆ ತಮಗೆ ತಿಳಿದಿದೆ ಎಂಬುದನ್ನು ಸಹ ಸ್ವಪ್ನಾ ಒಪ್ಪಿಕೊಂಡಿದ್ದಾರೆ ಎಂದು ಕಸ್ಟಮ್ಸ್ ಆಯುಕ್ತರು ಹೇಳಿದ್ದಾರೆ.
30 ಕೆಜಿ ಚಿನ್ನದ ಸ್ಮಗ್ಲರ್ ಸ್ವಪ್ನಾಗೂ ಸಿಎಂ ಕಚೇರಿಗೂ ಏನಿದು ನಂಟು?
ಕಾನ್ಸುಲೇಟ್ ನೆರವಿನೊಂದಿಗೆ ಕಳ್ಳಸಾಗಣೆ
'ಕಾನ್ಸುಲೇಟ್ ನೆರವಿನೊಂದಿಗೆ ಮುಖ್ಯಮಂತ್ರಿ ಮತ್ತು ಸ್ಪೀಕರ್ ವಿದೇಶಿ ಕರೆನ್ಸಿಯನ್ನು ಕಳ್ಳಸಾಗಣೆ ಮಾಡಿರುವ ಬಗ್ಗೆ ತಮಗೆ ನಿಖರವಾಗಿ ತಿಳಿದಿದೆ ಎಂದು ಆಕೆ ತಿಳಿಸಿದ್ದಾರೆ. ರಾಜ್ಯ ಸಂಪುಟದ ಮೂವರು ಸಚಿವರು ಹಾಗೂ ಸ್ಪೀಕರ್ ಅವರ ಅಸಹಜ ಹಾಗೂ ಅಕ್ರಮ ಚಟುವಟಿಕೆಗಳ ಬಗ್ಗೆಯೂ ಸ್ಪಷ್ಟವಾಗಿ ವಿವರಿಸಿದ್ದಾರೆ' ಎಂದು ಹೈಕೋರ್ಟ್ಗೆ ಸಲ್ಲಿಸಿರುವ ಹೇಳಿಕೆಯಲ್ಲಿ ವಿವರಿಸಲಾಗಿದೆ.
ಅನುವಾದಕಿಯಾಗಿದ್ದ ಸ್ವಪ್ನಾ
ವಿವಿಧ ಡೀಲ್ಗಳಲ್ಲಿ ಉನ್ನತ ಸ್ಥಾನದಲ್ಲಿರುವ ಪ್ರತಿಷ್ಠಿತ ವ್ಯಕ್ತಿಗಳು ಪಡೆದ ಕಿಕ್ಬ್ಯಾಕ್ ಹಾಗೂ ಅವರ ಭಾಗಿಯ ಕುರಿತು ಸಹ ಸ್ವಪ್ನಾ ಅನೇಕ ಮಾಹಿತಿಗಳನ್ನು ಹೊರಗೆಡವಿದ್ದಾರೆ. ಅರೇಬಿಕ್ ಭಾಷೆಯು ಸುಲಲಿತವಾಗಿದ್ದ ಕಾರಣ, ಮೇಲೆ ಹೇಳಿದ ವ್ಯಕ್ತಿಗಳು ಮತ್ತು ಮಧ್ಯಪ್ರಾಚ್ಯದ ವ್ಯಕ್ತಿಗಳ ನಡುವೆ ಅವರ ಎಲ್ಲ ಮಹತ್ವದ ಮಾತುಕತೆಯಲ್ಲಿಯೂ ತಾವು ಅನುವಾದಕಿಯಾಗಿ ಕೆಲಸ ಮಾಡುವ ಒತ್ತಡವಿದ್ದಿದ್ದರಿಂದ ಇದೆಲ್ಲಕ್ಕೂ ಸಾಕ್ಷಿಯಾಗಿದ್ದಾಗಿ ಸ್ವಪ್ನಾ ತಪ್ಪೊಪ್ಪಿಕೊಂಡಿದ್ದಾರೆ ಎಂದು ಆಯುಕ್ತರು ತಿಳಿಸಿದ್ದಾರೆ.
ಚಿನ್ನ ಸ್ಮಗಲಿಂಗ್: ಜಾಮೀನು ಸಿಕ್ಕರೂ ಜೈಲಿನಲ್ಲೇ ಶಿವಶಂಕರ
ಏನಿದು ಚಿನ್ನ ಸಾಗಣೆ ಪ್ರಕರಣ?
ತಿರುವನಂತಪುರಂನಲ್ಲಿರುವ ಯುಎಇ ಕಾನ್ಸುಲೇಟ್ ಜನರಲ್ನಲ್ಲಿನ ರಾಜತಾಂತ್ರಿಕರ ವಿಳಾಸಕ್ಕೆ 2019ರ ನವೆಂಬರ್ನಿಂದ 2020ರ ಜೂನ್ ನಡುವೆ ಆಮದು ಸರಕುಸಾಗಣೆ ವಾಹನದ ಮೂಲಕ 167 ಕೆಜಿ ತೂಕದಷ್ಟು ಚಿನ್ನ ಕಳ್ಳಸಾಗಣೆಯಾಗಿತ್ತು ಎಂದು ಆರೋಪಿಸಲಾಗಿದೆ. ಕಳೆದ ವರ್ಷ ಜುಲೈ 5ರಂದು ತಿರುವನಂತಪುರಂನ ಯುಎಇ ಕಾನ್ಸುಲೇಟ್ನಲ್ಲಿ ರಾಜತಾಂತ್ರಿಕರ ಚೀಲದಿಂದ 30 ಕೆಜಿ ತೂಕದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡ ಬಳಿಕ ಈ ಬೃಹತ್ ಕಳ್ಳ ವ್ಯವಹಾರದ ಜಾಲ ಬೆಳಕಿಗೆ ಬಂದಿತ್ತು. ಸ್ವಪ್ನಾ ಸುರೇಶ್ ಸೇರಿದಂತೆ ಇದುವರೆಗೂ 15 ಮಂದಿಯನ್ನು ಸುಂಕ ಇಲಾಖೆ ಬಂಧಿಸಿದೆ.