ಚಿನ್ನದ ಸ್ಮಗಲಿಂಗ್ ಕೇಸ್ ಆರೋಪಿ ಸ್ವಪ್ನಗೆ ಎದೆನೋವು, ಆಸ್ಪತ್ರೆಗೆ ದಾಖಲು
ತ್ರಿಸ್ಸೂರ್, ಸೆ. 7: ಕೇರಳದ ಚಿನ್ನ ಸ್ಮಗಲಿಂಗ್ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನ ಸುರೇಶ್ ಆರೋಗ್ಯದಲ್ಲಿ ಏರುಪೇರಾಗಿದ್ದು, ತಕ್ಷಣವೇ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Recommended Video
ಚಿನ್ನ ಸ್ಮಗಲಿಂಗ್ ಕೇಸ್ ಅಲ್ಲದೆ ಕೇರಳ ಪೊಲೀಸರು ದಾಖಲಿಸಿಕೊಂಡಿರುವ ಫೋರ್ಜರಿ ಪ್ರಕರಣದಲ್ಲೂ ಇತ್ತೀಚೆಗೆ ಸ್ವಪ್ನ ಸುರೇಶ್ ಬಂಧನವನ್ನು ದಾಖಲಿಸಿಕೊಳ್ಳಲಾಗಿತ್ತು. ನಕಲಿ ಪ್ರಮಾಣ ಪತ್ರ ನೀಡಿ ಸಿಎಂ ಪಿಣರಾಯಿ ವಿಜಯನ್ ಹೊಂದಿರುವ ಐಟಿ ಇಲಾಖೆಯಡಿಯಲ್ಲಿ ಸ್ವಪ್ನ ಕಾರ್ಯ ನಿರ್ವಹಿಸಲು ಗುತ್ತಿಗೆ ಪಡೆದುಕೊಂಡಿದ್ದು ಹೇಗೆ ಎಂದು ತನಿಖೆ ನಡೆಸಲಾಗಿತ್ತು. ಈಗ ಸ್ವಪ್ನ ಬಂಧನ ಹಾಗೂ ಕಸ್ಟಡಿಗಾಗಿ ಕೋರ್ಟಿಗೆ ಮನವಿ ಸಲ್ಲಿಸಲಾಗಿದೆ.
ಫೋರ್ಜರಿ ಕೇಸಿನಲ್ಲಿ ಸ್ಮಗಲಿಂಗ್ ಆರೋಪಿ ಸ್ವಪ್ನ ಬಂಧನ
ಸದ್ಯ ತ್ರಿಸ್ಸೂರ್ ಜಿಲ್ಲೆಯ ವಿಯ್ಯೂರ್ ಕೇಂದ್ರ ಕಾರಾಗೃಹದಲ್ಲಿದ್ದ ಸ್ವಪ್ನಗೆ ತೀವ್ರವಾದ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೆ ತ್ರಿಸ್ಸೂರ್ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಯುಎಇ ಕಾನ್ಸುಲೇಟ್ ಅಧಿಕಾರಿಯಾಗಿದ್ದ ಪಿಎಸ್ ಸರೀತ್, ಮಾಜಿ ಉದ್ಯೋಗಿ ಸ್ವಪ್ನ ಸುರೇಶ್, ಸಂದೀಪ್ ನಾಯರ್, ಫೈಜಲ್ ಫರೀದ್ ಅವರ ವಿರುದ್ಧ Unlawful Activities (Prevention) Act ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಎನ್ಐಎ ತನಿಖೆ ಮುಂದುವರೆಸಿದೆ. 2019ರಿಂದ ಇಲ್ಲಿ ತನಕ ಸುಮಾರು 200 ಕೆ.ಜಿಗೂ ಅಧಿಕ ಚಿನ್ನವನ್ನು ಈ ರೀತಿ ಅಕ್ರಮವಾಗಿ ರವಾನೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ವಪ್ನ ಪ್ರಭ ಸುರೇಶ್, ಫಾಜೀಲ್ ಫರೀದ್, ಸಂದೀಪ್ ನಾಯರ್ ಹಾಗೂ ಸರೀತ್ ಕುಮಾರ್ ಅವರ ವಿಚಾರಣೆಗೆ ಅಗತ್ಯವಿದೆ ಎಂದು ಎನ್ಐಎ ಅಧಿಕಾರಿಗಳು ಚಾರ್ಜ್ ಶೀಟ್ ನಲ್ಲಿ ಹೇಳಿದ್ದಾರೆ. ಈ ಪೈಕಿ ಫಾಜೀರ್ ಫರೀದ್ ದುಬೈನಲ್ಲಿ ಬಂಧನವಾಗಿದೆ. ಯುಎಇ ಕಾನ್ಸುಲೇಟ್ ಕಚೇರಿಯ ಪಿಆರ್ ಒ ಪಿಎಸ್ ಸರೀತ್ ಮೊದಲಿಗೆ ಬಂಧನವಾಗಿದ್ದು, ಆತನ ಮೂಲಕವೇ ಸ್ವಪ್ನ ಈ ಕೇಸಿನಲ್ಲಿರುವುದು ಪತ್ತೆಯಾಗಿತ್ತು. ಸಿಎಂ ಪಿಣರಾಯಿ ವಿಜಯನ್ ಪ್ರಧಾನ ಕಾರ್ಯದರ್ಶಿ ಶಿವಶಂಕರ್ ಜೊತೆ ಸ್ವಪ್ನ ಸಂಪರ್ಕದಲ್ಲಿರುವುದು ಪತ್ತೆಯಾಯಿತು.