ಕೇರಳ ಚುನಾವಣೆ; ಇದೇ ಮೊದಲ ಬಾರಿ ಮತ ಹಾಕದ ಮಾಜಿ ಸಿಎಂ ಅಚ್ಯುತಾನಂದನ್
ತಿರುವನಂತಪುರಂ, ಏಪ್ರಿಲ್ 7: ಮಂಗಳವಾರ ಕೇರಳ ವಿಧಾನಸಭೆ ಚುನಾವಣೆ ನಡೆದಿದ್ದು, ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಅವರು ಇದೇ ಮೊದಲ ಬಾರಿ ಮತದಾನ ಮಾಡಲು ಸಾಧ್ಯವಾಗಿಲ್ಲ. 97 ವರ್ಷದ ಅಚ್ಯುತಾನಂದನ್ ಅವರು ತಮ್ಮ ಪುತ್ರನ ನಿವಾಸದಲ್ಲಿ ತಂಗಿದ್ದು, ಅವರ ಮತವು ಅಲಪ್ಪುಳದಲ್ಲಿದ್ದ ಕಾರಣ ಮತ ಚಲಾಯಿಸಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.
ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿ ಅಚ್ಯುತಾನಂದನ್ ಹಾಗೂ ಅವರ ಪತ್ನಿಗೆ ಅಂಚೆ ಮತದಾನಕ್ಕೆ ನೋಂದಣಿ ಮಾಡಲು ಸಾಧ್ಯವಾಗಿಲ್ಲ. ಪ್ರಯಾಣದಿಂದಾಗಿ ಮಂಗಳವಾರ ಅವರ ಆರೋಗ್ಯದಲ್ಲಿಯೂ ಕೊಂಚ ಏರುಪೇರಾಗಿದ್ದು, ಮತ ಹಾಕಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ. ಅವರ ಪುತ್ರ ಹಾಗೂ ಮನೆಯ ಸದಸ್ಯರು ಅಂಬಲಾಪುರದಲ್ಲಿ ಮತ ಚಲಾಯಿಸಿದ್ದಾರೆ.
ಎಡರಂಗದ ಕೈಗೆ ಕೇರಳ, ಮುಖ್ಯಮಂತ್ರಿ ಗಾದಿ ಯಾರಿಗೆ?
ಕೇರಳದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾದ ನಂತರ ಅಚ್ಯುತಾನಂದನ್ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.
2016ರ ಚುನಾವಣೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಅಚ್ಯುತಾನಂದನ್ ಅವರಿಗೆ "ಕೇರಳ ಕ್ಯಾಸ್ಟ್ರೊ" ಎಂದು ಬಿರುದು ನೀಡಲಾಗಿತ್ತು. ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಈ ಹುದ್ದೆಯನ್ನು ಅವರಿಗೆಂದೇ ರಚನೆ ಮಾಡಲಾಗಿತ್ತು. ಏಳು ಬಾರಿ ಶಾಸಕರಾಗಿದ್ದ ಅವರು ಈಚೆಗೆ ರಾಜೀನಾಮೆ ನೀಡಿ ತಮ್ಮ ಪುತ್ರನ ಮನೆಯಲ್ಲಿ ನೆಲೆಸಿದ್ದರು.
ಈ ಬಾರಿ ರಾಜ್ಯದಲ್ಲಿ ಬಿರುಸಿನ ಚುನಾವಣಾ ಕಾರ್ಯಗಳು ನಡೆಯುತ್ತಿದ್ದರೂ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಜೊತೆಗೆ ಅವರ ಚಿತ್ರಗಳೂ ಯಾವುದೇ ಪೋಸ್ಟರ್ಗಳಲ್ಲಿ ಕಾಣಿಸಿಕೊಂಡಿರಲಿಲ್ಲ.
1940ರಲ್ಲಿ ತಮ್ಮ ರಾಜಕೀಯ ಜೀವನ ಆರಂಭಿಸಿದ ಅಚ್ಯುತಾನಂದನ್ ಅವರು 1967ರಲ್ಲಿ ಮೊದಲ ಬಾರಿ ಶಾಸಕರಾದರು. 1996ರಲ್ಲಿ ಮುಖ್ಯಮಂತ್ರಿಯಾದರು. 2006ರಲ್ಲಿಯೂ ಮುಖ್ಯಮಂತ್ರಿಯಾಗಿ ಮುಂದುವರೆದು 2011ರಲ್ಲಿ ಎರಡೇ ಸೀಟುಗಳ ಅಂತರದಲ್ಲಿ ಸೋಲು ಕಂಡಿದ್ದರು.