ಹತ್ತಾರು ಜನರ ಜೀವ ಉಳಿಸಿದವ, ಅಪಘಾತದಲ್ಲಿ ಪ್ರಾಣ ಕಳೆದುಕೊಂಡ: ಕೇರಳದಲ್ಲಿ ನಡೆದ ದುರಂತ
ತಿರುವನಂತಪುರಂ, ಅಕ್ಟೋಬರ್ 1: ಕೇರಳದಲ್ಲಿ ಇತ್ತೀಚೆಗೆ ಉಂಟಾದ ಭೀಕರ ಪ್ರವಾಹದಲ್ಲಿ ಅನೇಕರ ಜೀವ ಉಳಿಸುವ ಕಾರ್ಯದಲ್ಲಿ ನೆರವಾಗಿದ್ದ ಯುವ 'ಹೀರೋ' ಜಿನೀಶ್ ಜೆರೋನ್ (24), ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ತಮಿಳುನಾಡಿನ ಕನ್ಯಾಕುಮಾರಿ ಸಮೀಪದ ಉಚ್ಚಕಡದಲ್ಲಿ ಶುಕ್ರವಾರ ಸಂಭವಿಸಿದ ಅಪಘಾತದಲ್ಲಿ ಜಿನೀಶ್ ತೀವ್ರ ಗಾಯಗೊಂಡಿದ್ದರು. ಅವರನ್ನು ತಿರುವನಂಪುರಂನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐಸಿಯುನಲ್ಲಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬೆಳಿಗ್ಗೆ ಕೊನೆಯುಸಿರೆಳೆದರು.
ಕೇರಳದ ನೈಜ ಸೂಪರ್ ಹೀರೋಗಳು ಈ ಮೀನುಗಾರರು
ಅವರ ಸಾವಿಗಾಗಿ ಇಡೀ ಕೇರಳ ಮಿಡಿದಿದೆ. ಜಿನೀಶ್ ಅವರ ಹುಟ್ಟೂರು ತಿರುವನಂತಪುರಂ ಜಿಲ್ಲೆಯ ಪೂಂತುರಾದಲ್ಲಿ ಶೋಕ ಮಡುಗಟ್ಟಿದೆ.
ಕೇರಳದ ಪ್ರವಾಹದಲ್ಲಿ ಸಿಲುಕಿದ್ದ ಸಾವಿರಾರು ಮಂದಿಯ ಜೀವ ಉಳಿಸುವಲ್ಲಿ ಅಲ್ಲಿನ ಕಡತ ತಡಿಯ ಮೀನುಗಾರರ ಪಾತ್ರ ಮಹತ್ವದ್ದಾಗಿತ್ತು. ಕೇಂದ್ರದ ಪಡೆಗಳು ಅಲ್ಲಿಗೆ ಬರುವ ವೇಳೆಗಾಗಲೇ ಮೀನುಗಾರರ ತಂಡಗಳು ಅಪಾಯವನ್ನು ಲೆಕ್ಕಿಸದೆ ಪ್ರವಾಹ ಪೀಡಿತ ಪ್ರದೇಶಗಳಿಗೆ ನುಗ್ಗಿ ಸಂಕಷ್ಟದಲ್ಲಿದ್ದ ಜನರ ಜೀವ ಉಳಿಸಿದ್ದರು.
ಕೇರಳ ಪ್ರವಾಹ: ಎಂಟು ದಿನ ಜತೆಗಿದ್ದರೂ ಇವರ ಗುರುತು ಯಾರಿಗೂ ಸಿಗಲಿಲ್ಲ!
ರಕ್ಷಣಾ ಕಾರ್ಯಾಚರಣೆಯಲ್ಲಿ ಮೀನುಗಾರರ ಸಾಹಸವನ್ನು ಇಡೀ ದೇಶ ಕೊಂಡಾಡಿತ್ತು. ಅಂತಹ ಸಾಹಸಿ ಮೀನುಗಾರರ ತಂಡವೊಂದರ ಸದಸ್ಯರಾಗಿದ್ದ ಜಿನೀಶ್ ಎಂಬ ಬಿಸಿ ರಕ್ತದ ಯುವಕನನ್ನು ಕಳೆದುಕೊಂಡ ಅಲ್ಲಿನ ಜನತೆಯಲ್ಲಿ ದುಃಖ ಮಡುಗಟ್ಟಿದೆ.
ಅಪಘಾತ ಸಂಭವಿಸಿದ್ದು ಹೇಗೆ?
ಮೀನುಗಾರಿಕೆಯ ದೋಣಿಯೊಂದನ್ನು ದುರಸ್ತಿ ಮಾಡಲು ಸ್ನೇಹಿತರ ಜತೆಗೆ ತಮಿಳುನಾಡಿಗೆ ತೆರಳುತ್ತಿದ್ದ ಜಿನೀಶ್ ಓಡಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಬಿದ್ದಿತು. ಆಗ ಕೆಳಗೆ ಬಿದ್ದ ಜಿನೀಶ್ ಅವರ ಮೇಲೆ ಲಾರಿಯೊಂದು ಹರಿದುಹೋಗಿದೆ. ಅಪಘಾತ ನಡೆದು 30 ನಿಮಿಷಗಳಾದರೂ ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ. ಇದರಿಂದ ಜಿನೀಶ್ ವಿಪರೀತ ರಕ್ತಸ್ರಾವಕ್ಕೆ ಒಳಗಾಗಿ ಸಾವನಪ್ಪಬೇಕಾಯಿತು ಎಂದು ಜಿನೀಶ್ ಸ್ನೇಹಿತರು ದೂರಿದ್ದಾರೆ.
ನೂರಾರು ಜನರು ಬಂದರೂ ಜೀವ ಉಳಿಯಲಿಲ್ಲ
ಜಿನೀಶ್ ಅವರದು ಅಪರೂಪವಾದ 'ಬಿ ನೆಗೆಟಿವ್' ರಕ್ತದ ಗುಂಪಾಗಿದ್ದು, ಅಪಘಾತದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ನೂರಾರು ಮಂದಿ ರಕ್ತ ನೀಡುವ ಸಲುವಾಗಿ ಶನಿವಾರ ಆಸ್ಪತ್ರೆ ಎದುರು ಜಮಾಯಿಸಿದ್ದರು.
ವಿಪರೀತ ರಕ್ತಸ್ರಾವಕ್ಕೆ ಒಳಗಾಗಿದ್ದ ಜಿನೀಶ್ ದೇಹವೂ ಲಾರಿ ಹರಿದಿದ್ದರಿಂದ ನಜ್ಜುಗುಜ್ಜಾಗಿತ್ತು. ತನ್ನ ಪ್ರಾಣವನ್ನು ಲೆಕ್ಕಿಸದೆ ಅದೆಷ್ಟೋ ಮಂದಿಯನ್ನು ಉಳಿಸುವ ಮಹಾ ಕಾರ್ಯದಲ್ಲಿ ನೆರವಾಗಿದ್ದ ಜಿನೀಶ್ ಬದುಕುಳಿಯಲಿಲ್ಲ. ತಮಗಾಗಿ ಮಿಡಿದಿದ್ದ ಜಿನೀಶ್ನ ಹೃದಯವನ್ನು ಕಾಪಾಡುವ ಬಯಕೆಯೊಂದಿಗೆ ಕೇರಳದ ಮೂಲೆ ಮೂಲೆಯಿಂದ ಆಸ್ಪತ್ರೆಗೆ ಧಾವಿಸಿದ್ದ ಮನಸ್ಸುಗಳಿಗೆ ದುಃಖವೊಂದೇ ಉಳಿಯಿತು.
ನಡೆಯಲಾಗದಿದ್ದರೂ ಪ್ರವಾಹದ ಬಾಯಿಂದ ದಂಪತಿಯ ರಕ್ಷಿಸಿದ ಕತೆ ಕೇಳಿ!
|
ಸಹಾಯಕ್ಕೆ ಮುಂದಾದ ಮೊದಲ ತಂಡ
ಜಿನೀಶ್, ಕೇರಳದ ಪ್ರವಾಹದಲ್ಲಿ ಅಳಪ್ಪುಳದ ಚೆಂಗನ್ನೂರು ಗ್ರಾಮ ನೀರಿನಲ್ಲಿ ಮುಳುಗಿದ್ದಾಗ ಜನರ ನೆರವಿನ ಮೊರೆಗೆ ಮಿಡಿದು ಮೊದಲು ಅಲ್ಲಿಗೆ ಧಾವಿಸಿ ಜೀವದ ಹಂಗು ತೊರೆದು ನೂರಾರು ಜನರನ್ನು ರಕ್ಷಿಸಿದ 'ಕೋಸ್ಟಲ್ ವಾರಿಯರ್ಸ್' ಮೀನುಗಾರರ ತಂಡದಲ್ಲಿ ಒಬ್ಬರಾಗಿದ್ದರು.
ಆಗಸ್ಟ್ 16ರಂದು ದೋಣಿಯೊಂದನ್ನು ಬಾಡಿಗೆಗೆ ತೆಗೆದುಕೊಂಡು, ಪುಥಿಯಾತುರ, ಪೂಂತುರಾ, ಅಂಜತೆಂಗುವಿನ ಆರು ಜನ ಸ್ನೇಹಿತರೊಂದಿಗೆ ಜಿನೇಶ್, ಚೆಂಗನೂರ್ಗೆ ತೆರಳಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಸೇನಾ ಹೆಲಿಕಾಪ್ಟರ್ಗಳು ಬರುವ ಮೊದಲು, ರಕ್ಷಣಾ ಕಾರ್ಯಕರ್ತರೂ ಹೋಗಲು ಸಾಧ್ಯವಾಗದಂತಹ ಸ್ಥಳಗಳಿಗೆ ಪ್ರಾಣ ಒತ್ತೆಯಿಟ್ಟು ಕೇರಳದ ಮೀನುಗಾರರು ಸಾವಿರಾರು ಮಂದಿಯನ್ನು ರಕ್ಷಿಸಿದ್ದರು.
ಭಾನುವಾರ ನಡೆದ ಅಂತ್ಯಕ್ರಿಯೆ
ಭಾನುವಾರ ನಡೆದ ಅವರ ಅಂತ್ಯಕ್ರಿಯೆಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ಕೇರಳದ ಜನತೆ 'ನೈಜ ಹೀರೋ' ಒಬ್ಬರ ಅಗಲುವಿಕೆಗೆ ಕಣ್ಣೀರಿಟ್ಟರು. ಸಂಸದ ಶಶಿ ತರೂರ್ ಕೂಡ ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಕೇರಳದ ಅನೇಕ ಕಡೆ ಜಿನೀಶ್ ಅವರನ್ನು ಸ್ಮರಿಸುವ ಬೃಹತ್ ಫ್ಲೆಕ್ಸ್, ಬ್ಯಾನರ್ಗಳನ್ನು ಅಳವಡಿಸಲಾಗಿದೆ.
ರಕ್ಷಣಾ ಕಾರ್ಯಕ್ಕಾಗಿ ರಜೆ ರದ್ದು ಮಾಡಿ ಮಾನವೀಯತೆ ಮೆರೆದ ಸೈನಿಕ
ಕೊನೆಗೂ ಭೇಟಿ ಮಾಡಲಾಗಲಿಲ್ಲ
ಚೆಂಗನ್ನೂರ್ನಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ಪೋಷಕರನ್ನು ಜಿನೀಶ್ ಮತ್ತು ಅವರ ಸ್ನೇಹಿತರಿಂದಾಗಿ ಜೀವಸಹಿತ ನೋಡುವಂತಾದ ಲೀನಾ ಸೂಸಾನ್ ಮ್ಯಾಥ್ಯೂ ಗದ್ಗದಿತರಾಗಿದ್ದರು.
'ನೆರೆಯೊಳಗೆ ಬಂಧಿಯಾಗಿದ್ದ ನನ್ನ ಅಪ್ಪ ಅಮ್ಮನನ್ನು ರಕ್ಷಿಸಲು ಈ ಮೀನುಗಾರರ ಹೊರತಾಗಿ ಯಾರೂ ಸಹಾಯ ಮಾಡಿರಲಿಲ್ಲ. ಅವರನ್ನೆಲ್ಲ ಭೇಟಿ ಮಾಡಿ ಕೃತಜ್ಞತೆ ಹೇಳಬೇಕು ಎಂದುಕೊಂಡಿದ್ದೆ. ಆದರೆ, ನನಗೆ ನೋಡಲು ಸಿಕ್ಕಿದ್ದು ಜಿನೀಶ್ನ ಮೃತದೇಹ ಮಾತ್ರ' ಎಂದು ಕಣ್ಣೀರಿಟ್ಟರು ಮ್ಯಾಥ್ಯೂ. ಅಮೆರಿಕದಲ್ಲಿ ನೆಲೆಸಿರುವ ಅವರು, ಪ್ರವಾಹ ಪರಿಸ್ಥಿತಿ ಉಂಟಾದಾಗ ಪೋಷಕರನ್ನು ಹುಡುಕಿಕೊಂಡು ತಾಯ್ನಾಡಿಗೆ ಮರಳಿದ್ದರು.
|
ಕುಟುಂಬಕ್ಕೆ ನೆರವು
ಬಡಕುಟುಂಬದ ಜಿನೀಶ್ ಬೆಳೆದಿದ್ದು ಸಮುದ್ರದ ಅಂಚಿನ ಮನೆಯಲ್ಲಿ. ತಮ್ಮ 15ನೇ ವಯಸ್ಸಿನಿಂದಲೇ ಪೂರ್ಣಪ್ರಮಾಣದಲ್ಲಿ ಮೀನುಗಾರಿಕೆಯ ವೃತ್ತಿಗೆ ತೊಡಗಿಕೊಂಡರು. ಮೂರು ವರ್ಷದ ಹಿಂದೆ ಅವರ ಮನೆ ಸಮುದ್ರದ ಅಲೆಯ ಹೊಡೆತಕ್ಕೆ ಕೊಚ್ಚಿ ಹೋಗಿದ್ದರಿಂದ, ಬಾಡಿಗೆ ಮನೆಯಲ್ಲಿ ವಾಸವಿದ್ದರು.
ಪೋಷಕರು ಮತ್ತು ಇಬ್ಬರು ತಮ್ಮಂದಿರ ಜತೆಗೆ ವಾಸಿಸುತ್ತಿದ್ದ ಜಿನೀಶ್ ಕುಟುಂಬ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ಈ ಕುಟುಂಬಕ್ಕೆ ನೆರವಾಗಲು ಚೆಂಗನ್ನೂರ್ನ ಜನತೆ ಹಣ ಸಂಗ್ರಹಿಸಲಿದ್ದಾರೆ ಎಂದು ಅಲ್ಲಿನ ಶಾಸಕ ಸಾಜಿ ಚೆರಿಯನ್ ತಿಳಿಸಿದ್ದಾರೆ.