ಕೇರಳದಲ್ಲಿ ತಗ್ಗಿದ ಪ್ರವಾಹ, ಸಾವಿನ ಸಂಖ್ಯೆ 76ಕ್ಕೆ ಏರಿಕೆ
ತಿರುವನಂತಪುರ, ಆಗಸ್ಟ್ 12: ಕೇರಳದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೂರಿದ್ದು, ಇಂದು ಪ್ರವಾಹ ಸ್ವಲ್ಪ ಇಳಿಮುಖ ಕಂಡಿದೆ.
ಕಳೆದ ವಾರದಿಂದಲೂ ಕೇರಳದಲ್ಲಿ ಸುರಿದ ಭಾರಿ ಮಳೆಯಿಂದ ವೈನಾಡು, ಕೋಯಿಕ್ಕೋಡ್, ಕೊಚ್ಚಿ, ಕಾಸಗೋಡು, ಕಣ್ಣೂರು, ವಡಕಾರ ಇನ್ನೂ ಹಲವು ಕಡೆ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ವೈನಾಡಿನಲ್ಲಿ ಭಾರಿ ಪ್ರಮಾಣದ ಭೂ ಕುಸಿತ ಉಂಟಾಗಿ ಹಲವರು ಜೀವ ಕಳೆದುಕೊಂಡಿದ್ದಾರೆ.
ಕೇರಳ: ವೈನಾಡುವಿನಲ್ಲಿ ಭೂಕುಸಿತ ಹಲವು ಮಂದಿ ಭೂಸಮಾಧಿ ಶಂಕೆ
ಕೇರಳದಲ್ಲಿ ಸರ್ಕಾರಿ ಅಂಕಿ-ಅಂಶಗಳ ಪ್ರಕಾರ 76 ಮಂದಿ ಸಾವನ್ನಪ್ಪಿದ್ದು, 58 ಮಂದಿ ನಾಪತ್ತೆ ಆಗಿದ್ದಾರೆ. 2.51 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದ್ದು, 2900 ಕ್ಕೂ ಹೆಚ್ಚು ಮನೆಗಳು ಮಳೆಗೆ ಆಹುತಿಯಾಗಿವೆ. ಆಸ್ತಿ-ಪಾಸ್ತಿ, ಬೆಳೆ ಹಾನಿ ಭಾರಿ ಪ್ರಮಾಣದಲ್ಲಿ ಆಗಿದ್ದು, ಅಂಕಿ-ಅಂಶ ದೊರೆಯಲು ಇನ್ನಷ್ಟು ಸಮಯ ಹಿಡಿಯಲಿದೆ.
ಕಳೆದ ವರ್ಷ ಇದೇ ಸಮಯದಲ್ಲಿ ಕೇರಳವು ಭಾರಿ ಪ್ರಮಾಣದ ಪ್ರವಾಹವನ್ನು ಎದುರಿಸಿತ್ತು. ಕಳೆದ ವರ್ಷದ ಪ್ರವಾಹದಲ್ಲಿ 400 ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದರು. ಈಗ ಮತ್ತೆ ಪ್ರವಾಹ ಪರಿಸ್ಥಿತಿ ತಲೆದೂರಿದೆ.
ಮುಳುಗಿದ ಕೇರಳದಲ್ಲಿ ಏರುತ್ತಿದೆ ಸಾವಿನ ಲೆಕ್ಕ; ಜನಜೀವನ ಅಸ್ತವ್ಯಸ್ತ
ರಾಹುಲ್ ಗಾಂಧಿ ಅವರು ಲೋಕಸಭೆಗೆ ಆರಿಸಿ ಬಂದಿರುವ ವೈನಾಡ್ ನಲ್ಲಿ ಭಾರಿ ಪ್ರವಾಹ ಉಂಟಾಗಿದ್ದು, ರಾಹುಲ್ ಗಾಂಧಿ ಅವರು ವೈನಾಡಿಗೆ ಭೇಟಿ ನೀಡಿ ಪ್ರವಾಹ ಸಂತ್ರಸ್ತರನ್ನು ಭೇಟಿ ಮಾಡಿದ್ದಾರೆ.