ಮುಳುಗಿದ ಕೇರಳದಲ್ಲಿ ಏರುತ್ತಿದೆ ಸಾವಿನ ಲೆಕ್ಕ; ಜನಜೀವನ ಅಸ್ತವ್ಯಸ್ತ
ಕೇರಳದಲ್ಲಿ ಭಾರೀ ಮಳೆ ಆಗುತ್ತಿದೆ. ಅದ್ಯಾವ ಪರಿ ಮಳೆ ಅಂದರೆ, ಭಾನುವಾರ ಮಧ್ಯಾಹ್ನ ಮೂರು ಗಂಟೆ ತನಕ ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಕಾರ್ಯಚಟುವಟಿಕೆ ಸ್ಥಗಿತಗೊಳಿಸಲಾಗಿದೆ. ಪೆರಿಯಾರ್ ನದಿಯಲ್ಲಿ ಹಾಗೂ ವಿಮಾನ ನಿಲ್ದಾಣದ ಬಳಿ ಇರುವ ಕಾಲುವೆಯಲ್ಲಿ ನೀರಿನ ಮಟ್ಟ ಏರಿಕೆ ಆಗಿದೆ.
ಮಹಾ ಮಳೆಗೆ ಗುರುವಾರದಿಂದ ಈಚೆಗೆ ಮೃತಪಟ್ಟವರ ಸಂಖ್ಯೆ ಹದಿನೇಳು ದಾಟಿದೆ. ಕೇರಳ ರಾಜ್ಯ ಸರಕಾರ ಹೇಳುವಂತೆ: ಅಧಿಕಾರಿಗಳು ನೀಡುವ ಮಾಹಿತಿ ನೋಡಿದರೆ ಸಾವಿನ ಲೆಕ್ಕ ಮತ್ತೂ ಹೆಚ್ಚಾಗಲಿದೆ. ಈಗಾಗಲೇ ಕೇರಳದಲ್ಲಿ ರೆಡ್ ಅಲರ್ಟ್ ಘೋಷಣೆ ಆಗಿದೆ. ವಯನಾಡ್, ಇಡುಕ್ಕಿ, ಮಲಪ್ಪುರಂ ಹಾಗೂ ಕೋಳಿಕ್ಕೋಡ್ ನಲ್ಲಿ ಭಾರೀ ಮಳೆ ಆಗುವ ಸೂಚನೆ ನೀಡಲಾಗಿದೆ.
ಕೇರಳ: ವೈನಾಡುವಿನಲ್ಲಿ ಭೂಕುಸಿತ ಹಲವು ಮಂದಿ ಭೂಸಮಾಧಿ ಶಂಕೆ
ರಾಜ್ಯ ವಿಪತ್ತು ನಿರ್ವಹಣಾ ಅಧಿಕಾರಿಗಳ ಜತೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಭೆ ನಡೆಸಿದ್ದಾರೆ. ರಕ್ಷಣೆ ಕಾರ್ಯಾಚರಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
* ವಯನಾಡಿನಲ್ಲಿ ಟೀ ಎಸ್ಟೇಟ್ ನ ಕಾರ್ಮಿಕರು ವಾಸವಿದ್ದ ಗುಂಪು ಮನೆಗಳು ಭೂ ಕುಸಿತದಿಂದ ಗುರುವಾರ ಸಂಜೆ ಕೊಚ್ಚಿ ಹೋಗಿವೆ. ಅವಶೇಷಗಳ ಅಡಿಯಲ್ಲಿ ಹಲವರು ಸಿಲುಕಿಕೊಂಡಿದ್ದು, ಇನ್ನೂರು ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ನೂರು ಜನರನ್ನು ರಕ್ಷಣೆ ಮಾಡಲಾಗಿದೆ. ಆ ವೇಳೆ ಎರಡು ದೇಹ ದೊರೆತಿದೆ. ರಕ್ಷಣಾ ಕಾರ್ಯಾಚರಣೆಗೆ ಇನ್ನೂ ಹನ್ನೆರಡು ಗಂಟೆ ಸಮಯ ಬೇಕಾಗಬಹುದು ಎಂದು ಅಧಿಕಾರಿಗಳು ಹೇಳಿದೆ. ಎನ್ ಡಿಆರ್ ಎಫ್ ತಂಡ ಹಾಗೂ ಅಗ್ನಿ ಶಾಮಕ ದಳ ಸ್ಥಳದಲ್ಲಿ ಇದೆ.
* ವಯನಾಡಿಯಲ್ಲಿ ಕಡಿಮೆ ತೀವ್ರತೆಯ ಹಲವು ಭೂ ಕುಸಿತ ಆಗಿರುವುದರಿಂದ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡವರನ್ನು ಹುಡುಕುವುದು ಕಷ್ಟ ಆಗುತ್ತಿದೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ಈ ಪ್ರದೇಶದಲ್ಲಿ ಭೂ ಕುಸಿತ ಆಗಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
* ಕೇರಳದ ಹದಿನಾಲ್ಕು ಜಿಲ್ಲೆ ವ್ಯಾಪ್ತಿಯಲ್ಲಿ ಶಾಲೆ- ಕಾಲೇಜುಗಳನ್ನು ಮುಚ್ಚಲಾಗಿದೆ. ವಿಶ್ವವಿದ್ಯಾಲಯದ ಯಾವ ಪರೀಕ್ಷೆಯೂ ಶುಕ್ರವಾರ ನಡೆದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
* ಮಲಪ್ಪುರಂನ ನೀಲಂಬರ್ ಹಳ್ಳಿಯಲ್ಲಿ ಭೂ ಕುಸಿತದ ಪರಿಣಾಮ ಭೀಕರವಾಗಿದೆ. ಇಲ್ಲಿ ನೀರಿನ ಮಟ್ಟ ತುಂಬ ವೇಗವಾಗಿ ಹೆಚ್ಚುತ್ತಿದೆ. ಸ್ಥಳದಲ್ಲಿ ಸೈನ್ಯ ಹಾಗೂ ಎನ್ ಡಿಆರ್ ಎಫ್ ತಂಡ ಇದೆ.
* ಶುಕ್ರವಾರ ಬೆಳಗ್ಗೆ ಒಂಬತ್ತು ಗಂಟೆ ತನಕ ಮೊದಲಿಗೆ ವಿಮಾನ ಹಾರಾಟ ರದ್ದುಗೊಳಿಸಲಾಗಿತ್ತು. ಆ ನಂತರ ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯ ಚಟುವಟಿಕೆ ಸ್ಥಗಿತಗೊಳಿಸಿ, ಇನ್ನಷ್ಟು ಸಮಯ ವಿಸ್ತರಣೆ ಮಾಡಲಾಗಿದೆ.
ಕೇರಳದಲ್ಲಿ ಭಾರಿ ಮಳೆಯ ರೆಡ್ ಅಲರ್ಟ್: ಶಾಲಾ ಕಾಲೇಜುಗಳಿಗೆ ರಜೆ
* ವಿವಿಧ ಜಿಲ್ಲೆಗಳಲ್ಲಿ ಇಪ್ಪತ್ತೆರಡು ಸಾವಿರಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. ಇಡೀ ರಾಜ್ಯದಲ್ಲಿ ಮುನ್ನೂರಾ ಹದಿನೈದು ನಿರಾಶ್ರಿತರ ಶಿಬಿರ ಇದ್ದರೆ, ವಯನಾಡು ಒಂದರಲ್ಲೇ ನೂರಾ ಐದು ಶಿಬಿರ ಇದೆ.
* ಪಥನಂಥಿಟ್ಟ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ ಹಾಗೂ ತ್ರಿಶೂರ್ ನಲ್ಲಿ ಗುಡುಗು, ಮಿಂಚು ಜತೆಗೆ ಐವತ್ತು ಕಿಲೋಮೀಟರ್ ವೇಗದ ತನಕ ಗಾಳಿ ಬೀಸಬಹುದು ಎನ್ನಲಾಗಿದೆ.
* ಎನ್ ಡಿಆರ್ ಎಫ್ ನ ಇನ್ನೂ ಹತ್ತು ತಂಡವನ್ನು ಕಳುಹಿಸಿಕೊಡುವಂತೆ ಕೇಂದ್ರ ಸರಕಾರವನ್ನು ಕೇರಳ ಕೇಳಿಕೊಂಡಿದೆ. ಆ ಪೈಕಿ ಏಳು ತಂಡ ಶುಕ್ರವಾರ ಕೇರಳ ತಲುಪಬಹುದು. ಈಗಾಗಲೇ ಒಂದು ತಂಡವನ್ನು ಇಡುಕ್ಕಿ ಜಿಲ್ಲೆಯಲ್ಲಿ ನಿಯೋಜಿಸಲಾಗಿದೆ.
* ಜನರ ಸಂವಹನಕ್ಕೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಿ. ಸ್ಥಳಾಂತರಕ್ಕೆ ಅಥವಾ ನಿರಾಶ್ರಿತರ ಶಿಬಿರಗಳಿಗೆ ಸಂಬಂಧಿಸಿದಂತೆ ನೀಡುವ ಸೂಚನೆ- ಸಲಹೆಗಳನ್ನು ಸರಿಯಾಗು ಅನುಸರಿಸಿ ಎಂದು ಸಿಎಂ ಪಿಣರಾಯಿ ವಿಜಯನ್ ಟ್ವೀಟ್ ಮಾಡಿದ್ದಾರೆ.
* ಇನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿನಿಧಿಸುವ ವಯನಾಡು ಲೋಕಸಭಾ ಕ್ಷೇತ್ರದಲ್ಲೇ ಹೆಚ್ಚಿನ ಅನಾಹುತ ಆಗಿದ್ದು, ಪರಿಹಾರ ಕಾರ್ಯಾಚರಣೆ ಬಗ್ಗೆ ಕೇರಳ ಮುಖ್ಯಮಂತ್ರಿ ಹಾಗೂ ಸರಕಾರದ ಪ್ರಮುಖ ಅಧಿಕಾರಿಗಳ ಜತೆ ಮಾತನಾಡಿದ್ದೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.