ಕೇರಳ ವೈದ್ಯರ ಅವಾಂತರ: ಮೂಗಿನ ಬದಲು ಹರ್ನಿಯಾ ಶಸ್ತ್ರಚಿಕಿತ್ಸೆ!
ತಿರುವನಂತಪುರಂ, ಮೇ 22: ಮೂಗಿನ ಸಮಸ್ಯೆಯುಳ್ಳ ಏಳು ವರ್ಷದ ಬಾಲಕನಿಗೆ ಹರ್ನಿಯಾ ಆಪರೇಷನ್ ಮಾಡಿ ರಾದ್ಧಾಂತ ಸೃಷ್ಟಿಸಿದ ಕೇರಳದ ಮಲಪ್ಪುರಂನ ಮಂಜೇರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಹಿರಿಯ ವೈದ್ಯರನ್ನು ಕೇರಳ ಸರ್ಕಾರ ಅಮಾನತು ಮಾಡಿದೆ.
ಮಣಿಪಾಲ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ:ಯುವ ಪತ್ರಕರ್ತೆ ಸಾವು
ಮೂಗಿನಲ್ಲಿ ಗುಳ್ಳೆಯಾಗಿ ಊದಿಕೊಂಡಿದ್ದರಿಂದ ತೀವ್ರ ಸಮಸ್ಯೆ ಎದುರಿಸುತ್ತಿದ್ದ ಮುಹಮದ್ ದಾನಿಶ್ ಎಂಬ ಬಾಲಕನನ್ನು ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅದೇ ಸಂದರ್ಭದಲ್ಲಿ ಆರು ವರ್ಷದ ಧನುಶ್ ಎಂಬ ಬಾಲಕನನ್ನು ಹರ್ನಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆಯ ಸಿಂಧುತ್ವ ಎತ್ತಿ ಹಿಡಿದ ಸುಪ್ರೀಂಕೋರ್ಟ್
ಮಂಗಳವಾರ ಶಸ್ತ್ರಚಿಕಿತ್ಸೆ ನಡೆದು ಆಪರೇಷನ್ ಥಿಯೇಟರ್ನಿಂದ ದಾನಿಶ್ನನ್ನು ಹೊರಕ್ಕೆ ಕರೆತಂದಾಗ ಆತನ ಪೋಷಕರು ಗಾಬರಿಗೊಂಡರು. ಏಕೆಂದರೆ ಮೂಗಿನ ಬದಲು ಆತನ ಹೊಟ್ಟೆಗೆ ತುಂಬಾ ಬ್ಯಾಂಡೇಜ್ ಸುತ್ತಲಾಗಿತ್ತು. ಏನೋ ಯಡವಟ್ಟಾಗಿದೆ ಎಂಬುದನ್ನು ಅರಿತ ಬಾಲಕನ ಪೋಷಕರು ಆಸ್ಪತ್ರೆ ಸಿಬ್ಬಂದಿಯನ್ನು ವಿಚಾರಿಸಿದರು. ಆಗ ಅವರಿಗೆ ಗೊತ್ತಾಗಿದ್ದು, ಒಂದೇ ಹೆಸರು ಕೇಳಿದಂತೆ ಆಗುವ ಇಬ್ಬರು ಬಾಲಕರನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು ಎಂಬುದು.
ಆರಂಭದಲ್ಲಿ ಈ ಘಟನೆಯನ್ನು ಮುಚ್ಚಿಹಾಕಲು ಪ್ರಯತ್ನಗಳು ನಡೆದಿದ್ದವು. ವೈದ್ಯರನ್ನು ಪ್ರಶ್ನಿಸಿದಾಗ ದಾನಿಶ್ಗೂ ಹರ್ನಿಯಾ ಸಮಸ್ಯೆ ಇತ್ತು ಎಂದು ಸಮಜಾಯಿಷಿ ನೀಡಿದ್ದರು. ಅದೃಷ್ಟವಶಾತ್ ಮತ್ತೊಬ್ಬ ಬಾಲಕ ಧನುಶ್ಗೆ ಮೂಗಿನ ಸರ್ಜರಿ ಮಾಡಿರಲಿಲ್ಲ. ಬಳಿಕ ದಾನಿಶ್ ಹಾಗೂ ಧನುಶ್ ಇಬ್ಬರಿಗೂ ಸೂಕ್ತ ಶಸ್ತ್ರಚಿಕಿತ್ಸೆ ನಡೆಸಲಾಯಿತು.
ದಾನಿಶ್ನ ಪೋಷಕರು ತಪ್ಪು ಎಸಗಿದ ವೈದ್ಯರ ವಿರುದ್ಧ ದೂರು ದಾಖಲಿಸಿದ್ದರು. ಈ ಘಟನೆ ಬಗ್ಗೆ ತನಿಖೆಗೆ ರಾಜ್ಯ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಆದೇಶಿಸಿದ್ದರು.
'ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರನ್ನು ಅಮಾನತು ಮಾಡಿದ್ದೇವೆ. ಇದು ಗಂಭೀರ ಲೋಪ. ತನಿಖಾ ವರದಿ ಬಂದ ಬಳಿಕ ಇನ್ನಷ್ಟು ಜನರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು' ಎಂದು ಸಚಿವೆ ತಿಳಿಸಿದ್ದಾರೆ. ತಪ್ಪಾಗಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.