ಕೇರಳದಲ್ಲಿ ಕಾಂಗ್ರೆಸ್ ಗೆದ್ದರೆ ಪ್ರತಿತಿಂಗಳು ಗೃಹಿಣಿಯರ ಖಾತೆಗೆ 6000 ರೂ.
ತಿರುವನಂತಪುರಂ, ಮಾರ್ಚ್ 31: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರ ಅಸ್ತಿತ್ವಕ್ಕೆ ಬಂದರೆ ರಾಜ್ಯದ ಪ್ರತಿಯೊಂದು ಬಡ ಕುಟುಂಬಕ್ಕೆ ಪ್ರತಿ ತಿಂಗಳು 6000 ರೂಪಾಯಿ ನೀಡಲಾಗುವುದು ಎಂದು ಎಐಸಿಸಿ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಆಶ್ವಾಸನೆ ನೀಡಿದ್ದಾರೆ.
ಕೇರಳದ ತ್ರಿಸ್ಸೂರ್ ಜಿಲ್ಲೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ನಡೆಸಿದ ಪ್ರಿಯಾಂಕಾ ಗಾಂಧಿ, ಸಮಾಜದಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಸ್ಮರಿಸಿದರು. 47 ವರ್ಷಗಳಲ್ಲಿ ನಾನು ರಾಜಕಾರಣದ ಕಾರ್ಯದ ಜೊತೆಗೆ ಮನೆಯ ಶುದ್ಧೀಕರಣ, ಅಡುಗೆ, ಮಕ್ಕಳ ಆರೈಕೆಯನ್ನೂ ಮಾಡಿದ್ದೇನೆ. ಪ್ರತಿಯೊಂದು ಮನೆಯಲ್ಲಿ ಗೃಹಿಣಿಯರ ಪಾತ್ರ ಬಹುಮುಖ್ಯವಾಗುತ್ತದೆ ಎಂದರು.
ಮನೋರಮಾ ವಿಎಂಆರ್ ಸಮೀಕ್ಷೆ: ವಿಜಯನ್ ಸರ್ಕಾರ ಅಸ್ತಿತ್ವಕ್ಕೆ!
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರವು ಅಸ್ತಿತ್ವಕ್ಕೆ ಬಂದರೆ 'ನ್ಯಾಯ ಯೋಜನೆ' ಅಡಿಯಲ್ಲಿ ಗೃಹಿಣಿಯರಿಗೆ ಪ್ರತಿ ತಿಂಗಳು 2000 ರೂಪಾಯಿ ಸಹಾಯ ಧನ ಹಾಗೂ ಪ್ರತಿಯೊಂದು ಬಡ ಕುಟುಂಬಕ್ಕೆ 6000 ರೂಪಾಯಿ ಗೌರವ ಧನ ನೀಡಲಾಗುತ್ತದೆ. . ಪ್ರತಿ ವರ್ಷ 72000 ರೂಪಾಯಿ ಹಣವನ್ನು ಅದಕ್ಕಾಗಿ ಮೀಸಲು ಇರಿಸಲಾಗುತ್ತದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
"ಮೊದಲ ಬಾರಿ ಗೃಹಿಣಿಯರನ್ನು ಗುರುತಿಸಲಾಗುತ್ತಿದೆ":
"ಇದು ನೀವು ಸಂತಸಪಡಬೇಕಾದ ವಿಷಯವಾಗಿದ್ದು, ಸಂತಸಪಡಬೇಕಾದ ದಿನವಾಗಿದೆ. ಏಕೆಂದರೆ ರಾಜಕೀಯ ಪಕ್ಷವೊಂದು ಮೊದಲ ಬಾರಿಗೆ ಗೃಹಿಣಿಯರ ಮಹತ್ವವನ್ನು ಅರಿತುಕೊಂಡು ಈ ಬಗ್ಗೆ ಪ್ರಸ್ತಾಪಿಸುತ್ತಿದೆ. ಗೃಹಿಣಿಯರ ಮಹತ್ವವನ್ನು ಸರ್ಕಾರವೊಂದು ಗುರುತಿಸುತ್ತಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.
ನಾನೂ ಒಬ್ಬ ಗೃಹಿಣಿ:
"25 ರಿಂದ 47 ವರ್ಷಗಳವರೆಗೂ ನಾನೂ ಕೂಡಾ ಒಬ್ಬ ಗೃಹಿಣಿಯಾಗಿದ್ದೆನು. ಪ್ರಿಯಾಂಕಾ ಗಾಂಧಿ ಯಾವುದೇ ಕೆಲಸವನ್ನು ಮಾಡಿರುವುದಿಲ್ಲ ಎಂದು ನೀವು ಅಂದುಕೊಂಡಿರಬಹುದು. ಆದರೆ ಅದು ಸುಳ್ಳು. ನಾನೂ ಕೂಡಾ ಎಲ್ಲ ಗೃಹಿಣಿಯರಂತೆ ಮನೆಯನ್ನು ಶುದ್ಧಗೊಳಿಸಿದ್ದೇನೆ, ಮಕ್ಕಳನ್ನು ನೋಡಿಕೊಂಡಿದ್ದೇನೆ ಹಾಗೂ ಅಡುಗೆಯನ್ನು ಮಾಡಿದ್ದೇನೆ" ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.
ರಾಜ್ಯದ 140 ಕ್ಷೇತ್ರಗಳಿಗೆ ಚುನಾವಣೆ
ಕೇರಳದ 140 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಘೋಷಿಸಲಾಗಿದೆ. 2,74,46,039 ಮತದಾರನ್ನು ಹೊಂದಿರುವ ರಾಜ್ಯದಲ್ಲಿ ಏಪ್ರಿಲ್ 6ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 2ರಂದು ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಜೊತೆಗೆ ಕೇರಳ ವಿಧಾನಸಭಾ ಚುನಾವಣೆ ಭವಿಷ್ಯ ಹೊರ ಬೀಳಲಿದೆ.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ಒನ್ ಇಂಡಿಯಾ ಕನ್ನಡ ಟೆಲಿಗ್ರಾಂ ಚಾನಲ್ ಸೇರಿ