ಕೇರಳ: ಎನ್ಡಿಎ ಮೈತ್ರಿ ತೊರೆಯಲು ಸಜ್ಜಾದ ಕೇರಳ ಕಾಂಗ್ರೆಸ್
ತಿರುವನಂತಪುರಂ, ಅ. 25: ರಾಜ್ಯದಲ್ಲಿ ನ್ಯಾಷನಲ್ ಡೆಮೊಕ್ರಾಟಿಕ್ ಅಲೈಯನ್ಸ್ (ಎನ್ಡಿಎ) ಮೈತ್ರಿಯನ್ನು ಮುರಿದುಕೊಳ್ಳಲು ಪಿಸಿ ಥಾಮಸ್ ಬಣದ ಕೇರಳ ಕಾಂಗ್ರೆಸ್ ನಿರ್ಧರಿಸಿದೆ. ಚೇರ್ಮನ್ ಹುದ್ದೆ, ವಿವಿಧ ಬೋರ್ಡ್ ನೇಮಕಾತಿಗೆ ಸಂಬಂಧಿಸಿದಂತೆ ಬಿಜೆಪಿ ನೀಡಿದ್ದ ಭರವಸೆಗಳು ಈಡೇರಿಲ್ಲ ಎಂದು ಪಿಸಿ ಥಾಮಸ್ ಆರೋಪಿಸಿದ್ದಾರೆ.
ಎಎನ್ಐ ಜೊತೆ ಮಾತನಾಡಿದ ಥಾಮಸ್, ಬಿಜೆಪಿ ಜೊತೆ ಈ ಹಿಂದೆ ಆಗಿದ್ದ ಒಪ್ಪಂದದಂತೆ ಕೇರಳ ಕಾಂಗ್ರೆಸ್ ಸದಸ್ಯರಿಗೆ ಸೂಕ್ತ ಮಾನ್ಯತೆ ಸಿಕ್ಕಿಲ್ಲ. ಅಮಿತ್ ಶಾ ನೀಡಿದ್ದ ಆಶ್ವಾಸನೆಯಲ್ಲಿ ಒಂದು ಕೂಡಾ ಈಡೇರಿಲ್ಲ ಎಂದಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಪಿಸಿ ಥಾಮಸ್ ಅವರು ಕಾನೂನು ಸಚಿವಾಲಯದ ರಾಜ್ಯ ಸಚಿವರಾಗಿದ್ದರು.
"ಬಿಜೆಪಿ ಬೇಡಿಕೆಯಂತೆ ಚೆಂಗನೂರು ಕ್ಷೇತ್ರವನ್ನು ಬಿಟ್ಟುಕೊಡಲಾಗಿತ್ತು. ಆದರೆ, ಇದಕ್ಕೆ ಬದಲಾಗಿ ಕೇರಳ ಕಾಂಗ್ರೆಸ್ ಬಳಿ ಇದ್ದ 16 ಹುದ್ದೆಗಳನ್ನು ಕಡಿತಗೊಳಿಸಿ 6ಕ್ಕೆ ಇಳಿಸಲಾಗಿದೆ. ಇಲ್ಲಿ ತನಕ ಯಾವುದೇ ಬದಲಾವಣೆ ಕಂದು ಬಂದಿಲ್ಲ'' ಎಂದಿದ್ದಾರೆ.
2018ರಲ್ಲಿ ಚೆಂಗನೂರಿನಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಶ್ರೀಧರನ್ ಪಿಳೈ ಈಗ ಮಿಜೋರಾಂ ರಾಜ್ಯಪಾಲರಾಗಿದ್ದಾರೆ. ಆ ಉಪ ಚುನಾವಣೆಯಲ್ಲಿ ಪಿಳೈ ಮೂರನೇ ಸ್ಥಾನ ಪಡೆದಿದ್ದರು. ಸಿಪಿಐ ಎಂ ಸಾಜಿ ಚೇರಿಯನ್ ಅವರು ಕಾಂಗ್ರೆಸ್ಸಿನ ಡಿ ವಿಜಯ್ ಕುಮಾರ್ ಅವರನ್ನು 20, 956 ಮತಗಳಿಂದ ಸೋಲಿಸಿದ್ದರು.
Recommended Video
ಕಾಂಗ್ರೆಸ್ ಮೈತ್ರಿಯಿಂದ ಕಾಂಗ್ರೆಸ್ (ಎಂ) ದೂರಾಗಿದ್ದು, ಯುಡಿಎಫ್ ಬಣದಲ್ಲಿ ಕೇರಳ ಕಾಂಗ್ರೆಸ್(ಥಾಮಸ್ ಬಣ) ಸೇರ್ಪಡೆಯಾಗುವ ಸಾಧ್ಯತೆಯಿದೆ.