ಸಚಿವೆಯನ್ನು 'ಕೋವಿಡ್ ರಾಣಿ'ಎಂದು ಅಣಕವಾಡಿ, ಕ್ಷಮೆ ಕೇಳಲು ಒಪ್ಪದ ಕಾಂಗ್ರೆಸ್ ಮುಖಂಡ
ತಿರುವನಂತಪುರಂ, ಜೂನ್ 21: ರಾಜ್ಯ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರನ್ನು 'ಕೋವಿಡ್ ರಾಣಿ'ಎಂದು ಕರೆದಿರುವುದು ವ್ಯಾಪಕ ಟೀಕೆಗೊಳಗಾದರೂ, ಈ ವಿಚಾರದಲ್ಲಿ ಕ್ಷಮೆಯಾಚಿಸಲು ಕೇರಳ ಕಾಂಗ್ರೆಸ್ ಘಟಕದ ಅಧ್ಯಕ್ಷ ಮುಲ್ಲಪಲ್ಲಿ ರಾಮಚಂದ್ರನ್ ನಿರಾಕರಿಸಿದ್ದಾರೆ.
Recommended Video
ಶುಕ್ರವಾರ (ಜೂನ್ 19) ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ರಾಮಚಂದ್ರನ್, "ಕೊಲ್ಲಿ ರಾಷ್ಟ್ರದಿಂದ ರಾಜ್ಯಕ್ಕೆ ಬರುವವರು ಕೋವಿಡ್ ಮುಕ್ತ ಸರ್ಟಿಫಿಕೇಟ್ ಪಡೆಯುವುದನ್ನು ಕಡ್ಡಾಯ ಮಾಡಬೇಕು"ಎಂದು ಆಗ್ರಹಿಸಿದ್ದರು.
ಶಬರಿಮಲೆ ವಿಮಾನ ನಿಲ್ದಾಣಕ್ಕೆ ಕೇರಳ ಸರ್ಕಾರದ ಹಸಿರು ನಿಶಾನೆ
"ರಾಜ್ಯದ ಜನತೆಯ ಆರೋಗ್ಯದ ಬಗ್ಗೆ ಆರೋಗ್ಯ ಸಚಿವೆ ಶೈಲಜಾ ಅವರಿಗೆ ಕಾಳಜಿಯಿಲ್ಲ. ಅವರು ಕೋವಿಡ್ ರಾಣಿ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಕೋಝಿಕ್ಕೋಡ್ ನಲ್ಲಿ ನಿಫಾ ವೈರಸ್ ವೇಳೆಯೂ ಹೀಗೆಯೇ ಕೆಲಸ ಮಾಡಿ, ನಿಫಾ ರಾಜಕುಮಾರಿ ಆಗಲು ಹೊರಟಿದ್ದರು" ಎಂದು ರಾಮಚಂದ್ರನ್ ಹೇಳಿದ್ದರು.
ರಾಮಚಂದ್ರನ್ ಅವರ ಹೇಳಿಕೆ ವ್ಯಾಪಕ ಟೀಕೆಗೊಳಗಾಗಿತ್ತು. ಈ ಬಗ್ಗೆ ಸ್ಪಷ್ಟನೆಯನ್ನು ನೀಡಿರುವ ಅವರು,"ಹೆಣ್ಣನ್ನು ಗೌರವಿಸುವವನು ನಾನು. ನಾನು ಯಾವಾಗಲೂ ಮಹಿಳೆಯರ ಕಲ್ಯಾಣ ಮತ್ತು ಗೌರವಕ್ಕಾಗಿ ಮುಂದೆ ನಿಲ್ಲುವಂತಹ ವ್ಯಕ್ತಿ. ಹೀಗಾಗಿ ನಾನು ಕ್ಷಮೆ ಕೇಳಲ್ಲ" ಎಂದು ಹೇಳಿದ್ದಾರೆ.
"ಕೆಲವೊಂದು ವಿದೇಶಿ ಮಾಧ್ಯದವರು ನಮ್ಮ ಆರೋಗ್ಯ ಸಚಿವೆ ಶೈಲಜಾ ಅವರನ್ನು ರಾಕ್ ಸ್ಟಾರ್ ಎಂದು ಬಣ್ಣಿಸುತ್ತಿದೆ. ನಾನು ಅವರನ್ನು ರಾಣಿ ಎಂದರೆ ಅದರಲ್ಲಿ ತಪ್ಪೇನಿದೆ"ಎಂದು ರಾಮಚಂದ್ರನ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ರಾಷ್ಟ್ರೀಯ ಪಕ್ಷದ ಮುಖಂಡರಾಗಿ ಒಂದು ಹೆಣ್ಣಿನ ಬಗ್ಗೆ ಈ ರೀತಿಯ ಕೀಳು ಮಟ್ಟದ ಹೇಳಿಕೆ ನೀಡಿದ್ದು ತಪ್ಪು. ಅವರು ಈ ಕೂಡಲೇ ಕ್ಷಮೆಯಾಚಿಸಬೇಕೆಂದು" ಹಲವು ಮುಖಂಡರು ಆಗ್ರಹಿಸಿದ್ದರು.