ಅಳಿಯನಿಗೆ ಜೈಲು: ಚುನಾವಣೆ ಸಮೀಪದಲ್ಲಿಯೇ ಕೇರಳ ಸಿಎಂ ಪಿಣರಾಯಿಗೆ ಆಘಾತ
ತಿರುವನಂತಪುರಂ, ಮಾರ್ಚ್ 3: ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಕೇರಳದಲ್ಲಿ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಸಂಕಷ್ಟ ಎದುರಾಗಿದೆ. ಬಹು ದೀರ್ಘ ಸಮಯದಿಂದ ಬಾಕಿ ಉಳಿದಿದ್ದ ಪ್ರತಿಭಟನೆ ಪ್ರಕರಣವೊಂದರಲ್ಲಿ ಪಿಣರಾಯಿ ವಿಜಯನ್ ಅವರ ಅಳಿಯನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಇದರಿಂದ ಚುನಾವಣೆ ಸಮೀಪದಲ್ಲಿಯೇ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಸಿಪಿಎಂ ಪಕ್ಷ ತೀವ್ರ ಮುಜುಗರಕ್ಕೆ ಒಳಗಾಗಿದೆ.
ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸಿಸ್ಟ್) ಮುಖಂಡರಾದ ಪಿ.ಎ. ಮೊಹಮ್ಮದ್ ರಿಯಾಸ್, ಟಿವಿ ರಾಜೇಶ್ ಮತ್ತು ಕೆಕೆ ದಿನೇಶ್ ಅವರಿಗೆ ಕೋಯಿಕ್ಕೋಡ್ ನ್ಯಾಯಾಲಯವೊಂದು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ವಿಮಾನಗಳ ರದ್ದತಿ ಹಾಗೂ ವಿಮಾನ ಪ್ರಯಾಣ ದರಗಳ ಹೆಚ್ಚಳದ ವಿರುದ್ಧ ಪ್ರತಿಭಟನೆ ನಡೆಸಿದ ಪ್ರಕರಣದಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಪಿ.ಎ. ಮೊಹಮ್ಮದ್ ರಿಯಾಸ್ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಳಿಯ. ಜತೆಗೆ ಪಕ್ಷದ ಯುವ ಮೋರ್ಚಾ ಘಟಕ ಡೆಮಾಕ್ರಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾದ (ಡಿವೈಎಫ್ಐ) ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಮುಂದೆ ಓದಿ.
ರಾಜೇಶ್ ನೇತೃತ್ವದಲ್ಲಿ ಪ್ರತಿಭಟನೆ
ಕಣ್ಣೂರು ಜಿಲ್ಲೆಯಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ರಾಜೇಶ್, ಡಿವೈಎಫ್ಐ ಮುಖಂಡ ಕೆ.ಕೆ. ದಿನೇಶ್ ಹಾಗೂ ಮೊಹಮ್ಮದ್ ರಿಯಾಸ್ ಅವರು 2009ರಲ್ಲಿ ಏರ್ ಇಂಡಿಯಾ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಯನ್ನು ರಾಜೇಶ್ ಅರಂಭಿಸಿದ್ದರು. ಈ ಪ್ರತಿಭಟನೆಗಾಗಿ ನಾಯಕರ ವಿರುದ್ಧ 2009ರಲ್ಲಿ ಕೋಯಿಕ್ಕೋಡ್ನಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಭ್ರಷ್ಟಾಚಾರ ಪ್ರಕರಣ: ಕೇರಳ ಮುಖ್ಯಮಂತ್ರಿ ವಿರುದ್ಧದ ಅರ್ಜಿ ವಿಚಾರಣೆ ಮುಂದೂಡಿಕೆ
ಸಿಗದ ಜಾಮೀನು, ಜೈಲಿಗೆ
ಈ ಪ್ರಕರಣದಲ್ಲಿ ನಾಯಕರು ಜಾಮೀನು ಪಡೆದುಕೊಂಡಿದ್ದರು. ಜಾಮೀನಿನ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಮತ್ತೆ ಜಾಮೀನು ಪಡೆದುಕೊಳ್ಳಲು ಮಂಗಳವಾರ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಇದಕ್ಕೂ ಮುನ್ನ ಅನೇಕ ನೋಟಿಸ್ಗಳನ್ನು ನೀಡಿದ್ದರೂ ಅವರು ನ್ಯಾಯಾಲಯದ ಮುಂದೆ ಹಾಜರಾಗಿರಲಿಲ್ಲ. ಆದರೆ ಈ ಬಾರಿ ಅವರಿಗೆ ಜಾಮೀನು ನೀಡದ ನ್ಯಾಯಾಲಯ, ಅವರನ್ನು ಜೈಲಿಗೆ ಕಳುಹಿಸಿದೆ.
ಏರ್ ಇಂಡಿಯಾ ಕಚೇರಿಯಲ್ಲಿ ದಾಂದಲೆ
ಸುಮಾರು 12 ವರ್ಷದ ಹಿಂದೆ ಪ್ರತಿಭಟನೆ ನಡೆದ ಸಂದರ್ಭದಲ್ಲಿ ಟಿವಿ ರಾಜೇಶ್ ಅವರು ಡಿವೈಎಫ್ಐನ ರಾಜ್ಯ ಕಾರ್ಯದರ್ಶಿಯಾಗಿದ್ದರು. ಪಿ.ಎ. ಮೊಹಮ್ಮದ್ ರಿಯಾಸ್ ಸಂಘಟನೆಯ ರಾಜ್ಯ ಜಂಟಿ ಕಾರ್ಯದರ್ಶಿಯಾಗಿದ್ದರು. ಸೆಪ್ಟೆಂಬರ್ 9ರಂದು ಏರ್ ಇಂಡಿಯಾ ಕಚೇರಿಗೆ ನುಗ್ಗಿದ್ದ ತಂಡ, ಕಚೇರಿ ಮೇಲೆ ದಾಳಿ ನಡೆಸಿ, ಹಾನಿ ಮಾಡಿದ್ದರು.
ಪಿಣರಾಯಿ ಮಗಳೊಂದಿಗೆ ಮದುವೆ
ಮೊಹಮ್ಮದ್ ರಿಯಾಸ್ ಪ್ರಸ್ತುತ ಡಿವೈಎಫ್ಐ ರಾಷ್ಟ್ರೀಯ ಅಧ್ಯಕ್ಷರಾಗಿದ್ದು, ಕಳೆದ ವರ್ಷ ಪಿಣರಾಯಿ ವಿಜಯನ್ ಅವರ ನಿವಾಸದಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಅವರ ಮಗಳು ವೀಣಾ ಅವರನ್ನು ಮದುವೆಯಾಗಿದ್ದರು. ಇದು ರಿಯಾಸ್ ಹಾಗೂ ವೀಣಾ ಇಬ್ಬರಿಗೂ ಎರಡನೆಯ ಮದುವೆಯಾಗಿದೆ.