ನಾನು ಯಾವುದೇ ಬ್ಯಾಗ್ ಮರೆತಿರಲಿಲ್ಲ: ಪಿಣರಾಯಿ ವಿಜಯನ್
ತಿರುವನಂತಪುರಂ, ಜೂನ್ 28: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ 2016 ರಿಂದ ಈವರೆಗೆ ಐದು ಬಾರಿ ದುಬೈಗೆ ಭೇಟಿ ನೀಡಿದ್ದು, ಚಿನ್ನದ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಆರೋಪಿಸಿದಂತೆ ಪ್ರವಾಸದಲ್ಲಿ ತಮ್ಮ ಯಾವುದೇ ವಸ್ತುಗಳನ್ನು ತೆಗೆದುಕೊಂಡು ಹೋಗಲು ಎಂದಿಗೂ ಮರೆತಿಲ್ಲ ಎಂದು ಹೇಳಿದ್ದಾರೆ.
ಕೇರಳ ಮೂಲದ ಯುಎಇ ಕಾನ್ಸುಲೇಟ್ನ ಮಾಜಿ ಉದ್ಯೋಗಿಯೂ ಆಗಿರುವ ಸ್ವಪ್ನಾ ಸುರೇಶ್ ಆರೋಪದ ಹಿನ್ನೆಲೆ ಸಿಎಂ ಪಿಣರಾಯಿ ವಿಜಯನ್ ಸ್ಪಷ್ಟನೆ ನೀಡಿದ್ದಾರೆ. 2016ರಲ್ಲಿ ಪಿಣರಾಯಿ ವಿಜಯನ್ ದುಬೈ ಪ್ರವಾಸದ ಸಮಯದಲ್ಲಿ ಅವರ ಹಣ ತುಂಬಿದ ಲಗೇಜ್ ಬ್ಯಾಗ್ ತೆಗೆದುಕೊಳ್ಳಲು ಮರೆತಿದ್ದರು ಅದನ್ನು ತಕ್ಷಣವೇ ದುಬೈಗೆ ತಲುಪಿಸಲು ಕೇಳಲಾಗಿತ್ತು ಎಂದು ಸ್ವಪ್ನಾ ಸುರೇಶ್ ಆರೋಪಿಸಿದ್ದರು.
ಚಿನ್ನದ ಸ್ಮಗಲಿಂಗ್ ಕೇಸ್ ಸಿಬಿಐಗೆ ಒಪ್ಪಿಸಿ, ಪಿಎಂಗೆ ಸ್ವಪ್ನ ಸುರೇಶ್ ಪತ್ರ
ಇತ್ತೀಚೆಗೆ ಹಲವು ಪತ್ರಿಕಾಗೋಷ್ಠಿಗಳಲ್ಲಿ ಈ ಬಗ್ಗೆ ಸ್ವಪ್ನಾ ಸುರೇಶ್ ಆರೋಪಿಸುತ್ತಲೇ ಇದ್ದರು. ಅಂದು ಪ್ಯಾಕೇಜ್ನಲ್ಲಿ ಕರೆನ್ಸಿ ನೋಟುಗಳು ಇರುವುದು ಪತ್ತೆಯಾಗಿತ್ತು. ಅಂದಿನ ಕಾನ್ಸುಲೇಟ್ ಜನರಲ್ ಅವರ ಸೂಚನೆಯಂತೆ ರಾಜತಾಂತ್ರಿಕರ ಮೂಲಕ ಅದನ್ನು ದುಬೈಗೆ ಕಳುಹಿಸಲಾಗಿದೆ ಎಂದು ಸಿಎಂ ಪಿಣರಾಯಿ ವಿಜಯನ್ ವಿರುದ್ಧ ಆರೋಪಿಸಿದ್ದರು.
ಒಂದೇ ಸಾಲಿನ ಉತ್ತರದಲ್ಲಿ, ಪಿಣರಾಯಿ ವಿಜಯನ್ ತಮ್ಮ ಮೇಲಿನ ಆರೋಪಗಳನ್ನು ತಿರಸ್ಕರಿಸಿದರು ಮತ್ತು ದುಬೈ ಪ್ರವಾಸದ ಸಮಯದಲ್ಲಿ ತಮ್ಮ ಲಗೇಜ್ಗಳನ್ನು ತೆಗೆದುಕೊಳ್ಳಲು ಮರೆತಿರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಚಿನ್ನಕಳ್ಳಸಾಗಣೆ ಪ್ರಕರಣ: ಸ್ವಪ್ನ ಸುರೇಶ್ ನಿರೀಕ್ಷಣಾ ಜಾಮೀನು ರದ್ದು
ಸಿಎಂ ಪಿಣರಾಯಿ ವಿರುದ್ಧ ಆರೋಪಿಸಿದ್ದ ಸ್ವಪ್ನಾ ಸುರೇಶ್
"2016ರಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ದುಬೈಗೆ ಭೇಟಿ ನೀಡಿದಾಗ ಹಿರಿಯ ಐಎಎಸ್ ಅಧಿಕಾರಿ ಶಿವಶಂಕರ್ ನನ್ನನ್ನು ಸಂಪರ್ಕಿಸಿದ್ದರು. ಆಗ ತಿರುವನಂತಪುರದ ಕಾನ್ಸುಲೇಟ್ನಲ್ಲಿ ಕಾರ್ಯದರ್ಶಿಯಾಗಿದ್ದೆ. ಸಿಎಂ ತಮ್ಮಂದಿಗೆ ಬ್ಯಾಗ್ ತೆಗೆದುಕೊಂಡು ಹೋಗುವುದನ್ನು ಮರೆತಿದ್ದಾರೆ. ಅದನ್ನು ದುಬೈಗೆ ತುರ್ತಾಗಿ ಕಳುಹಿಸುವಂತೆ ಶಿವಶಂಕರ್ ನನಗೆ ಹೇಳಿದ್ದರು, ಆ ಬ್ಯಾಗ್ ಸ್ಕ್ಯಾನ್ ಮಾಡಿದಾಗ ಅದರಲ್ಲಿ ಹಣ ಇರುವುದು ಪತ್ತೆಯಾಯಿತು. ಅಂದಿನಿಂದ ಈ ಪ್ರಕರಣ ಆರಂಭವಾಯಿತು" ಎಂದು ನ್ಯಾಯಾಲಯಗಳಿಗೆ ಹಾಜರಾದ ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.
ಅಕ್ರಮ ಚಿನ್ನ ಸಾಗಾಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ, ಸಂಬಂಧಿಕರು, ಅಧಿಕಾರಿಗಳ ಪಾತ್ರವಿರುವ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಿರುವುದಾಗಿ ಹೇಳಿದ್ದರು.
ಲಿಖಿತ ಉತ್ತರ ನೀಡಿದ ಸಿಎಂ ಪಿಣರಾಯಿ ವಿಜಯನ್
ವಿರೋಧ ಪಕ್ಷದ ಕಾಂಗ್ರೆಸ್ ಶಾಸಕ ಅನ್ವರ್ ಸಾದತ್ ಕೇಳಿದ ಪ್ರಶ್ನೆಗೆ ವಿಜಯನ್ ರಾಜ್ಯ ವಿಧಾನಸಭೆಯಲ್ಲಿ ಲಿಖಿತ ಉತ್ತರ ನೀಡಿದರು. ಆರೋಪಗಳು ಸತ್ಯವೇ ಎಂಬ ಇನ್ನೊಂದು ಪ್ರಶ್ನೆಗೆ, ಅಂತಹ ಪ್ರಶ್ನೆಗೆ ಯಾವುದೇ ಪ್ರಸ್ತುತತೆ ಇಲ್ಲ ಎಂದು ಉತ್ತರಿಸಿದರು.
ದುಬೈಗೆ ಅವರ ಎಲ್ಲಾ ಪ್ರವಾಸಗಳು ಸಂಪೂರ್ಣವಾಗಿ ಅಧಿಕೃತ ಉದ್ದೇಶಗಳಿಗಾಗಿ ಎಂದು ಹೇಳಿದ ಮುಖ್ಯಮಂತ್ರಿ ವಿಜಯನ್, ಅಲ್ಲಿನ ಕಾರ್ಯಕ್ರಮಗಳು ಮತ್ತು ಸಭೆಗಳ ಕುರಿತು ಸಂಬಂಧಿಸಿದ ಪ್ರಶ್ನೆಗಳಿಗೆ ವಿವರವಾದ ಉತ್ತರಗಳನ್ನು ನೀಡಿದರು.
ಸ್ಮರಣಿಕೆಗಳನ್ನಷ್ಟೇ ಸಾಗಿಸಲು ಹೇಳಲಾಗಿತ್ತು
ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡು ಜೈಲು ಪಾಲಾಗಿರುವ ಮುಖ್ಯಮಂತ್ರಿಗಳ ಮಾಜಿ ಪ್ರಧಾನ ಕಾರ್ಯದರ್ಶಿ ಎಂ. ಶಿವಶಂಕರ್ ಅವರು ಕಸ್ಟಮ್ಸ್ ಅಧಿಕಾರಿಗಳಿಗೆ ಈ ಹಿಂದೆ ನೀಡಿದ ಹೇಳಿಕೆಯಲ್ಲಿ ಪಿಣರಾಯಿ ವಿಜಯನ್ ಅಲ್ಲಿದ್ದಾಗ ರಾಜತಾಂತ್ರಿಕರ ಮೂಲಕ ದುಬೈಗೆ ಲಗೇಜ್ ಕಳುಹಿಸಲಾಗಿದೆ ಎಂದು ವರದಿಯಾಗಿದೆ. ಇದು ಮುಖ್ಯಮಂತ್ರಿ ಸಮಾರಂಭದಲ್ಲಿ ವಿತರಿಸಬೇಕಾದ ಕೆಲವು ಸ್ಮರಣಿಕೆಗಳನ್ನು ಒಳಗೊಂಡಿತ್ತು.
ಸ್ಮರಣಿಕೆ ವಿತರಣೆಯಲ್ಲಿ ವಿಳಂಬವನ್ನು ತಪ್ಪಿಸಲು ಲಗೇಜ್ಗಳನ್ನು ದುಬೈಗೆ ಸಾಗಿಸಲು ಒಬ್ಬ ವ್ಯಕ್ತಿಯನ್ನು ಒಪ್ಪಿಸಲು ನಿರ್ಧರಿಸಲಾಗಿತ್ತು ಮತ್ತು ಕಾನ್ಸುಲೇಟ್ ಜನರಲ್ ಸಹಾಯವನ್ನು ನೀಡಿತು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮುಖ್ಯಮಂತ್ರಿಯವರ ಮೊದಲ ಸಭೆ ನಡೆಯುವ ಮುನ್ನವೇ ದುಬೈನಲ್ಲಿರುವ ರಾಜ್ಯದ ನಿಯೋಗಕ್ಕೆ ಪ್ಯಾಕೇಜ್ಗಳು ತಲುಪಿವೆ ಎಂದು ಐಎಎಸ್ ಅಧಿಕಾರಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಕ್ರಮ ಚಿನ್ನ ಸಾಗಣೆ ಪ್ರಕರಣದ ಮಾಹಿತಿ
ಜುಲೈ 5, 2020ರಲ್ಲಿ ಕೇರಳದ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು 15 ಕೋಟಿ ರುಪಾಯಿ ಮೌಲ್ಯದ ಚಿನ್ನ ಇದ್ದ ಬ್ಯಾಗ್ ವಶಕ್ಕೆ ಪಡೆದಿದ್ದರು. ಈ ಬ್ಯಾಗ್ ಯುನೈಟೆಡ್ ಎಮಿರೇಟ್ಸ್ ಕಾನ್ಸುಲೇಟ್ ವಿಳಾಸ ಹೊಂದಿತ್ತು,
ದೂತಾವಾಸ ಕಚೇರಿಯ ವಿಶೇಷ ಸೌಲಭ್ಯ ದುರ್ಬಳಕೆ ಮಾಡಿಕೊಂಡು ಭಾರತಕ್ಕೆ ಚಿನ್ನ ಕಳ್ಳಸಾಗಣೆ ಮಾಡಲಾಗುತ್ತಿತ್ತು ಎಂದು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದರು. ಪ್ರಕರಣದಲ್ಲಿ ಸ್ವಪ್ನಾ ಸುರೇಶ್ ಪ್ರಮುಖ ಆರೋಪಿ ಎಂದು ಬಂಧಿಸಿದ್ದರು. ಆರೋಪಿಗೆ ಕೇರಳದ ಪ್ರಭಾವಿ ವ್ಯಕ್ತಿಗಳ ಸಂಪರ್ಕ ಇರುವುದು ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್ ಕಾರ್ಯದರ್ಶಿ ಎಂ. ಶಿವಸಂಕರ್ ಕೂಡಾ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಅಮಾನತು ಮಾಡಲಾಗಿತ್ತು.
ಆರೋಪಿ ಸ್ವಪ್ನಾ ಸುರೇಶ್ ಯುಎಇ ಕಾನ್ಸುಲೇಟ್ನಲ್ಲಿ ಮೊದಲು ಕಾರ್ಯ ನಿರ್ವಹಿಸಿದ್ದರು. ನಂತರ ಅವರನ್ನು ಕೇರಳದ ಐಟಿ ಇಲಾಖೆಯ ಯೋಜನೆಯೊಂದಕ್ಕೆ ಕಾರ್ಯ ನಿರ್ವಹಿಸಲು ನೇಮಕ ಮಾಡಲಾಗಿತ್ತು. ಕೇರಳ ಸಿಎಂ ಪಿಣರಾಯಿ ವಿಜಯನ್ ಕಾರ್ಯದರ್ಶಿ ಎಂ. ಶಿವಸಂಕರ್ ಈ ಇಲಾಖೆಯ ಉಸ್ತುವಾರಿ ಹೊತ್ತಿದ್ದರು.