ಕೇರಳ ಎಟಿಎಸ್ ತಂಡ ಕಾರ್ಯಾಚರಣೆ: ನಕ್ಸಲ್ ಲೀಡರ್ ಬಿಜಿಕೆ, ಸಾವಿತ್ರಿ ಕೇರಳದಲ್ಲಿ ಬಂಧನ
ಬೆಂಗಳೂರು, ನ. 09: ಕೇರಳ ಭಯೋತ್ಪಾದನಾ ನಿಗ್ರಹ ಪಡೆ ಕಾರ್ಯಾಚರಣೆ ನಡೆಸಿ ಕರ್ನಾಟಕ ಮೂಲದ ಇಬ್ಬರು ನಕ್ಸಲ್ ನಾಯಕರನ್ನು ಮಂಗಳವಾರ ಬಂಧಿಸಿದ್ದಾರೆ.
ಬಿ.ಜಿ. ಕೃಷ್ಣಮೂರ್ತಿ ಮತ್ತು ಸಾವಿತ್ರಿ ಬಂಧಿತ ಆರೋಪಿಗಳು. ವಯನಾಡು ಜಿಲ್ಲೆಯ ಸುಲ್ತಾನ್ ಬತ್ತೇರಿ ಎಂಬಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ನಕ್ಸಲ್ ಸೆಂಟ್ರಲ್ ಕಮಿಟಿಯ ಪಶ್ಚಿಮ ಘಟ್ಟದ ಕಾರ್ಯದರ್ಶಿಯಾಗಿ ಬಿ.ಜಿ. ಕೃಷ್ಣಮೂರ್ತಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಈತನ ವಿರುದ್ಧ ಸುಮಾರು 51 ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ. ಮತ್ತೊಬ್ಬ ಆರೋಪಿತೆ ಸಾವಿತ್ರಿ ನಕ್ಸಲ್ ಗ್ರೂಪ್ ಕಮಲ ದಳದ ಸದಸ್ಯೆಯಾಗಿದ್ದರು ಎಂದು ಹೇಳಲಾಗಿದೆ. ಸಾವಿತ್ರಿ ವಿರುದ್ಧ 21 ಪ್ರಕರಣ ದಾಖಲಾಗಿವೆ ಎಂದು ಹೇಳಲಾಗಿದೆ.
ಯಾರು ಬಿ.ಜಿ. ಕೃಷ್ಣಮೂರ್ತಿ?
ನೂರ್ ಶ್ರೀಧರ್ ಮತ್ತು ನಿಲ್ಗುಳಿ ಪದ್ಮನಾಭ ಅವರು ಸರ್ಕಾರದ ಜತೆ ಮಾತುಕತೆ ಬಳಿಕ ನಕ್ಸಲ್ ಚಳವಳಿ ಬಿಟ್ಟು ಸಮಾಜಕ್ಕೆ ಮರಳಿದ್ದರು. ಈ ವೇಳೆ ಬಿ.ಜಿ. ಕೃಷ್ಣಮೂರ್ತಿ ನಕ್ಸಲ್ ಚಳವಳಿ ಮುಂದುವರೆಸಿದ್ದರು. ಆ ಬಳಿಕ ಕಣ್ಮರೆಯಾಗಿದ್ದ ಬಿ.ಜಿ.ಕೃಷ್ಣಮೂರ್ತಿ ಎಲ್ಲೂ ಸುದ್ದಿಯಗಿರಲಿಲ್ಲ. ಆ ಬಳಿಕ 2018 ರಲ್ಲಿ ಬಿ.ಜಿ. ಕೃಷ್ಣಮೂರ್ತಿ ಹೆಸರು ಕೇಳಿ ಬಂದಿತ್ತು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗುಳ್ಯಾ ಗ್ರಾಮದ ವಾಸುದೇವ ಅವರ ಮನೆಗೆ ಬಂದು ನಕ್ಸಲ್ ಚಳವಳಿಗೆ ಬೆಂಬಲಿಸುವಂತೆ ಆಗ್ರಹಿಸಿದ್ದರು ಎಂಬ ಸುದ್ದಿ ಹಬ್ಬಿತ್ತು.
ವಾಸುದೇವ ಅವರು ನೀಡಿದ ದೂರು ಆಧರಿಸಿ ಬಿ.ಜಿ. ಕೃಷ್ಣಮೂರ್ತಿ ಮತ್ತು ಇತರರ ವಿರುದ್ಧ ಕುದುರೆಮುಖ ಪೊಲೀಸರು 2018 ಅಕ್ಟೋಬರ್ ನಲ್ಲಿ ಕೇಸು ದಾಖಲಿಸಿದ್ದರು. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ನೆಮ್ಮಾರಿನ ನಿವಾಸಿ ಕನು ಗೋಪಾಲಯ್ಯ ಅವರ ಪುತ್ರ ಬಿ.ಜಿ. ಕೃಷ್ಣಮೂರ್ತಿ. ಪದವಿ ಬಳಿಕ ಶಿವಮೊಗ್ಗದಲ್ಲಿ ಕಾನೂನು ಪದವಿ ಮಾಡಿದ್ದರು. ಕಾನೂನು ಪದವಿ ಅಧ್ಯಯನದ ಅವಧಿಯಲ್ಲಿ ಮಾವೋವಾದಿ ಸಿದ್ಧಾಂತದ ಬಗ್ಗೆ ಒಲವು ಬೆಳಸಿಕೊಂಡಿದ್ದರು. ಒಬ್ಬ ಬರಹಗಾರನಾಗಿ, ಕವಿಯಾಗಿ ಬಿ.ಜಿ. ಕೃಷ್ಣಮೂರ್ತಿ ಗುರುತಿಸಿಕೊಂಡಿದ್ದು, ಅನೇಕ ಕವನ ಸಂಕಲನಗಳು ಕೂಡ ಬಿಡುಗಡೆಯಾಗಿವೆ.
ಕುದುರೆ ಮುಖದಿಂದ ನಕ್ಸಲ್ ಚಳವಳಿಗೆ ಎಂಟ್ರಿ:
ಪ್ರಭಾವಿ ನಕ್ಸಲ್ ನಾಯಕ ಸಾಕೇತ್ ರಾಜನ್ ಎನ್ಕೌಂಟರ್ ಬಳಿಕ ಮಲೆನಾಡು ಮತ್ತು ಪಶ್ಚಿಮ ಘಟ್ಟದ ಚಳವಳಿ ನೇತೃತ್ವ ಬಿ.ಜಿ. ಕೃಷ್ಣಮೂರ್ತಿಯನ್ನು ಆರಿಸಿ ಬಂದಿತ್ತು ಎಂಬ ಮಾತುಗಳು ಮೊದಲಿನಿಂದಲೂ ಕೇಳಿ ಬರುತ್ತಿವೆ. ಆರಣ್ಯದಲ್ಲಿ ಕಾಲಿಗೆ ಗಾಯ ಮಾಡಿಕೊಂಡು ದೀರ್ಘ ಕಾಲ ಚಿಕಿತ್ಸೆಗೆ ಒಳಗಾಗಿ ನಕ್ಸಲ್ ಚಳವಳಿ ನಿಷ್ಕ್ರಿಯವಾಗಿತ್ತು ಎಂಬ ಮಾತುಗಳು ಕೇಳಿ ಬಂದಿದ್ದವು. 2000 ನೇ ವರ್ಷದಲ್ಲಿ ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ ವಿರೋಧಿ ಚಳವಳಿಯಲ್ಲಿ ಬಿ.ಜಿ. ಕೃಷ್ಣಮೂರ್ತಿ ಗುರುತಿಸಿಕೊಂಡಿದ್ದರು. ಆ ಬಳಿಕ ನಕ್ಸಲ್ ನಾಯಕರೊಂದಿಗೆ ಒಡನಾಟ ಸಿಕ್ಕಿ ನಕ್ಸಲ್ ಚಳವಳಿಯಲ್ಲಿ ಸಕ್ರಿಯರಾಗಿದ್ದರು ಎನ್ನಲಾಗಿದೆ.
2018 ರಲ್ಲಿ ಬಿ.ಜಿ. ಕೃಷ್ಣಮೂರ್ತಿ ಅವರ ತಂದೆ ಗೋಪಾಲಯ್ಯ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿದ್ದರು. ಈ ವೇಳೆ ಬಿ.ಜಿ. ಕೃಷ್ಣಮೂರ್ತಿ ಬರಬಹುದು ಎಂಬ ಶಂಕೆಯಿಂದ ನಕ್ಸಲ್ ನಿಗ್ರಹ ಪಡೆ ಕಾರ್ಯಾಚರಣೆ ನಡೆಸಿತ್ತು. ಏಕೈಕ ಪುತ್ರ ನಕ್ಸಲ್ ಮುಖಂಡನಾಗಿದ್ದರಿಂದ ಕೃಷ್ಣಮೂರ್ತಿ ತಂದೆ ನೊಂದಿದ್ದರು. ತಂದೆಯ ಅಂತಿಮ ಕಾರ್ಯದಲ್ಲೂ ಬಿ.ಜಿ. ಕೃಷ್ಣಮೂರ್ತಿ ಪಾಲ್ಗೊಂಡಿರಲಿಲ್ಲ. ಹೀಗಾಗಿ ಒಂದು ದಿನ ಕಾದು ಕೃಷ್ಣಮೂರ್ತಿ ಅವರ ತಂದೆಯ ಅಂತ್ಯ ಸಂಸ್ಕಾರ ನೆರವೇರಿಸಲಾಗಿತ್ತು. ಬಿ.ಜಿ. ಕೃಷ್ಣಮೂರ್ತಿಗಾಗಿ ನಕ್ಸಲ್ ನಿಗ್ರಹ ತಂಡ ಹೊಂಚು ಹಾಕಿ ಕೂಂಬಿಂಗ್ ಕೂಡ ನಡೆಸಿತ್ತು.
ಅಪರಾಧ ಪ್ರಕರಣಗಳಲ್ಲಿ ಕೃಷ್ಣಮೂರ್ತಿ ಹೆಸರು:
ಶೃಂಗೇರಿಯ ಕೆರೆಕಟ್ಟೆ ಬಳಿ ಕೃಷಿಕ ಸತೀಶ್ ಅವರ ಮನೆಗೆ ಬಿ.ಜಿ. ಕೃಷ್ಣಮೂರ್ತಿ ನೇತೃತ್ವದ ತಂಡ ದಾಳಿ ನಡೆಸಿ 12 ಸಾವಿರ ರೂ. ನಗದು, ಬಂದೂಕು, ಎರಡು ಮೊಬೈಲ್ ದೋಚಿದ ಆರೋಪವಿದೆ. ಅಲ್ಲದೇ ಆಗುಂಬೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ನ್ನು ಜಖಂಗೊಳಿಸಿದ ಆರೋಪವಿದೆ. ಉಡುಪಿ, ಶಿವಮೊಗ್ಗ, ಪಶ್ಚಿಮ ಘಟ್ಟದಲ್ಲಿ ಹಲವು ಅಪರಾಧ ಕೃತ್ಯ ಎಸಗಿದ ಆರೋಪ ಕೃಷ್ಣಮೂರ್ತಿ ಮೇಲಿದೆ.
ಇತ್ತೀಚೆಗೆ ನಕ್ಸಲ್ ಚಳವಳಿ ಬಿಟ್ಟು ಕೆಲವು ನಕ್ಸಲ್ ಮುಖಂಡರು ಶರಣಾಗತರಾಗಿದ್ದರು. ಹಾಗಲಗಂಚಿ ವೆಂಕಟೇಶ್, ಹೂರಲೆ ಜಯ, ಎಡಗುಂದ ಕೋಮಲ, ಸಿರಿಮನೆ ನಾಗರಾಜ್, ನೂರ್ ಶ್ರೀಧರ್ ಪ್ರಮುಖರು. ಈ ವೇಳೆ ಬಿ.ಜಿ. ಕೃಷ್ಣಮೂರ್ತಿ ಕೂಡ ಶರಣಾಗಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಬಿ.ಜಿ. ಕೃಷ್ಣಮೂರ್ತಿ ನಕ್ಸಲ್ ಚಳವಳಿಯನ್ನು ಮುಂದುವರೆಸಿ ತನ್ನ ಅಡಗುತಾಣವನ್ನು ಕರ್ನಾಟಕದಿಂದ ಕೇರಳಕ್ಕೆ ವರ್ಗಾಯಿಸಿದ್ದರು ಎಂಬ ಮಾತು ಕೇಳಿ ಬಂದಿತ್ತು. ಇದೀಗ ಎನ್ಐಎ ಅಧಿಕಾರಿಗಳು ಬಿ.ಜಿ. ಕೃಷ್ಣಮೂರ್ತಿಯನ್ನು ಬಂಧಿಸಿದ್ದಾರೆ.
Recommended Video