Today's Chanakya: ಪಿಣರಾಯಿ ವಿಜಯನ್ ಸೀಟು ಭದ್ರ
ಕೇರಳದಲ್ಲಿ ಆಡಳಿತಾರೂಢ ಪಿಣರಾಯಿ ವಿಜಯನ್ ಸರ್ಕಾರ ಮುಂದುವರೆಯಲಿದೆ ಎನ್ನುತ್ತಿದೆ ಟುಡೇಸ್ ಚಾಣಕ್ಯ ಮತದಾನೋತ್ತರ ಸಮೀಕ್ಷೆ.
ನಿಫಾ, ಭೀಕರ ಪ್ರವಾಹ, ಕೊರೊನಾ ಪರಿಸ್ಥಿತಿಯನ್ನು ಯಶಸ್ವಿಯಾಗಿಯೇ ನಿರ್ವಹಿಸಿದರು ಎಂಬ ಜನಾಭಿಪ್ರಾಯವುಳ್ಳ ಪಿಣರಾಯಿ ವಿಜಯನ್ ಸರ್ಕಾರ ಈ ವಿಧಾನಸಭೆಯಲ್ಲಿ ಉತ್ತಮ ಬಹುಮತದಿಂದಲೇ ಮರಳಿ ಆಯ್ಕೆ ಆಗಲಿದ್ದಾರೆ ಎಂದಿದೆ ಟುಡೇಸ್ ಚಾಣಕ್ಯ ಸಮೀಕ್ಷೆ.
ಪಿಣರಾಯಿ ವಿಜಯನ್ ನೇತೃತ್ವದ ಎಲ್ಡಿಎಫ್ 102 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಕಾಂಗ್ರೆಸ್ ಮುನ್ನಡೆಸುತ್ತಿರುವ ಯುಡಿಎಫ್ 35 ಕ್ಷೇತ್ರಗಳಿಗಷ್ಟೆ ಸೀಮಿತಗೊಳ್ಳಲಿದೆ.
ಸಮೀಕ್ಷೆಯ ಪ್ರಕಾರ ಬಿಜೆಪಿಯು ಕೇರಳ ವಿಧಾನಸಭೆ ಚುನಾವಣೆಯಲ್ಲಿ ತನ್ನ ಸ್ಥಾನವನ್ನು ತುಸುವೇ ಉತ್ತಮ ಗೊಳಿಸಿಕೊಳ್ಳಲಿದೆ ಒಂದು ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ 3 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದಿದೆ ಸಮೀಕ್ಷೆ. ಎಲ್ಡಿಎಫ್, ಯುಡಿಎಫ್, ಬಿಜೆಪಿ ಹೊರತಾಗಿ ಇತರೆ ಪಕ್ಷಗಳು 3 ಸ್ಥಾನಗಳನ್ನು ಗೆಲ್ಲಲಿವೆ.
ಕಳೆದ ಕೇರಳ ವಿಧಾನಸಭೆ ಚುನಾವಣೆ ಫಲಿತಾಂಶ ನೋಡುವುದಾದರೆ ಅಧಿಕಾರಾರೂಢ ಎಲ್ಡಿಎಫ್ 91, ಯುಡಿಎಫ್ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದವು.
ಎಲ್ಡಿಎಫ್ನಲ್ಲಿ ಸಿಪಿಐ(ಎಂ), ಸಿಪಿಐ, ಜೆಡಿಎಸ್, ಕೇರಳ ಕಾಂಗ್ರೆಸ್(ಎಂ), ಎನ್ಸಿಪಿ, ಐಎನ್ಎಲ್, ಆರ್ಎಸ್ಪಿ, ಸೆಕ್ಯೂಲರ್ ಕಾಂಗ್ರೆಸ್ ಇನ್ನೂ ಕೆಲವು ಪಕ್ಷಗಳಿವೆ. ಮೈತ್ರಿಕೂಟದ ನಾಯಕ ಪಿಣರಾಯಿ ವಿಜಯನ್.
ಯುಡಿಎಫ್ ಮೈತ್ರಿಕೂಟವನ್ನು ಕಾಂಗ್ರೆಸ್ ಮುನ್ನಡೆಸುತ್ತಿದ್ದು, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ಕೇರಳ ಕಾಂಗ್ರೆಸ್, ಎನ್ಸಿಕೆ, ರೆವೆಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ, ಕಮ್ಯೂನಿಸ್ಟ್ ಮಾರ್ಕ್ಸಿಸ್ಟ್ ಪಾರ್ಟಿ ಇನ್ನೂ ಕೆಲವು ಪಕ್ಷಗಳು ಇವೆ.