ಕೇರಳದಲ್ಲಿ ಕೊರೊನಾ ಹೆಚ್ಚಳ: ಟ್ರಿಪಲ್ ಲಾಕ್ಡೌನ್ ಘೋಷಣೆ
ತಿರುವನಂತಪುರಂ, ಆಗಸ್ಟ್ 04: ಕೊರೊನಾ ಸೋಂಕು ಹೆಚ್ಚಿರುವ ಪ್ರದೇಶಗಳಲ್ಲಿ ಟ್ರಿಪ್ ಲಾಕ್ಡೌನ್ ಘೋಷಣೆ ಮಾಡಿ ಕೇರಳ ಸರ್ಕಾರ ಆದೇಶಿಸಿದೆ. 1000 ಜನರಲ್ಲಿ 10ಕ್ಕಿಂತ ಹೆಚ್ಚು ಕೋವಿಡ್ -19 ಪ್ರಕರಣಗಳು ಪತ್ತೆಯಾದ ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಟ್ರಿಪಲ್ ಲಾಕ್ಡೌನ್ ವಿಧಿಸಲಾಗುವುದು ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಕೋವಿಡ್ ಹೆಚ್ಚಿರುವ ಸ್ಥಳಗಳಲ್ಲಿ ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ಮಾತ್ರ ತೆರೆಯಲು ಅನುಮತಿಸಲಾಗುತ್ತದೆ. ಉಳಿದ ಕಡೆ ಭಾನುವಾರ ಹೊರತುಪಡಿಸಿ ಎಲ್ಲಾ ಅಂಗಡಿಗಳು ವಾರದ ಆರು ದಿನ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗುತ್ತದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ತಿಳಿಸಿದ್ದಾರೆ.
ಕೇರಳಕ್ಕೆ ಕೊರೊನಾ 3ನೇ ಅಲೆಯ ಎಚ್ಚರಿಕೆ ಕೊಟ್ಟ ಆರೋಗ್ಯ ತಜ್ಞರು
ಆಗಸ್ಟ್ 15 ಮತ್ತು ಆಗಸ್ಟ್ 22 ಭಾನುವಾರಗಳಾಗಿದ್ದರೂ, ಕ್ರಮವಾಗಿ ಸ್ವಾತಂತ್ರ್ಯ ದಿನ ಮತ್ತು ಓಣಂ ಕಾರಣದಿಂದ ಲಾಕ್ಡೌನ್ನಿಂದ ವಿನಾಯಿತಿ ನೀಡಲಾಗುತ್ತದೆ. ರಾಜ್ಯವು ಅತ್ಯಧಿಕ ಪಾಸಿಟಿವ್ ಪ್ರಮಾಣ, ಶೇಕಡಾ 12 ರಷ್ಟು ಮತ್ತು 1.74 ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿದೆ ಎಂದು ವೀಣಾ ಅವರು ವಿಧಾನಸಭೆಗೆ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ದೈನಂದಿನ ಪ್ರಕರಣಗಳು ಮತ್ತೆ ಏರಿಕೆಯಾಗುತ್ತಿವೆ. ಮಂಗಳವಾರ ಜಿಲ್ಲೆಯಲ್ಲಿ 307 ಮಂದಿಗೆ ಕೊರೊನಾ ದೃಢಪಟ್ಟಿದ್ದು, 9 ಮಂದಿ ಸಾವನ್ನಪ್ಪಿದ್ದಾರೆ. ಮಂಗಳೂರು, ಬಂಟ್ವಾಳದ ತಲಾ ಇಬ್ಬರು, ಬೆಳ್ತಂಗಡಿಯ ಒಬ್ಬರು ಮತ್ತು ಹೊರ ಜಿಲ್ಲೆಯ 4 ಮಂದಿ ಸಾವನ್ನಪ್ಪಿದವರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ 286 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ಈವರೆಗೆ ಒಟ್ಟು 1,443 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಒಟ್ಟು 12,82,820 ಮಂದಿ ಕೊರೊನಾ ಸೋಂಕಿಗೊಳಗಾಗಿದ್ದು, 11,81,514 ಮಂದಿ ಗುಣಮುಖರಾಗಿದ್ದಾರೆ.
ಸದ್ಯ 2,960 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಾಸಿಟಿವಿಟಿ ದರ ಶೇ. 5.26 ಇದೆ. ಮಂಗಳೂರಿನ 5, ಬಂಟ್ವಾಳ, ಬೆಳ್ತಂಗಡಿ ತಾಲೂಕಿನ ತಲಾ 2 ಮತ್ತು ಪುತ್ತೂರು ತಾಲೂಕಿನ ಒಂದು ಕಡೆ ಕಂಟೈನ್ಮೆಂಟ್ ವಲಯವನ್ನಾಗಿ ಘೋಷಣೆ ಮಾಡಲಾಗಿದೆ.
ಅಂಗಡಿ ತೆರೆಯುವ ಸಮಯ ವಿಸ್ತರಣೆಗೆ ಚಿಂತನೆ
ಇನ್ನು ಅಂಗಡಿ ತೆರೆಯುವ ಸಮಯವನ್ನು ಬೆಳಗ್ಗೆ 7 ರಿಂದ ರಾತ್ರಿ 9 ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ. ಅಂಗಡಿಗಳಿಗೆ ಭೇಟಿ ನೀಡುವ ಜನರಿಗೆ 25 ಚದರ ಅಡಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದರು.
ಜನರು ಜಾಗರೂಕರಾಗಬೇಕು
ರಾಜ್ಯದಲ್ಲಿ ಕೋವಿಡ್ ಹರಡುವಿಕೆಯ ಬಗ್ಗೆ ಸಾರ್ವಜನಿಕರು ಜಾಗರೂಕರಾಗಿರಬೇಕು ಎಂದು ಸಚಿವರು ವಿನಂತಿಸಿದರು. "ಹಬ್ಬದ ಸಮಯದಲ್ಲಿ ಜನಸಂದಣಿಯನ್ನು ನಿರ್ವಹಿಸಲು ಮತ್ತು ಸಾಮಾಜಿಕ ಅಂತರವನ್ನು ಖಚಿತಪಡಿಸಿಕೊಳ್ಳಲು ಅಂಗಡಿಗಳಲ್ಲಿ ವ್ಯವಸ್ಥೆ ಇರಬೇಕು. ಈ ಕುರಿತು ಪೊಲೀಸರು ಮತ್ತು ಸ್ಥಳೀಯ ಸಂಸ್ಥೆಗಳು ಮೇಲ್ವಿಚಾರಣೆ ಮಾಡಬೇಕು ಎಂದು ವೀಣಾ ಹೇಳಿದರು.
ಮದ್ಯದಂಗಡಿಗಳು ಬಂದ್
ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಸರಕಾರದ ನಿರ್ದೇಶನದಂತೆ ಜಿಲ್ಲಾಡಳಿತ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕಟ್ಟುನಿಟ್ಟಿನ ನಿರ್ಬಂಧಗಳ ನಂತರ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತೆ ಏರಿಕೆ ಆಗಿರುವ ಹಿನ್ನಲೆಯಲ್ಲಿ ಅದರ ಕಣ್ಗಾವಲು, ನಿಯಂತ್ರಣ ಮತ್ತು ಜಾಗೃತಿಗೆ ಸಂಬಂಧಿಸಿದಂತೆ ಕೇರಳದಿಂದ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರಿಗೆ ವಿಶೇಷ ಸರ್ವೇಕ್ಷಣೆಯನ್ನು ನಿರ್ದೇಶಿಸಲಾಗಿದೆ.
ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಸಾರ್ವಜನಿಕರು ಮದ್ಯ ಸೇವನೆಗೆ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗಗಳ ಮದ್ಯದಂಗಡಿಗಳನ್ನೇ ಅವಲಂಬಿಸಿರುವುದರಿಂದ ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುವ ಸಾಧ್ಯತೆಗಳು ಇರುತ್ತದೆ.
ಕೊರೊನಾ ಮೂರನೇ ಅಲೆಯ ಎಚ್ಚರಿಕೆ
ಕೇರಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ 3ನೇ ಅಲೆ ಆರಂಭವಾಗುವ ಎಚ್ಚರಿಕೆಯನ್ನು ಆರೋಗ್ಯ ತಜ್ಞರು ನೀಡಿದ್ದಾರೆ. ಆದರೆ ರಾಜ್ಯ ಸರ್ಕಾರವು ಇದನ್ನು ಮೂರನೇ ಅಲೆ ಎಂದು ಅಧಿಕೃತವಾಗಿ ಕರೆದಿಲ್ಲ, ಆದರೆ ಜುಲೈ 4 ರಿಂದ ಪ್ರತಿ ದಿನವೂ 12 ರಿಂದ 14 ಸಾವಿರ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ.
ಜುಲೈನಿಂದ ದಿನನಿತ್ಯ 20 ರಿಂದ 22 ಸಾವಿರದವರೆಗೆ ಪ್ರಕರಣಗಳು ದಾಖಲಾಗುತ್ತಿವೆ. ಇದನ್ನು ಗಮನಿಸಿದರೆ ಈಗಾಗಲೇ ಕೊರೊನಾ ಮೂರನೇ ಅಲೆ ಆರಂಭವಾದಂತೆ ಗೋಚರಿಸುತ್ತದೆ. ಇದೀಗ ತುಂಬಾ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ, 3ನೇ ಅಲೆ ಬರುತ್ತಿದೆ.. ಅದಕ್ಕೆ ರೆಡಿಯಾಗಿ ಎಂದು ತಜ್ಞ ವೈದ್ಯರು ಹಿಂದಿನಿಂದಲೂ ಎಚ್ಚರಿಕೆ ನೀಡುತ್ತಲೇ ಬಂದಿದ್ದರು. ಆಗಸ್ಟ್ನಲ್ಲಿ ಮೂರನೇ ಅಲೆ ಹೊಡೆತ ನೀಡಲಿದೆ ಎಂದು ಸರ್ಕಾರಕ್ಕೆ ಮೊದಲೇ ಎಚ್ಚರಿಕೆ ನೀಡಿದ್ದರು.. ಆದರೂ ಬಕ್ರೀದ್ ಸಂದರ್ಭದಲ್ಲಿ ಮೂರು ದಿನ ಅವಕಾಶ ನೀಡಿದ್ದೇ ಕೊರೊನಾ ಹೆಚ್ಚಾಗಲು ಕಾರಣ. ಕೇರಳದಲ್ಲಿ ಕಳೆದ ನಾಲ್ಕು ದಿನಗಳಿಂದ 20 ಸಾವಿರಕ್ಕೂ ಅಧಿಕ ಸೋಂಕಿತರು ಪತ್ತೆಯಾಗ್ತಿದ್ರೂ.. ಜನ ರಿವೇಂಜ್ ಟೂರಿಸಂ ನೆಪದಲ್ಲಿ ಪ್ರವಾಸಿ ತಾಣಗಳಿಗೆ ಮುಗಿ ಬೀಳಲು ಶುರು ಮಾಡಿದ್ದಾರೆ.