ಕೇರಳ ಕೃಷಿ ಸಚಿವರಿಗೆ ಎರಡನೆಯ ಬಾರಿ ಕೋವಿಡ್ ಸೋಂಕು
ತಿರುವನಂತಪುರಂ, ಏಪ್ರಿಲ್ 15: ಕಳೆದ ವರ್ಷ ಕೋವಿಡ್ ಸೋಂಕಿಗೆ ಒಳಗಾಗಿದ್ದ ಕೇರಳದ ಕೃಷಿ ಸಚಿವ ವಿಎಸ್ ಸುನಿಲ್ ಕುಮಾರ್ ಅವರಲ್ಲಿ ಎರಡನೆಯ ಬಾರಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಅವರನ್ನು ತ್ರಿಶ್ಶೂರ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.
ಸುನಿಲ್ ಕುಮಾರ್ ಅವರ ಆರ್ಟಿ-ಪಿಸಿಆರ್ ಪರೀಕ್ಷೆಯಲ್ಲಿ ಸೋಂಕು ಇರುವುದು ದೃಢಪಟ್ಟ ಬಳಿಕ ಅವರ ಮಗ ನಿರಂಜನ್ ಕೃಷ್ಣ ಕೂಡ ಪರೀಕ್ಷೆಗೆ ಒಳಪಟ್ಟಿದ್ದು, ಅವರಲ್ಲಿಯೂ ಕೋವಿಡ್ ಪಾಸಿಟಿವ್ ಪತ್ತೆಯಾಗಿದೆ.
ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರಿಗೆ ಕೊರೊನಾವೈರಸ್
ವಿಎಸ್ ಸುನಿಲ್ ಕುಮಾರ್ ಮತ್ತು ಅವರ ಮಗ ನಿರಂಜನ್ ಕೃಷ್ಣ ಇಬ್ಬರೂ ನೆಗೆಟಿವ್ ವರದಿ ಬರುವವರೆಗೂ ತ್ರಿಶ್ಶೂರ್ ವೈದ್ಯಕೀಯ ಕಾಲೇಜಿನಲ್ಲಿಯೇ ಇರಲಿದ್ದಾರೆ. ಸಚಿವರು ಹಾಗೂ ಅವರ ಮಗನೊಂದಿಗೆ ಸಂಪರ್ಕಕ್ಕೆ ಬಂದ ಎಲ್ಲರೂ ಕೋವಿಡ್ ಪರೀಕ್ಷೆಗೆ ಒಳಗಾಗಬೇಕು ಮತ್ತು ಕ್ವಾರೆಂಟೈನ್ನಲ್ಲಿ ಇರಬೇಕು ಎಂದು ಆರೋಗ್ಯ ಇಲಾಖೆ ಸೂಚನೆ ಹೊರಡಿಸಿದೆ. ಸಚಿವರಲ್ಲಿ ಯಾವುದೇ ಆರೋಗ್ಯ ಸಮಸ್ಯೆಗಳು ಕಂಡುಬಂದಿಲ್ಲ ಎಂದು ಸಚಿವಾಲಯ ತಿಳಿಸಿದೆ.
ಕಳೆದ ವರ್ಷದ ಸೆಪ್ಟೆಂಬರ್ 23ರಂದು ಸುನಿಲ್ ಕುಮಾರ್ ಅವರು ಮೊದಲ ಬಾರಿ ಕೋವಿಡ್ ಸೋಂಕಿಗೆ ಒಳಗಾಗಿದ್ದರು. ತಿರುವನಂತಪುರಂ ವೈದ್ಯಕೀಯ ಕಾಲೇಜಿಗೆ ದಾಖಲಾಗಿದ್ದ ಅವರು, ಸೋಂಕಿನಿಂದ ಚೇತರಿಸಿಕೊಂಡಿದ್ದರು.
ನಡುವೆ ಚುನಾವಣೆ ಮುಗಿದ ಬೆನ್ನಲ್ಲೇ ಕೋವಿಡ್ ಸೋಂಕಿಗೆ ಒಳಗಾಗಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಚೇತರಿಸಿಕೊಂಡಿದ್ದು, ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿನಿಂದ ಬಿಡುಗಡೆಯಾಗಿದ್ದಾರೆ. ವರ ಆರೋಗ್ಯ ಸ್ಥಿತಿ ತೃಪ್ತಿಕರವಾಗಿದೆ ಎಂದು ವೈದ್ಯಕೀಯ ಮಂಡಳಿ ತಿಳಿಸಿದೆ.
ಕೇರಳದಲ್ಲಿ ವಿಧಾನಸಭೆ ಚುನಾವಣೆ ಏಪ್ರಿಲ್ 6ರಂದು ಮುಕ್ತಾಯವಾಗಿತ್ತು. ಪಿಣರಾಯಿ ಅವರು ಕೋವಿಡ್ ಸೋಂಕಿಗೆ ಒಳಗಾಗಿರುವುದು ಏ. 8ರಂದು ದೃಢಪಟ್ಟಿತ್ತು. ಬಳಿಕ ಕೋಯಿಕ್ಕೋಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅವರು ಕಣ್ಣೂರಿನ ತಮ್ಮ ನಿವಾಸಕ್ಕೆ ಮರಳಲಿದ್ದು, ಅಲ್ಲಿ ಕ್ವಾರೆಂಟೈನ್ ಅವಧಿ ಪೂರ್ಣಗೊಳಿಸಿದ ಬಳಿಕ ಕರ್ತವ್ಯಕ್ಕೆ ಮರಳಲಿದ್ದಾರೆ. ಅವರ ಪತ್ನಿ ಕಮಲ ಮತ್ತು ಮೊಮ್ಮಗ ಇಶಾನ್ ಕೂಡ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.