3.5 ಕೋಟಿ ದರೋಡೆ ಪ್ರಕರಣಕ್ಕೆ ಹೊಸ ತಿರುವು: ಕೇರಳದ ಬಿಜೆಪಿ ನಾಯಕರ ವಿಚಾರಣೆ
ಕೇರಳ ವಿಧಾನಸಭಾ ಚುನಾವಣೆಗೆ ಮೂರು ದಿನ ಮುನ್ನ ಏಪ್ರಿಲ್ 3 ರಂದು ನಡೆದ ಹೆದ್ದಾರಿ ದರೋಡೆ ಪ್ರಕರಣಕ್ಕೆ ಈಗ ಕುತೂಹಲಕಾರಿ ತಿರುವು ದೊರೆತಿದೆ. ಶನಿವಾರ ಕೇರಳ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಮೂವರು ಬಿಜೆಪಿ ನಾಯಕರನ್ನು ತನಿಖೆಗೆ ಒಳಪಡಿಸಿದೆ. ಬಳಕೆಯಾಗದ ಚುನಾವಣಾ ಫಂಡ್ಅನ್ನು ಹಂಚಿಕೊಳ್ಳುವ ಸಲುವಾಗಿ ಈ ದರೋಡೆ ನಾಟಕವನ್ನು ಸ್ಥಳೀಯ ಬಿಜೆಪಿ ನಾಯಕರು ಮಾಡಿದ್ದಾರೆ ಎಂದು ಆಡಳಿತಾರೂಢ ಎಡಪಂಥೀಯ ನಾಯಕರು ಆರೋಪವನ್ನು ಮಾಡಿದ್ದಾರೆ.
ಇಂಡಿಯನ್ ಎಕ್ಸ್ಪ್ರೆಸ್ ತ್ರಿಶೂರ್ ಪೊಲೀಸ್ ಮೂಲಗಳ ಮಾಹಿತಿಯನ್ನು ಆಧರಿಸಿ ಮಾಡಿದ ವರದಿಯಲ್ಲಿ ಶನಿವಾರ ಕ್ರೈಮ್ ಬ್ರ್ಯಾಂಚ್ ಪೊಲೀಸರು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಹಿರಿಯ ಆರ್ಎಸ್ಎಸ್ ಪ್ರಚಾರಕ್ ಎಂ ಗಣೇಶನ್ ಹಾಗೂ ರಾಜ್ಯ ಬಿಜೆಪಿ ಕಛೇರಿ ಕಾರ್ಯದರ್ಶಿ ಜಿ ಗಿರೀಶನ್ ಅವರಿಗೆ ನೋಟಿಸ್ ಕಳುಹಿಸಿದೆ. ತನಿಖಾ ತಂಡದ ಮುಂದೆ ಹಾಜರಾಗುವಂತೆ ನೋಟಿಸ್ನಲ್ಲಿ ತಿಳಿಸಲಾಗಿದೆ.
ಶನಿವಾರ ಮೂವರ ವಿಚಾರಣೆ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ತ್ರಿಶೂರ್ನ ಮೂವರು ಬಿಜೆಪಿ ನಾಯಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ ಆರ್ ಹರಿ, ಕೇಂದ್ರ ಪ್ರಾದೇಶಿಕ ಕಾರ್ಯದರ್ಶಿ ಕಾಶಿನಾಥನ್ ಮತ್ತು ಜಿಲ್ಲಾ ಖಜಾಂಚಿ ಸುಜಯ್ ಸೇನನ್ ಶನಿವಾರ ವಿಚಾರಣೆಗೆ ಒಳಗಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಈ ಮೂವರು ಕೂಡ ರಾಜ್ಯ ಬಿಜೆಪಿ ನಾಯಕರ ವಿರುದ್ಧವಾಗಿ ಹೇಳಿಕೆಯನ್ನು ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿದೆ.
ಪ್ರಕರಣ ಏನು?
ಕೇರಳ ವಿಧಾನಸಭೆ ಚುನಾವಣೆಗೆ ಮೂರು ದಿನ ಮುನ್ನ ತ್ರಿಶೂರ್-ಕೊಚ್ಚಿ ಹೆದ್ದಾರಿಯಲ್ಲಿ ದರೋಡೆಯಾಗಿದೆ ಎಂದು ಕಾರ್ನ ಡ್ರೈವರ್ ಪ್ರಕರಣವನ್ನು ದಾಖಲಿಸಿದ್ದರು. ಈ ಹಣ ಉದ್ಯಮಿ, ಆರ್ಎಸ್ಎಸ್ ಕಾರ್ಯಕರ್ತ ಎಕೆ ಧರ್ಮರಾಜನ್ ಎಂಬವರಿಗೆ ಸೇರಿದ್ದು ಎಂದು ಪತ್ತೆಹಚ್ಚಿದರು. ಆದರೆ ದೂರಿನಲ್ಲಿ 25 ಲಕ್ಷ ದರೋಡೆಯಾಗಿದೆ ಎಂದು ತಿಳಿಸಲಾಗಿದ್ದು ದರೋಡೆಕೋರರನ್ನು ಪತ್ತೆಹಚ್ಚಿ ನಗದು ವಶಪಡಿಸಿಕೊಂಡಾಗ 3.5 ಕೋಟಿ ರೂಪಾಯಿ ದರೋಡೆಯಾಗಿರುವುದು ಬೆಳಕಿಗೆ ಬಂದಿತ್ತು. ಹೀಗಾಗಿ ದೂರು ಹಾಗೂ ವಾಸ್ತವ ಘಟನೆಗೆ ವ್ಯತ್ಯಾಸವಿರುವುದು ಪೊಲೀಸರಿಗೆ ಅರಿವಾಗಿ ಬೇರೆಯದ್ದೇ ಅನುಮಾನ ಮೂಡಲು ಕಾರಣವಾಗಿತ್ತು. ನಂತರ ಈ ಹಣವನ್ನು ನಾನು ಬಿಜೆಪಿ ಮಾಜಿ ರಾಜ್ಯ ಬಿಜೆಪಿ ಯುವಮೋರ್ಚಾ ನಾಯಕ ಸುನಿಲ್ ನಾಯ್ಕ್ ಅವರಿಂದ ಪಡೆದುಕೊಂಡಿದ್ದೆ ಎಂದು ತಿಳಿಸಿದ್ದರು.
ಪೊಲೀಸ್ ತನಿಖೆ ಚುರುಕು
ಸದ್ಯ ಪೊಲೀಸ್ ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ ಬಿಜೆಪಿ ನಾಯಕರಿಗೆ ಈ ಹಣದ ವಿಚಾರವಾಗಿ ಮಾಹಿತಿಯಿದೆ. "ನಾವು ಈ ಹಣದ ಮೂಲ ಹಾಗೂ ಅದು ಯಾರ ಕೈಗೆ ಸೇರಬೇಕಾಗಿತ್ತು ಎಂಬುದರ ಬಗ್ಗೆ ತನಿಖೆಯನ್ನು ನಡೆಸುತ್ತಿದ್ದೇವೆ. ಈ ಹಣದ ಮೂಲವನ್ನು ಪರಿಶೀಲಿಸಲು ರಾಷ್ಟ್ರೀಯ ನಾಯಕರು ಸೇರಿದಂತೆ ಹೆಚ್ಚಿನ ಬಿಜೆಪಿ ನಾಯಕರನ್ನು ಪ್ರಶ್ನಿಸಲಾಗುವುದು" ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
19 ಜನರ ಬಂಧನ
ಈ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈವರೆಗೆ 19 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ ಹೆಚ್ಚಿನವರು ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದವರಾಗಿದ್ದು ಹವಾಲಾ ಹಣವನ್ನು ಲೂಟಿ ಮಾಡುವ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಮೂಲಗಳ ಮಾಹಿತಿಯ ಪ್ರಕಾರ ಉತ್ತರ ಕೇರಳದಿಂದ ಸೆಂಟ್ರಲ್ ಕೇರಳಕ್ಕೆ ಹಣ ವರ್ಗಾವಣೆಯ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಸೋರಿಕೆ ಮಾಡಲಾಗಿತ್ತು. ಈ ಲೂಟಿ ನಾಟಕವನ್ನಾಡಲು ಈ ದರೋಡೆ ಗ್ಯಾಂಗ್ಅನ್ನು ನೇಮಕ ಮಾಡಲಾಗಿತ್ತು ಎಂದು ವರದಿಯಾಗಿದೆ.