ಕೊರೊನಾ ಕಟ್ಟಿಹಾಕುವಲ್ಲಿ ದೇಶಕ್ಕೆ ಮಾದರಿಯಾದ ಕಾಸರಗೋಡು!
ತಿರುವನಂತಪುರಂ, ಏಪ್ರಿಲ್ 23: ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಜಾಸ್ತಿಯಾಗುತ್ತಲೇ ಇವೆ. ಕೋವಿಡ್-19 ನಿಂದ ಸಾವಿನ ಪ್ರಮಾಣ ಕೂಡ ಹೆಚ್ಚಾಗುತ್ತಿದ್ದು, ಸೋಂಕು ಹರಡುವುದನ್ನು ತಡೆಯಲು ಹಲವು ದೇಶಗಳು ಸಮರೋಪಾದಿಯ ಕಾರ್ಯಗಳನ್ನು ಕೈಗೊಳ್ಳುತ್ತಿವೆ.
ಅತ್ತ ಕೊರೊನಾ ಮಹಾಮಾರಿಯನ್ನು ಕಟ್ಟಿಹಾಕಲು ಹಲವು ರಾಷ್ಟ್ರಗಳು ಒದ್ದಾಡುತ್ತಿದ್ದರೆ, ಇತ್ತ ಕೊರೊನಾ ವೈರಸ್ ಸೋಂಕನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ-ಕೇರಳ ಗಡಿಯಲ್ಲಿ ಇರುವ ಪುಟ್ಟ ಜಿಲ್ಲೆ ಕಾಸರಗೋಡು ಮಾದರಿಯಾಗಿದೆ.
ಇಡೀ ಜಗತ್ತೇ ತಿರುಗಿ ನೋಡುವಂತೆ ಡೆಡ್ಲಿ ಕೊರೊನಾಗೆ ಸೆಡ್ಡು ಹೊಡೆದು ನಿಂತ ಪುಟ್ಟ ದ್ವೀಪ ರಾಷ್ಟ್ರ!
ವಿದೇಶಗಳಿಂದ ಹಿಂದಿರುಗಿದವರೇ ಹೆಚ್ಚು ಮಂದಿ ಇದ್ದ ಕಾಸರಗೋಡಿಗೆ ಹೆಚ್ಚು ಅಪಾಯ ಕಾದಿದೆ ಎಂದು ಮೊದಲು ಅಂದಾಜಿಸಲಾಗಿತ್ತು. ಆದ್ರೆ, ಅಲ್ಲಿನ ವೈದ್ಯರು ಮತ್ತು ಹೆಲ್ತ್ ವರ್ಕರ್ಸ್ ಪಟ್ಟ ಶ್ರಮ, ಸರ್ಕಾರ ಕೈಗೊಂಡ ಕ್ರಮಗಳು ಹಾಗೂ ಜನತೆ ಕೊಟ್ಟ ಸಹಕಾರದಿಂದ ಕಾಸರಗೋಡಿನಲ್ಲಿ ಕೊರೊನಾ ವೈರಸ್ ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ.
ಹೆಚ್ಚು ಮಂದಿ ಗುಣಮುಖರಾಗಿದ್ದಾರೆ
168 ದೃಢಪಟ್ಟ ಕೋವಿಡ್-19 ಪಾಸಿಟಿವ್ ಪ್ರಕರಣಗಳ ಪೈಕಿ 113 ಮಂದಿ ಈಗಾಗಲೇ ಸಂಪೂರ್ಣವಾಗಿ ಗುಣಮುಖರಾಗಿ, ಆಸ್ಪತ್ರೆಗಳಿಂದ ಡಿಸ್ಚಾರ್ಚ್ ಆಗಿದ್ದಾರೆ. ಕಾಸರಗೋಡಿನಲ್ಲಿ ರೋಗ ಗುಣಮುಖ ಹೊಂದಿರುವ ಪ್ರಮಾಣ 67.2% ರಷ್ಟಿದೆ. ಹಾಗ್ನೋಡಿದ್ರೆ, ಇಡೀ ಭಾರತದಲ್ಲಿ ಕೋವಿಡ್-19 ಗುಣಮುಖ ಹೊಂದಿರುವ ಪ್ರಾಣ ಸರಾಸರಿ 13.6% ರಷ್ಟಿದೆ.
ಅಪಾಯದಿಂದ ಪಾರು
ಅಷ್ಟಕ್ಕೂ, ಕಾಸರಗೋಡಿನಲ್ಲಿ 15.38% ರಷ್ಟು ಜನತೆ ವಿದೇಶಗಳಿಂದ ಹಿಂದಿರುಗಿದ್ದರು. ಹೀಗಾಗಿ, ವಿದೇಶಗಳಿಂದ ಬಂದವರಲ್ಲಿ ಇದ್ದ ಸೋಂಕು ಸ್ಥಳೀಯರಿಗೆ ಹಬ್ಬದಂತೆ ತಡೆಯುವುದು ಕಾಸರಗೋಡು ಜಿಲ್ಲಾಡಳಿತಕ್ಕೆ ದೊಡ್ಡ ಟಾಸ್ಕ್ ಆಗಿತ್ತು. ವಿದೇಶಗಳಿಂದ ವಾಪಸ್ ಆದವರ ಕಾಂಟಾಕ್ಟ್ ಟ್ರೇಸ್ ಮಾಡಿ, ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಿ, ಬೇಗ ಕ್ವಾರಂಟೈನ್ ನಲ್ಲಿ ಇಟ್ಟ ಪರಿಣಾಮ ಕಾಸರಗೋಡಿನ ಜನ ದೊಡ್ಡ ಅಪಾಯದಿಂದ ತಪ್ಪಿಸಿಕೊಂಡಿದ್ದಾರೆ.
ಸೋಂಕಿತರ ಪ್ರಮಾಣ ಗಣನೀಯ ಇಳಿಕೆ
ಸಾಮಾಜಿಕ ಅಂತರದ ಮಹತ್ವ ಮತ್ತು ಕೋವಿಡ್-19 ಬಗ್ಗೆ ಜಿಲ್ಲಾಡಳಿತ ಕೈಗೊಂಡ ಜಾಗೃತಿ ಕಾರ್ಯಕ್ರಮಗಳಿಂದ ಕಾಸರಗೋಡಿನಲ್ಲಿ ಸೋಂಕಿತರ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ.
ಒಂದೂ ಸಾವು ಸಂಭವಿಸಿಲ್ಲ
ಮತ್ತೊಂದು ಗಮನಾರ್ಹ ಅಂಶ ಏನಂದ್ರೆ, ಕಾಸರಗೋಡಿನಲ್ಲಿ ಕೋವಿಡ್-19 ನಿಂದ ಈವರೆಗೂ ಒಂದೇ ಒಂದು ಸಾವು ಸಂಭವಿಸಿಲ್ಲ. ಹೆಚ್ಚು ಕೊರೊನಾ ಸೋಂಕಿತರು, ನಿಯಮಿತ ವೈದ್ಯಕೀಯ ಸೌಲಭ್ಯ ಇದ್ದರೂ, ಕೊರೊನಾ ವೈರಸ್ ಸೋಂಕನ್ನು ತಡೆಯುವಲ್ಲಿ ಕಾಸರಗೋಡು ನಿಜಕ್ಕೂ ಯಶಸ್ವಿಯಾಗಿದೆ.