ಕಾರ್ತಿಕ ಸೋಮವಾರ ದೀಪಾಚರಣೆಗೆ ಶಬರಿಮಲೆ ಸಜ್ಜು
ತಿರುವನಂತಪುರಂ, ಡಿ.6: ಕೋವಿಡ್ 19 ಸೋಂಕಿನ ಮಾರ್ಗಸೂಚಿ ನಿರ್ಬಂಧಗಳನ್ನು ತಿರುವಾಂಕೂರು ದೇವಸ್ವಂ ಮಂಡಳಿ(ಟಿಡಿಬಿ) ಸಡಿಲಿಸಿದೆ. ಕಾರ್ತಿಕ ಹುಣ್ಣಿಮೆ ಆಚರಣೆ ಬಳಿಕ ಇದೀಗ ಕಾರ್ತಿಕ ಸೋಮವಾರದಂದು ದೀಪಾಚರಣೆ ಶಬರಿಮಲೆ ದೇಗುಲ ಸಜ್ಜಾಗಿದೆ.
ಶಬರಿಮಲೆ ಯಾತ್ರೆಗೆ ತೆರಳುವ ಭಕ್ತರ ಸಂಖ್ಯೆ ಮಿತಿಯನ್ನು ಹೆಚ್ಚಿಸಲಾಗಿದೆ. ದೈನಂದಿನ ಭಕ್ತರ ಸಂಖ್ಯೆಯನ್ನು ಗರಿಷ್ಠ ಮಿತಿಯನ್ನು 1,000 ದಿಂದ 2,000ಕ್ಕೆ ಹೆಚ್ಚಿಸಲಾಗಿದೆ. ಹಾಗೆಯೇ ವಾರಾಂತ್ಯಗಳು ಮತ್ತು ರಜೆ ದಿನಗಳಲ್ಲಿ 2,000ಕ್ಕೆ ನಿಗದಿಗೊಳಿಸಲಾಗಿರುವ ಭಕ್ತರ ಸಂಖ್ಯೆಯನ್ನು 3,000ಕ್ಕೆ ಹೆಚ್ಚಿಸಲಾಗಿದೆ.
ಶಬರಿಮಲೆಗೆ ತೆರಳಲು ಬರುವ ಭಕ್ತರು ನಿಳಕ್ಕಳ್ ಮತ್ತು ಪಂಬಾ ಶಿಬಿರಗಳಿಗೆ ಬರುವ 24 ಗಂಟೆ ಮುನ್ನ ಕೋವಿಡ್ ನೆಗೆಟಿವ್ ಪರೀಕ್ಷೆಯ ವರದಿ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಅನೇಕ ಕಡೆ ಕೋವಿಡ್ ಪರೀಕ್ಷೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ದೇವಾಲಯದ ಆವರಣದಲ್ಲಿ ಉಳಿದುಕೊಳ್ಳಲು ಭಕ್ತರಿಗೆ ಅವಕಾಶ ನೀಡುತ್ತಿಲ್ಲ.
ತಮಿಳುನಾಡು ಹಾಗೂ ಕೇರಳದಲ್ಲಿ ವಿಶೇಷವಾಗಿ ಆಚರಿಸುವ ಕಾರ್ತಿಕ ದೀಪಂ ಆಚರಣೆಯ ಸಂಭ್ರಮವನ್ನು ನವೆಂಬರ್ 30ರಂದು ಕಾಣಲಾಯಿತು. ಡಿಸೆಂಬರ್ 7 ಹಾಗೂ 14ರಂದು ಕಾರ್ತಿಕ ಸೋಮವಾರದಂದು ವಿಶೇಷ ದೀಪಾರಾಧನೆ ನೆರವೇರಸಲಾಗುತ್ತದೆ.
ಶಬರಿಮಲೆಗೆ ತೆರಳಲು ಸಾಧ್ಯವಾಗದ ಭಕ್ತರಿಗೆ ಪರ್ಯಾಯ ಆಯ್ಕೆ
ಚಾತುರ್ಮಾಸ ಕೊನೆಗೊಂಡು ದೀಪಗಳಿಂದ ಅಲಂಕರಿಸಲಾದ ದೇಗುಲವು ವರ್ಣಮಯವಾಗಿತ್ತು. ಹರಿಹರ ಇಬ್ಬರನ್ನು ಒಮ್ಮೆಗೆ ಆರಾಧಿಸುವ ಕಾರ್ತಿಕ ಮಾಸದಲ್ಲಿ ಹರಿಹರ ಸುತ ಅಯ್ಯಪ್ಪನನ್ನು ಕಂಡ ಭಕ್ತ ಸಮೂಹ ಒಕ್ಕೊರಲಿನಿಂದ ''ಸ್ವಾಮಿಯೇ ಶರಣಂ ಅಯ್ಯಪ್ಪ'' ಎನ್ನುತ್ತಾ ಭಾವಪರವಶರಾಗಿದ್ದಾರೆ.