ಕರ್ನಾಟಕ-ಕೇರಳ ಗಡಿ ತೆರವು; ಅಂಬ್ಯುಲೆನ್ಸ್ ಓಡಾಟಕ್ಕೆ ಒಪ್ಪಿಗೆ
ತಿರುವನಂತಪುರಂ, ಏಪ್ರಿಲ್ 07: ಕರ್ನಾಟಕ-ಕೇರಳ ನಡುವಿ ಗಡಿಯನ್ನು ತೆರವು ಮಾಡುವ ವಿವಾದ ಇತ್ಯರ್ಥವಾಗಿದೆ. ಕೇರಳದ ಅಂಬ್ಯುಲೆನ್ಸ್ಗಳು ಕರ್ನಾಟಕವನ್ನು ಪ್ರವೇಶ ಮಾಡಲು ಒಪ್ಪಿಗೆ ನೀಡಲಾಗಿದೆ. ಈ ವಿವಾದ ಸುಪ್ರೀಂಕೋರ್ಟ್ ಮೆಟ್ಟಿಲನ್ನು ಸಹ ಏರಿತ್ತು.
Recommended Video
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಕುರಿತು ಮಾಹಿತಿ ನೀಡಿದ್ದಾರೆ. "ವೈದ್ಯಕೀಯ ಪ್ರಮಾಣ ಪತ್ರವನ್ನು ಹಾಜರುಪಡಿಸಿ ಅಂಬ್ಯುಲೆನ್ಸ್ ಮೂಲಕ ರೋಗಿಗಳನ್ನು ಕರ್ನಾಟಕದ ಆಸ್ಪತ್ರೆಗೆ ದಾಖಲು ಮಾಡಲು ಕರ್ನಾಟಕ ಒಪ್ಪಿಗೆ ನೀಡಿದೆ" ಎಂದು ಹೇಳಿದ್ದಾರೆ.
ಕರ್ನಾಟಕ-ಕೇರಳ ಗಡಿಯಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ
"ಕೋವಿಡ್ - 19 ಸೋಂಕಿತರಲ್ಲದ ರೋಗಿಗಳನ್ನು ಮಾತ್ರ ಕರ್ನಾಟಕಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲು ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿದೆ" ಎಂದು ಪಿಣರಾಯಿ ವಿಜಯನ್ ಸ್ಪಷ್ಟನೆ ನೀಡಿದ್ದಾರೆ.
ಕೊರೊನಾ ಸೋಂಕು ಇಲ್ಲದ ರೋಗಿಗಳನ್ನು ಮಾತ್ರ ಕರ್ನಾಟಕದ ಒಳಗೆ ಬಿಡಲಾಗುತ್ತದೆ. ಕರ್ನಾಟಕದ ವೈದ್ಯರ ತಂಡ ಗಡಿಯಾದ ತಲಪಾಡಿ ಚೆಕ್ ಪೋಸ್ಟ್ನಲ್ಲಿ ರೋಗಿಗಳ ತಪಾಸಣೆ ನಡೆಸಲಿದೆ. ಕಾಸರಗೋಡಿನ ತಲಪಾಡಿ ಮೂಲಕ ರೋಗಿಗಳನ್ನು ಮಂಗಳೂರಿಗೆ ಕರೆದುಕೊಂಡು ಬರಬಹುದಾಗಿದೆ.
ಕೇರಳದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾದ ಬಳಿಕ ಕರ್ನಾಟಕ ಗಡಿಯನ್ನು ಬಂದ್ ಮಾಡಿತ್ತು. ಯಾವುದೇ ರೋಗಿಗಳು ದಕ್ಷಿಣ ಕನ್ನಡಕ್ಕೆ ಆಗಮಿಸದಂತೆ ಗಡಿ ಬಂದ್ ಮಾಡಲಾಗಿತ್ತು. ಈ ಕುರಿತು ಕೇರಳ ಕೇಂದ್ರ ಸರ್ಕಾರಕ್ಕೂ ಮನವಿ ಮಾಡಿತ್ತು.
ಗಡಿ ತೆರೆಯುವ ವಿಚಾರದಲ್ಲಿ ಕರ್ನಾಟಕ ಮತ್ತು ಕೇರಳ ನಡುವೆ ಸಾಕಷ್ಟು ಪತ್ರ ವ್ಯವಹಾರಗಳು ನಡೆದಿದ್ದವು. ಆದರೆ, ಕರ್ನಾಟಕ ಗಡಿ ತೆರೆಯುವುದಿಲ್ಲ ಎಂದು ಪಟ್ಟು ಹಿಡಿದು ಕೂತಿತ್ತು. ಅಂತಿಮವಾಗಿ ಕೇರಳದ ಸಂಸದರೊಬ್ಬರು ಈ ಕುರಿತು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.