ಪಿಜಿ 3ನೇ ಸೆಮಿಸ್ಟರ್ನಲ್ಲಿ ಸಾವರ್ಕರ್ ಪಠ್ಯ ಬೋಧನೆ ಇಲ್ಲ: ಕಣ್ಣೂರು ವಿಶ್ವವಿದ್ಯಾಲಯ
ಕಣ್ಣೂರು, ಸೆಪ್ಟೆಂಬರ್ 17: ಪಿಜಿ ವಿದ್ಯಾರ್ಥಿಗಳಿಗೆ 3ನೇ ಸೆಮಿಸ್ಟರ್ನಲ್ಲಿ ಆರ್ಎಸ್ಎಸ್ ಮುಖಂಡ ಎಂಎಸ್ ಗೋಲ್ವಾಲ್ಕರ್ ಹಾಗೂ ಹಿಂದೂ ಮಹಾಸಭಾ ಮುಖಂಡ ವಿಡಿ ಸಾರ್ವರ್ಕರ್ ಪಠ್ಯವನ್ನು ಬೋಧಿಸುವುದಿಲ್ಲ ಎಂದು ಕಣ್ಣೂರು ವಿಶ್ವವಿದ್ಯಾಲಯದ ಉಪ ಕುಲಪತಿ ಗೋಪಿನಾಥ್ ರವೀಂದ್ರನ್ ಹೇಳಿದ್ದಾರೆ.
ಪಠ್ಯಗಳಲ್ಲಿ ಹಲವು ಬದಲಾವಣೆಗಳನ್ನು ತರಲಾಗಿದೆ. ನಾಲ್ಕನೇ ಸೆಮಿಸ್ಟರ್ನಲ್ಲಿ ಪಠ್ಯಗಳನ್ನು ಬೋಧಿಸಲಾಗುತ್ತದೆ. ವಿಶ್ವವಿದ್ಯಾಲಯದ ಹೊಸ ಪಠ್ಯಕ್ರಮದಲ್ಲಿ ಬದಲಾವಣೆ ಮಾಡಲು ಸೂಚಿಸಲಾಗಿದೆ. ಬದಲಾವಣೆಗಳು ಆದ ಬಳಿಕ ಸಮಿತಿಗೆ ಕಳುಹಿಸಲಾಗುವುದು ಎಂದರು.
ವಿಶ್ವವಿದ್ಯಾಲಯದ ನಿರ್ಧಾರವು ವಿವಿಧ ವಿದ್ಯಾರ್ಥಿ ಸಂಘಟನೆಗಳಿಂದ ಟೀಕೆಗೆ ಒಳಗಾಯಿತು. ತಜ್ಞರ ಸಮಿತಿ ವರದಿಯನ್ನು ಅಧ್ಯಯನ ಮಂಡಳಿಗೆಕಳುಹಿಸಲಾಗಿದೆ ಎಂದು ರವೀಂದ್ರನ್ ಹೇಳಿದ್ದಾರೆ.
ಎಡರಂಗದ ಪ್ರಾಬಲ್ಯವಿರುವ ಕಣ್ಣೂರು ವಿಶ್ವವಿದ್ಯಾಲಯದ ಕೋರ್ಸ್ಗಳ ಪಠ್ಯಕ್ರಮವನ್ನು ಕೇಸರೀಕರಣಗೊಳಿಸಲಾಗಿದ್ದು, ಪಠ್ಯಕ್ರಮದಲ್ಲಿ ಸಾರ್ವಕರ್ ಮತ್ತು ಗೋಲ್ವಾಲ್ಕರ್ ಅವರ ಕುರಿತಾದ ವಿಚಾರಗಳ ಸೇರ್ಪಡೆಗೊಳಿಸಲಾಗಿದೆ ಎಂಬ ಆರೋಪವನ್ನು ಉಪಕುಲಪತಿ ಗೋಪಿನಾಥ್ ನಿರಾಕರಿಸಿದ್ದರು.
ಪಠ್ಯಕ್ರಮ ಸಿದ್ಧಪಡಿಸುವಿಕೆ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ ಹಾಗೂ ವಿವಾದದ ಕುರಿತಂತೆ ದ್ವಿಸದಸ್ಯ ಸಮಿತಿ ಪರಿಶೀಲಿಸಲಿದೆ ಎಂದು ಅವರು ಹೇಳಿದ್ದರು. ಪಠ್ಯಕ್ರಮದಲ್ಲಿ ಸಾವರ್ಕರ್ ಮತ್ತು ಗೋಲ್ವಾಲ್ಕರ್ ಅವರ ಕುರಿತಾದ ವಿಚಾರಗಳ ಸೇರ್ಪಡೆ ತಪ್ಪಲ್ಲ, ಪಠ್ಯಕ್ರಮವನ್ನು ರದ್ದುಗೊಳಿಸುವುದಿಲ್ಲ ಎಂದಿದ್ದರು.
ತಲಶ್ಮೇರಿಯ ಸರ್ಕಾರಿ ಕಾಲೇಜಿನಲ್ಲಿ ಸಾರ್ವಜನಿಕ ಆಡಳಿತದ ಸ್ನಾತಕೋತ್ತರ ಕೋರ್ಸ್ನ ಪಠ್ಯ ಕ್ರಮದಲ್ಲಿ ಸಾವರ್ಕರ್ ಬರೆದ ಹಿಂದುತ್ವ, ಹಿಂದೂ ಯಾರು?, ಎಂಎಸ್ ಗೋಲ್ವಾಲ್ಕರ್ ಬರೆದ ನಾವು ಮತ್ತು ರಾಷ್ಟ್ರೀಯವಾದ ಪರಿಕಲ್ಪನೆ, ಬಾಲರಾಜ್ ಮೊಧೋಕ್ರ ಭಾರತೀಕರಣ, ಯಾಕೆ?ಹೇಗೆ?ಏನು? ಹಾಗೂ ದೀನ್ ದಯಾಳ್ ಉಪಾಧ್ಯಾಯರ ಸಮಗ್ರ ಮಾನವತಾವಾದ ಎಂಬ ಪುಸ್ತಕವನ್ನು ಸೇರಿಸಲಾಗಿತ್ತು.
ಕೇಸರೀಕರಣದ ಆರೋಪ ನಿರಾಧಾರ, ಇಂತಹ ಆರೋಪಗಳನ್ನು ಕಣ್ಣೂರು ವಿವಿ ವಿರುದ್ಧ ಮಾಡಿದರೆ ಅಂತುಹುದೇ ಆರೋಪಗಳನ್ನು ಜವಾಹರ್ಲಾಲ್ ನೆಹರೂ ವಿವಿ ಕುರಿತೂ ಮಾಡಬಹುದು, ಪಠ್ಯದಲ್ಲಿ ಸಾವರ್ಕರ್, ಗೋಲ್ವಾಲ್ಕರ್ ಸೇರ್ಪಡೆ ತಪ್ಪಲ್ಲ ಎಂದು ಹೇಳಿದರು.
ರಾಜ್ಯದ ಉನ್ನತ ಶಿಕ್ಷಣ ಸಚಿವರಾದ ಆರ್ ಬಿಂದು ಈ ವಿವಾದ ಕುರಿತಂತೆ ಸ್ಪಷ್ಟೀಕರಣ ಕೇಳಿರುವ ಬಗ್ಗೆ ಅವರ ಗಮನ ಸೆಳೆದಾಗ ಈಗಾಗಲೇ ಉತ್ತರಿಸಿರುವುದಾಗಿ ತಿಳಿಸಿದ್ದಾರೆ. ಶೈಕ್ಷಣಿಕ ಪಠ್ಯಕ್ರಮದಲ್ಲಿ ಮತೀಯ ಶಕ್ತಿಗಳು ಜಾಗ ಪಡೆಯುತ್ತಿರುವುದು ಅಪಾಯಕಾರಿ ಎಂದು ಸಚಿವೆ ಈ ಹಿಂದೆ ಹೇಳಿದ್ದರು.