ಶಬರಿಮಲೆ ಪ್ರವೇಶಿಸಿದ್ದ ಮಹಿಳೆ ಮನೆಯಿಂದ ಹೊರಕ್ಕೆ
ತಿರುವನಂತಪುರಂ, ಜನವರಿ 22: ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಮೊದಲು ಪ್ರವೇಶಿಸಿದ್ದ ಇಬ್ಬರು ಮಹಿಳೆಯರಲ್ಲಿ ಒಬ್ಬರಾದ ಕನಕದುರ್ಗಾ (39) ಅವರನ್ನು ಮಂಗಳವಾರ ಗಂಡನ ಮನೆಯಿಂದ ಹೊರಹಾಕಲಾಗಿದೆ.
ಕನಕದುರ್ಗಾ ಅವರ ಮೇಲೆ ಅತ್ತೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದ ವಾರದ ಬಳಿಕ ಈ ಘಟನೆ ನಡೆದಿದೆ. ಹಲ್ಲೆ ಘಟನೆ ಬಳಿಕ ಕನಕದುರ್ಗಾ ಅವರನ್ನು ಕೊಯಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಶಬರಿಮಲೆ ಪ್ರವೇಶಿಸಿದ್ದ ಇಬ್ಬರು ಮಹಿಳೆಯರಿಗೆ 24 ಗಂಟೆ ಭದ್ರತೆ ಕೊಡಿ: ಸುಪ್ರೀಂ
ತಮ್ಮನ್ನು ಗಂಡನ ಮನೆಯಿಂದ ಹೊರಹಾಕಿದ ಬಳಿಕ ಕನಕದುರ್ಗಾ ಜಿಲ್ಲಾ ಹಿಂಸಾಚಾರ ರಕ್ಷಣಾ ಅಧಿಕಾರಿಗೆ ದೂರು ನೀಡಿದ್ದಾರೆ. ಈ ದೂರನ್ನು ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ. ಆದೇಶಕ್ಕಾಗಿ ಕಾಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕನಕದುರ್ಗಾ ಅವರನ್ನು ಮೊದಲು ಮನೆಗೆ ಕರೆದುಕೊಂಡು ಹೋದಾಗ ಆಕೆಯ ಪತಿ ಬಾಗಿಲು ಹಾಕಿಕೊಂಡು ತಾಯಿ ಹಾಗೂ ಇಬ್ಬರು ಮಕ್ಕಳೊಂದಿಗೆ ಮನೆ ತೊರೆದಿದ್ದರು. ಕನಕ ದುರ್ಗಾ ಪ್ರಸ್ತುತ ಸರ್ಕಾರಿ ಆಶ್ರಮದಲ್ಲಿ ಪೊಲೀಸರ ರಕ್ಷಣೆಯಲ್ಲಿ ಆಸರೆ ಪಡೆದಿದ್ದಾರೆ.
ದೇವಾಲಯ ಪ್ರವೇಶಿಸಿದ್ದ ಮಹಿಳೆಯರು
40 ವರ್ಷ ವಯಸ್ಸಿನ ಬಿಂದು ಅಮ್ಮಿಣಿ ಎಂಬ ಕೇರಳದ ಕಣ್ಣೂರು ವಿವಿಯ ಕಾನೂನು ಉಪನ್ಯಾಸಕಿ ಮತ್ತು 39 ವರ್ಷ ವಯಸ್ಸಿನ ಕನಕದುರ್ಗಾ ಎಂಬ ಮಹಿಳೆಯರಿಬ್ಬರು ಜನವರಿ 2 ರಂದು ಬೆಳಿಗ್ಗೆ ಸುಮಾರು 3:45 ರ ಸುಮಾರಿಗೆ ಪೊಲೀಸರ ಭದ್ರತೆಯಲ್ಲಿ ದೇವಾಲಯ ಪ್ರವೇಶಿಸಿದ್ದರು. ಈ ಘಟನೆಯ ನಂತರ ಹಲವು ಹಿಂದುಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದರೆ, ಮತ್ತಷ್ಟು ಜನ ಇದನ್ನು ಕ್ರಾಂತಿ ಎಂದು ಬಣ್ಣಿಸಿದ್ದರು.
ಅಡಗಿ ಕುಳಿತಿದ್ದ ಮಹಿಳೆಯರು
ಆದರೆ, ದೇವಸ್ಥಾನಕ್ಕೆ ತೆರಳಿದ ಬಳಿಕ ಇಬ್ಬರು ಮಹಿಳೆಯರು ತಮ್ಮ ಗ್ರಾಮಕ್ಕೆ ತೆರಳದೆ ಬೇರೆಡೆ ಗೋಪ್ಯ ಸ್ಥಳದಲ್ಲಿ ಆಶ್ರಯ ಪಡೆದಿದ್ದರು. ಇಬ್ಬರಿಗೂ ಬೆದರಿಕೆ ಕರೆಗಳು ಬರುತ್ತಿದ್ದರಿಂದ ಕೊಚ್ಚಿಯ ಹೊರವಲಯದ ಸ್ಥಳದಲ್ಲಿ ಅಡಗಿಕುಳಿತಿದ್ದರು. ಬಳಿಕ ಇಬ್ಬರೂ ಪೊಲೀಸರ ಭದ್ರತೆಯಲ್ಲಿ ಎರಡು ವಾರಗಳ ಬಳಿಕ ಮನೆಗೆ ತೆರಳಿದ್ದರು.
ಶಬರಿಮಲೆಗೆ ಮಹಿಳೆಯರ ಪ್ರವೇಶ: ಮಾಸ್ಟರ್ ಪ್ಲಾನ್ ಮಾಡಿದ್ದು ಮಡಿಕೇರಿಯಲ್ಲಿ!
ಅತ್ತೆಯಿಂದ ಹಲ್ಲೆ
ಮನೆಗೆ ಮರಳಿದ ಕನಕದುರ್ಗಾ ಅವರ ಮೇಲೆ ಆಕೆಯ ಅತ್ತೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು. ಸೊಸೆಯ ಕೃತ್ಯದಿಂದ ಆಕ್ರೋಶಗೊಂಡಿದ್ದ ಅತ್ತೆ ತಮ್ಮ ಕೋಪವನ್ನು ಹಲ್ಲೆ ಮೂಲಕ ತೀರಿಸಿಕೊಂಡಿದ್ದರು. ಕನಕದುರ್ಗಾ ಅವರ ತಲೆಗೆ ಹೊಡೆತ ಬಿದ್ದಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಶಬರಿಮಲೆ ಗರ್ಭಗುಡಿ ಪ್ರವೇಶಿಸಿದರೇ 46 ವರ್ಷದ ಶ್ರೀಲಂಕಾ ಮಹಿಳೆ?
ಮಹಿಳೆಯರ ಪ್ರವೇಶ 51 ಮಹಿಳೆಯರು ದೇಗುಲ ಪ್ರವೇಶ
ಶಬರಿಮಲೆಗೆ ಎಲ್ಲ ವಯಸ್ಸಿನ ಮಹಿಳೆಯರಿಗೂ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಕಳೆದ ವರ್ಷ ಸುಪ್ರೀಂ ಕೋರ್ಟ್ ನಿಂದ ತೀರ್ಪು ಬಂದ ನಂತರ 51 ಮಹಿಳೆಯರು ದೇಗುಲ ಪ್ರವೇಶ ಮಾಡಿದ್ದಾರೆ ಎಂದು ಕೇರಳ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ಗೆ ಮಾಹಿತಿ ನೀಡಿತ್ತು.