ಪಿಣರಾಯಿ ವಿರುದ್ದ ಒಡೆಯಿತೇ ಹಿಂದೂಗಳ ಸಹನೆಯ ಕಟ್ಟೆ: ಅಡ್ವಾಂಟೇಜ್ ಬಿಜೆಪಿ
ಕೇರಳದ ರಾಜಕೀಯಕ್ಕೆ ವಿಚಾರಕ್ಕೆ ಬಂದಾಗ, ಅಲ್ಲಿ ನೇರ ಹಣಾಹಣಿ ಕಮ್ಯೂನಿಸ್ಟ್ ಮತ್ತು ಎಲ್ಡಿಎಫ್ ನಡುವೆ. ಬಿಜೆಪಿ ಇಲ್ಲಿ ಹೆಚ್ಚಿನ ಸೀಟ್ ಪಡೆಯಲು ವಿಫಲವಾಗುತ್ತಾ ಬರುತ್ತಿದ್ದರೂ, ಒಟ್ಟಾರೆಯಾಗಿ ಇತ್ತೀಚಿನ ದಿನಗಳಲ್ಲಿ ಬಿಜೆಪಿಯ ಸಾಧನೆ ಗಮನಾರ್ಹ. 2011ರಲ್ಲಿ ಶೇ. 6.3 ಪಡೆದಿದ್ದ ಬಿಜೆಪಿ, 2016ರಲ್ಲಿ ಶೇ.16 ಮತಗಳನ್ನು ಪಡೆದಿತ್ತು.
ಬಿಜೆಪಿಯ ಈ ಸಾಧನೆಯಿಂದಾಗಿ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಹಿಂದುತ್ವ ಮತ್ತು ಹಿಂದೂಗಳ ಮತಗಳೇ ನಿರ್ಣಾಯಕವಾಗಿರುವ 26 ಕ್ಷೇತ್ರಗಳಲ್ಲಿ, ಬಿಜೆಪಿ ಕಡೆ ಶೇ. ಆರರಷ್ಟು ಮತಗಳು ವಾಲಿದ್ದರಿಂದ, ಯುಡಿಎಫ್ ಇಲ್ಲಿ ತೀವ್ರ ಹಿನ್ನಡೆ ಅನುಭವಿಸಿತು. ಇದರ ಲಾಭವನ್ನು ಪಿಣರಾಯಿ ವಿಜಯನ್ ಪಡೆದರು.
ಕೇರಳದಲ್ಲಿ ದಿನೇದಿನೇ ಹೆಚ್ಚಾಗುತ್ತಿರುವ ಬಿಜೆಪಿ ಪ್ರಭಾವ: ಪಿಣರಾಯಿಗೆ ಅದೇ ಚಿಂತೆ?
ಪಿಣರಾಯಿ ನೇತೃತದ ಕಮ್ಯೂನಿಸ್ಟರ ಸರಕಾರ ಅಧಿಕಾರಕ್ಕೆ ಬಂದ ನಂತರ, ಕೇಸರಿ ಮತ್ತು ಕೆಂಪು ಬಣಗಳ ನಡುವಿನ ಮಾರಾಮಾರಿಯಲ್ಲಿ ಇತ್ತಂಡಗಳ ಕಾರ್ಯಕರ್ತರು ಸಾವನ್ನಪ್ಪಿದ್ದರು, ಅದರಲ್ಲೂ ಕೇಸರಿ ಪಾಳಯ ಹೆಚ್ಚಿನ ಸಾವು, ನೋವು ಎದುರಿಸಬೇಕಾಯಿತು. ಸಾಲುಸಾಲು ಕೊಲೆಗಳು, ದ್ವೇಷದ ಘಟನೆಗಳು ನಡೆಯುತ್ತಲೇ ಬಂದವು.
ಆದರೂ, ಪಿಣರಾಯಿ ಸರಕಾರ ಕಾನೂನು ಸುವ್ಯವಸ್ಥೆಯನ್ನು ಬಲಪಡಿಸುವ ಬದಲು ಬಿಜೆಪಿ, ಸಂಘ ಪರಿವಾರವನ್ನು ದೂಷಿಸಲು ಆರಂಭಿಸಿದರು. ಯಾವಾಗ, ಈ ಘಟನೆಗಳು ರಾಷ್ಟ್ರ ಮಟ್ಟದಲ್ಲಿ ಪ್ರತಿಧ್ವನಿಸಲು ಆರಂಭಿಸಿತೋ, ಹಿಂದೂ ಕಾರ್ಯಕರ್ತರ ಸರಣಿ ಹತ್ಯೆಗಳು ಕಮ್ಮಿಯಾಗಲಾರಂಭಿಸಿತು. ಈ ಎಲ್ಲಾ ವಿದ್ಯಮಾನಗಳು, ಹಿಂದೂಗಳ ತೀವ್ರ ಕೋಪಕ್ಕೆ ಬುನಾದಿ ಹಾಡಿತು ಎಂದೇ ವ್ಯಾಖಾನಿಸಲಾಗುತ್ತಿದೆ.
ಶಬರಿಮಲೆಯನ್ನುRSS ರಣರಂಗವನ್ನಾಗಿಸಿದೆ: ಪಿಣರಾಯಿ ವಿಜಯನ್
ಇದಾದ ನಂತರ, ಕೇರಳದ ಪ್ರವಾಹದ ವೇಳೆ, ಸಂಘ ಪರಿವಾರದ ಕಾರ್ಯಕರ್ತರು ತಮ್ಮನ್ನು ತೊಡಗಿಸಿಕೊಂಡಿದ್ದು, ಶಬರಿಮಲೆ ವಿವಾದ, ಇದೆಲ್ಲಾ..ಕೇರಳದ ಹಿಂದೂಗಳನ್ನು ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಒಗ್ಗೂಡಿಸಲು ಕಾರಣವಾದ ಪ್ರಮುಖ ಘಟನೆಗಳು ಎಂದೇ ಹೇಳಲಾಗುತ್ತಿದೆ. ಇದಕ್ಕೆಲ್ಲಾ, ಏನು ಕಾರಣ?
ನೂರಕ್ಕೂ ಹೆಚ್ಚು ಆರ್ ಎಸ್ ಎಸ್ ಕಾರ್ಯಕರ್ತರ ಹತ್ಯೆ
ಕಳೆದ ಹದಿನೇಳು ವರ್ಷಗಳಲ್ಲಿ 160ಕ್ಕೂ ಕಮ್ಯೂನಿಸ್ಟ್, ಸಂಘ ಪರಿವಾರದ ಕಾರ್ಯಕರ್ತರು ರಾಜಕೀಯ ದ್ವೇಷದಿಂದ ಸಾವನ್ನಪ್ಪಿದ್ದಾರೆ. ಅದರಲ್ಲೂ ಇಸವಿ 2010-2017ರ ಅವಧಿಯಲ್ಲಿ ನೂರಕ್ಕೂ ಹೆಚ್ಚು ಆರ್ ಎಸ್ ಎಸ್ ಕಾರ್ಯಕರ್ತರನ್ನು ಹತ್ಯೆಗಯ್ಯಲಾಗಿತ್ತು. ಗಮನಿಸಬೇಕಾದ ಅಂಶವೇನಂದರೆ, ಕೇರಳದ ಸಿಎಂ ಪಿಣರಾಯಿ ವಿಜಯನ್ ಪ್ರತಿನಿಧಿಸುವ (ಧರ್ಮಾಧಂ) ಕಣ್ಣೂರು ಜಿಲ್ಲೆಯಲ್ಲೇ ಅತಿಹೆಚ್ಚು ಕೊಲೆಯಾಗಿದ್ದು, ಸರಕಾರದ ವಿರುದ್ದ ಅಸಹನೆ ಏಳಲು ಮೂಲ ಕಾರಣ ಇದೂ ಒಂದು ಎಂದು ಹೇಳಲಾಗುತ್ತದೆ.
ಕಂಡು ಕೇಳರಿಯದ ಪ್ರವಾಹ
ಕೇರಳ ಕಂಡು ಕೇಳರಿಯದ ಪ್ರವಾಹದ ಸಂದರ್ಭದಲ್ಲಿ, ರಾಷ್ಟ್ರೀಯ ವಿಪತ್ತು ಪಡೆಗಳು ಕಾರ್ಯನಿರ್ವಹಿಸುವಂತೆ, ಸಂಘ ಪರಿವಾರದ ಕಾರ್ಯಕರ್ತರು ಸಂತ್ರಸ್ತರ ಪರವಾಗಿ ಕೆಲಸ ಮಾಡಿದ್ದು, ವ್ಯಾಪಕ ಪ್ರಶಂಸೆಗೆ ಒಳಗಾಗಿತ್ತು. ಪ್ರವಾಹ ಪೀಡಿತ ಕೇರಳದ ವಿವಿಧ ಜಿಲ್ಲೆಗಳಲ್ಲಿ ಸಾವಿರಾರು, ಸಂಘ ಪರಿವಾರದ ಕಾರ್ಯಕರ್ತರು, ಹಗಲು ರಾತ್ರಿ ಎನ್ನದೇ ಕಾರ್ಯನಿರ್ವಹಿಸಿದ ಕೆಲಸ, ಹಿಂದೂಗಳ ಮನಸ್ಸಿನಲ್ಲಿ ಆರ್ ಎಸ್ ಎಸ್ ಪರ ಒಲವು ಮೂಡಲು ಕಾರಣವಾಯಿತು.
ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ
ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶದ ವಿಚಾರದಲ್ಲಿ ನಡೆಯುತ್ತಿರುವ ಹೋರಾಟ, ಈ ಮಟ್ಟಕ್ಕೆ ವ್ಯಾಪಿಸಿರುವುದಕ್ಕೆ ಕಾರಣ, ಪಿಣರಾಯಿ ಸರಕಾರದ ವಿಳಂಬಕಾರಿ ನೀತಿಯೇ ಎನ್ನುವ ಮಾತು ಚಾಲ್ತಿಯಲ್ಲಿದೆ. ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸಲು ಸಮಯಾವಕಾಶ ಕೇಳಲು, ದೇವಸ್ವಂ ಬೋರ್ಡ್ ಏನೀಗ ನಿರ್ಧರಿಸಿದೆಯೋ, ಆ ಕೆಲಸವನ್ನು ಸುಪ್ರೀಂ ಆದೇಶ ಹೊರಬಿದ್ದ ವೇಳೆಯೇ ಮಾಡಿದ್ದರೆ, ಪಿಣರಾಯಿ ಸರಕಾರ ಮುಜುಗರದಿಂದ ತಪ್ಪಿಸಿಕೊಳ್ಳಬಹುದಾಗಿತ್ತು ಎನ್ನುವ ಮಾತು ಕೇಳಿಬರುತ್ತಿದೆ.
ಗೆರಿಲ್ಲಾ ತಂತ್ರ ಬಳಸಿ ಶಬರಿಮಲೆ ಪ್ರವೇಶ: ತೃಪ್ತಿ ದೇಸಾಯಿ ಹೇಳಿಕೆ
ಅಯ್ಯಪ್ಪ ಭಕ್ತರ ಸಹನೆಯನ್ನು ಪ್ರಚೋದಿಸುವ ಕೆಲಸ
ಬಹುಷಃ ಪಿಣರಾಯಿ ಸರಕಾರ, ಶಬರಿಮಲೆ ವಿಚಾರ ಈ ಮಟ್ಟಿಗೆ ರಾಜ್ಯವ್ಯಾಪಿ ಹೋರಾಟದ ವಿಚಾರವಾಗಬಹುದು ಎಂದು ಅಂದುಕೊಂಡಿರಲ್ವೋ ಏನೋ? ಅಯ್ಯಪ್ಪ ಭಕ್ತರ ಸಹನೆಯನ್ನು ಪ್ರಚೋದಿಸುವ ಕೆಲಸವನ್ನು ಸರಕಾರ ಮಾಡುತ್ತಿದೆ ಎನ್ನುವ ಮಾತಿನ ನಡುವೆ, ಕೇರಳ ಸರಕಾರ, ಕ್ಷೇತ್ರದ ಧಾರ್ಮಿಕ ನಂಬಿಕೆಗಳನ್ನು ಅಪಹಾಸ್ಯ ಮಾಡುವಂತಹ ಕೆಲಸಗಳನ್ನು ಮಾಡುತ್ತಿದೆ ಎನ್ನುವ ಕೂಗು ಕೇಳಿಬರುತ್ತಿದೆ.
ಹಿಂದೂಗಳ ಮನಸ್ಸನ್ನು ನೋವಿಸುವ ಕೆಲಸ
ಶಬರಿಮಲೆ ವಿಚಾರದಲ್ಲಿ ಉದ್ದೇಶಪೂರ್ವಕವಾಗಿ ಹಿಂದೂಗಳ ಮನಸ್ಸನ್ನು ನೋವಿಸುವ ಕೆಲಸವನ್ನು ಪಿಣರಾಯಿ ಸರಕಾರ ಮಾಡುತ್ತಿದೆ ಎನ್ನುವ ಆರೋಪ ಕೇಳಿಬರುತ್ತಿದೆ. ಪಂದಳಂ ರಾಜಮನೆತನ ಸುಪ್ರೀಂಕೋರ್ಟ್ ತೀರ್ಪನ್ನು ವಿರೋಧಿಸಿದಾಗಲೇ, ಪಿಣರಾಯಿ ಸರಕಾರ ಎಚ್ಚೆತ್ತುಕೊಳ್ಳಬೇಕಿತ್ತು. ಈಗ ಈ ವಿಚಾರ ರಾಷ್ಟ್ರ ಮಟ್ಟದಲ್ಲೂ ಚರ್ಚೆಯ ವಿಷಯವಾಗಿರುವುದು ಒಂದೆಡೆಯಾದರೆ, ದಿನದಿಂದ ದಿನಕ್ಕೆ ಸರಕಾರದ ವಿರುದ್ದ ಹೋರಾಟದ ಕಾವು ತೀವ್ರಗೊಳ್ಳುತ್ತಿದೆ.
ಮತ್ತೆ ರಣರಂಗವಾದ ಶಬರಿಮಲೆ: 70 ಕ್ಕೂ ಹೆಚ್ಚು ಜನ ಪೊಲೀಸ್ ವಶಕ್ಕೆ
ಬಿಜೆಪಿಗೆ ಅನುಕೂಲಕರ ವಾತಾವರಣ
ಈ ಎಲ್ಲಾ ಕಾರಣಗಳ ಮೂಲಕ, ಹಿಂದೂಗಳು ಐಕ್ಯತೆ ಪ್ರದರ್ಶಿಸುವುದು, ಶಬರಿಮಲೆ ವಿಚಾರದಲ್ಲಿ ಒಟ್ಟಾರೆಯಾಗಿ ಧ್ವನಿಮತದಿಂದ ವಿರೋಧಿಸುತ್ತಿರುವುದು, ಬಿಜೆಪಿಗೆ ಅನುಕೂಲಕರವಾಗಲಿದೆ ಎಂದೇ ಹೇಳಲಾಗುತ್ತಿದೆ. ಬಿಜೆಪಿ ಮಂಚೂಣಿಯಲ್ಲಿ ನಿಂತು, ಶಬರಿಮಲೆ ಭಕ್ತರ ಪರವಾಗಿ ನಿಂತಿರುವುದು, ತಮ್ಮ ಹೋರಾಟವನ್ನು ತೀವ್ರಗೊಳಿಸಿರುವುದರಿಂದ, ಮುಂಬರುವ ಸಾರ್ವತ್ರಿಕ ಚುನಾವಣೆಯ ಹೊಸ್ತಿಲಲ್ಲಿ ಇದು ಯಾವ ಹಂತಕ್ಕೆ ಬಂದು ನಿಲ್ಲುತ್ತದೆ ಎಂದು ಹೇಳಲು ಸಾಧ್ಯವಿಲ್ಲದಿದ್ದರೂ, ಸದ್ಯದ ಮಟ್ಟಿಗೆ, ಬಿಜೆಪಿ ಇದರ ಲಾಭವನ್ನು ಪಡೆದುಕೊಳ್ಳುತ್ತಿದೆ.