ಕೊರೊನಾ ಹಿನ್ನೆಲೆ ಖಾಲಿ ಖಾಲಿ ರಸ್ತೆಗಳಲ್ಲಿ ಕಾಡಾನೆಗಳದ್ದೇ ಕಾರುಬಾರು!
ತಿರುವನಂತಪುರಂ, ಏಪ್ರಿಲ್.24: ಕೊರೊನಾ ವೈರಸ್ ಭೀತಿಯಲ್ಲಿ ಜನರು ಮನೆ ಸೇರಿದ್ದು ರಸ್ತೆಗಳೆಲ್ಲ ಖಾಲಿ ಖಾಲಿ ಹೊಡೆಯುತ್ತಿವೆ. ಇದರ ಮಧ್ಯೆ ಕೇರಳದಲ್ಲಿ ಜನರಿಲ್ಲದ ರಸ್ತೆಗಳಲ್ಲಿ ಕಾಡಾನೆಗಳು ಸ್ವಚ್ಛಂಧವಾಗಿ ಸಂಚರಿಸುತ್ತಿವೆ. ಕೇರಳದಲ್ಲಿ ರಸ್ತೆಗಳಲ್ಲ ಖಾಲಿ ಖಾಲಿ ಹೊಡೆಯುತ್ತಿರುವ ಹಿನ್ನೆಲೆ ಕಾಡುಪ್ರಾಣಿಗಳು ರಸ್ತೆಗೆ ಇಳಿಯುತ್ತಿವೆ.
ದೇಶಾದ್ಯಂತ ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಜನರೆಲ್ಲ ಗೂಡು ಸೇರಿದ್ದಾರೆ. ಹೀಗಾಗಿ ಕಾಡುಪ್ರಾಣಿಗಳು ನಿರಾತಂಕವಾಗಿ ರಸ್ತೆಗಳಲ್ಲಿ ಓಡಾಡುತ್ತಿರುವ ಘಟನೆ ಮುನ್ನಾರ್ ನಲ್ಲಿ ನಡೆದಿದೆ.
ಕೊರೊನಾ ಕಟ್ಟಿಹಾಕುವಲ್ಲಿ ದೇಶಕ್ಕೆ ಮಾದರಿಯಾದ ಕಾಸರಗೋಡು!
ಕೇರಳದ ಮುನ್ನಾರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕಾಡಾನೆಗಳು ನಿರ್ಭಯವಾಗಿ ಸಂತೋಷವಾಗಿ ಓಡಾಡುತ್ತಿರುವ ದೃಶ್ಯ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.
ಕೇರಳದಲ್ಲಿ ತೋಟಗಾರಿಕೆ ಬಂದ್:
ಕೊರೊನಾ ವೈರಸ್ ಹಾಗೂ ಭಾರತ ಲಾಕ್ ಡೌನ್ ಹಿನ್ನೆಲೆ ಕೇರಳಕ್ಕೆ ಕೇರಳವೇ ಸ್ತಬ್ಧಗೊಂಡಿದ್ದು, ಕಾಡಾನೆಗಳ ಭೀತಿಯಿಂದ ತೋಟಗಾರಿಕೆ ಮತ್ತು ಕೃಷಿಯು ಬಂದ್ ಆಗಿದೆ. ಎಲೆ ಮತ್ತು ಬಾಳೆಯನ್ನು ಬೆಳೆಯುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಮುನ್ನಾರ್ ಪ್ರದೇಶದ ರೈತರು ತಿಳಿಸಿದ್ದಾರೆ.
ಮುನ್ನಾರ್ ಪ್ರದೇಶದಲ್ಲಿ ಪ್ರತಿನಿತ್ಯ ಕಾಡಾನೆಯು ರಸ್ತೆಗಳಿಗೆ ಇಳಿಯುತ್ತಿದ್ದು ಅವುಗಳನ್ನು ಓಡಿಸುವುದಕ್ಕಾಗಿ ಕೆಲವರು ಪಟಾಕಿ ಹೊಡೆಯುತ್ತಿದ್ದಾರೆ. ಆದರೂ ಅದಕ್ಕೆ ಬೆದರದೇ ಕಾಡಾನೆಯು ರಾಜಾರೋಷವಾಗಿ ರಸ್ತೆಗಳಲ್ಲಿ ಓಡಾಡುತ್ತಿದೆ ಎಂದು ಸ್ಥಳೀಯ ರಾಜು ಎಂಬುವವರು ತಿಳಿಸಿದ್ದಾರೆ.