ದೇಶದ ಹಳ್ಳಿಹಳ್ಳಿಗೂ ಬ್ರಾಡ್ ಬಾಂಡ್ ಸಂಪರ್ಕ: ಪ್ರಧಾನಿ ಮೋದಿ
ತಿರುವನಂತಪುರಂ, ಫೆಬ್ರವರಿ.14: ಭಾರತದ ಪ್ರತಿಯೊಂದು ಹಳ್ಳಿ ಹಳ್ಳಿಗೂ ಬ್ರಾಡ್ ಬ್ಯಾಂಡ್ ಸಂಪರ್ಕವನ್ನು ಕಲ್ಪಿಸುವ ನಿಟ್ಟಿನಲ್ಲಿ ಮಹತ್ವಾಕಾಂಕ್ಷೆಯ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಕೇರಳದ ಕೊಚ್ಚಿಯಲ್ಲಿ ದೇಶದ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಯೋಜನೆಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದರು. ಇಂದು ಉದ್ಘಾಟನೆ ಆಗುತ್ತಿರುವ ಯೋಜನೆಗಳು ಭವಿಷ್ಯದಲ್ಲಿ ಭಾರತದ ಅಭಿವೃದ್ಧಿಗೆ ಪೂರಕವಾಗಿರಲಿವೆ ಎಂದು ಹೇಳಿದರು.
ತಮಿಳುನಾಡಿನಲ್ಲಿ ಹಲವು ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ
ಕೊಚ್ಚಿಯಲ್ಲಿ ಪೆಟ್ರೋ ಕೆಮಿಕಲ್ ಮತ್ತು ಪ್ರೊಪಿಲಿನ್ ಉತ್ಪನ್ನಗಳು ಆತ್ಮನಿರ್ಭರ್ ಭಾರತ ನಿರ್ಮಾಣದ ಹಾದಿಯನ್ನು ಸುಗಮಗೊಳಿಸಲಿದೆ. ಕೇರಳದಲ್ಲಿ ಉದ್ಯಮಗಳ ವ್ಯಾಪಕ ಬೆಳವಣಿಗೆಯಿಂದ ಹೆಚ್ಚು ಹೆಚ್ಚು ಉದ್ಯೋಗವಕಾಶ ತೆರೆದುಕೊಳ್ಳಲಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.
ಕರಾವಳಿ, ಈಶಾನ್ಯ ರಾಜ್ಯಗಳಿಗೆ ವಿಶೇಷ ಗಮನ:
ರಾಷ್ಟ್ರೀಯ ಮೂಲಸೌಕರ್ಯಗಳ ವೃದ್ಧಿಗೆ 110 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದೆ. ಈ ಬಾರಿ ದೇಶದ ಈಶಾನ್ಯ ಭಾಗ, ಕರಾವಳಿ ಮತ್ತು ಪರ್ವತ ಪ್ರದೇಶಗಳ ಮೇಲೆ ಹೆಚ್ಚಿನ ಗಮನವನ್ನು ವಹಿಸಲಾಗುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.
ಪ್ರವಾಸೋದ್ಯಮ ಶ್ರೇಯಾಂಕ ಏರಿಕೆ:
ಭಾರತದಲ್ಲಿ ಪ್ರವಾಸೋದ್ಯಮ ವಲಯವೂ ಕಳೆದ ಐದು ವರ್ಷಗಳಲ್ಲಿ ಬೆಳವಣಿಗೆ ಕಂಡಿದೆ. ಜಗತ್ತಿನ ಪ್ರವಾಸೋದ್ಯಮ ಸೂಚ್ಯಂಕದಲ್ಲಿ ಭಾರತದ ಸ್ಥಾನವು 65 ರಿಂದ 34ಕ್ಕೆ ಏರಿಕೆಯಾಗಿದೆ ಎಂದು ಪ್ರಧಾನಮಂತ್ರಿ ಮೋದಿ ತಿಳಿಸಿದ್ದಾರೆ.