ಭಾರತ ಈಗ ಅತ್ಯಾಚಾರದ ರಾಜಧಾನಿಯಾಗಿದೆ: ರಾಹುಲ್ ಗಾಂಧಿ
ವಯನಾಡು, ಡಿಸೆಂಬರ್ 7: ದೇಶದಲ್ಲಿ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 'ಹಿಂಸೆಯಲ್ಲಿ ನಂಬಿಕೆಯಿಟ್ಟಿರುವ ವ್ಯಕ್ತಿ ದೇಶವನ್ನು ಆಳುತ್ತಿರುವುದು ಜನರು ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಲು ಕಾರಣವಾಗಿದೆ' ಎಂದು ಹೇಳಿದರು.
ತಮ್ಮ ಲೋಕಸಭೆ ಕ್ಷೇತ್ರವಾಗಿರುವ ಕೇರಳದ ವಯನಾಡಿನ ಮೂರು ದಿನಗಳ ಪ್ರವಾಸದಲ್ಲಿರುವ ಅವರು, ಶನಿವಾರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ಆರೋಪಿಗಳು ಹಚ್ಚಿದ ಬೆಂಕಿಯಿಂದ ಶೇ 90ರಷ್ಟು ಸುಟ್ಟಗಾಯಗಳಿಂದ ನರಳುತ್ತಿದ್ದ ಉನ್ನಾವೋದ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಕುರಿತು ಅವರು ಕೇಂದ್ರದ ವಿರುದ್ಧ ಹರಿಹಾಯ್ದರು.
ಇದೇ ಸಂದರ್ಭದಲ್ಲಿ ಅವರು, ಭಾರತವನ್ನು ಅಂತಾರಾಷ್ಟ್ರೀಯ ಸಮುದಾಯ ಹಂಗಿಸುತ್ತಿದೆ. ಭಾರತ ಈಗ ಜಗತ್ತಿನ 'ಅತ್ಯಾಚಾರ ರಾಜಧಾನಿ'ಯೆಂದು ಗುರುತಿಸಿಕೊಂಡಿದೆ ಎಂದು ಹೇಳಿದರು.
ರಾಹುಲ್ ಗಾಂಧಿ ಹೇಳಿಕೆ ವಿವಾದ ಸೃಷ್ಟಿಸುತ್ತಿದ್ದಂತೆಯೇ ಅನೇಕರು ಪ್ರಧಾನಿ ನರೇಂದ್ರ ಮೋದಿ ಅವರ ಹಳೆಯ ಹೇಳಿಕೆಯನ್ನು ಹಂಚಿಕೊಂಡು ಪ್ರತಿ ವಾಗ್ದಾಳಿ ನಡೆಸುತ್ತಿದ್ದಾರೆ. 2014ರಲ್ಲಿ ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ನಡೆಸುವ ಸಂದರ್ಭದಲ್ಲಿ ಮೋದಿ ಅವರು, ದೆಹಲಿಯನ್ನು ಕಾಂಗ್ರೆಸ್ ಅತ್ಯಾಚಾರದ ರಾಜಧಾನಿಯನ್ನಾಗಿ ಮಾಡಿದೆ ಎಂದು ಆರೋಪಿಸಿದ್ದರು. ಅವರ ಹೇಳಿಕೆಯ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಹಿಂಸೆ ನಂಬಿರುವ ವ್ಯಕ್ತಿ ಆಳುತ್ತಿದ್ದಾರೆ
'ಹಿಂಸಾಚಾರ ಪ್ರಕರಣಗಳು ಮತ್ತು ಸಾಂವಿಧಾನಿಕ ರಚನೆಗಳನ್ನು ಒಡೆಯುವ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಕಾರಣವಿದೆ. ಜನರು ಕಾನೂನನ್ನು ತಮ್ಮ ಕೈಗಳಿಗೆ ತೆಗೆದುಕೊಳ್ಳುತ್ತಿರುವುದಕ್ಕೂ ಒಂದು ಕಾರಣವಿದೆ. ಅದು ಈ ದೇಶವನ್ನು ಆಳುತ್ತಿರುವ ವ್ಯಕ್ತಿ ಹಿಂಸೆಯಲ್ಲಿ ನಂಬಿಕೆ ಇರಿಸಿರುವುದು' ಎಂದು ರಾಹುಲ್ ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿ ವಿರುದ್ಧದ ಸುಕನ್ಯಾ ದೇವಿ ಅತ್ಯಾಚಾರ ಆರೋಪ ಕೆದಕಿದ ಸಿ.ಟಿ ರವಿ
ಅತ್ಯಾಚಾರದ ರಾಜಧಾನಿ
'ಭಾರತದಲ್ಲಿ ಮಹಿಳೆಯರು ಮತ್ತು ಮಕ್ಕಳು ಏಕೆ ಸುರಕ್ಷಿತರಾಗಿಲ್ಲ ಎಂದು ವಿದೇಶಗಳಲ್ಲಿ ಅನೇಕರು ಕೇಳುತ್ತಾರೆ. ಉತ್ತರ ಪ್ರದೇಶದಲ್ಲಿ ಶಾಸಕನೇ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದರೂ ಅದರ ಬಗ್ಗೆ ಪ್ರಧಾನಿ ಒಂದೂ ಮಾತನಾಡಿಲ್ಲ. ಇಂದಿನ ಭಾರತದ ಪರಿಸ್ಥಿತಿ ಹೇಗಿದೆಯೆಂದರೆ ಅದು ಜಗತ್ತಿನ ಅತ್ಯಾಚಾರದ ರಾಜಧಾನಿಯಾಗಿಬಿಟ್ಟಿದೆ' ಎಂದರು.
ಮೋದಿ ಬದುಕು ದ್ವೇಷ, ವಿಭಜನೆಯಿಂದ ಕೂಡಿದೆ
ಪ್ರಧಾನಿ ಮೋದಿ ಅವರ ಇಡೀ ರಾಜಕೀಯ ಬದುಕು ದ್ವೇಷ, ವಿಭಜನೆ ಮತ್ತು ಹಿಂಸೆಯಿಂದಲೇ ಕೂಡಿದೆ. ಅವರು ಧಾರ್ಮಿಕ ಸಮುದಾಯಗಳನ್ನು ಮತ್ತು ಭಾಷೆಗಳನ್ನು ವಿಭಜಿಸಿದ್ದಾರೆ. ಸಂಸ್ಕೃತಿಯನ್ನು ಅವಮಾನಿಸಿದ್ದಾರೆ. ಅವರಿಗೆ ಅರ್ಥಶಾಸ್ತ್ರವೂ ಅರ್ಥವಾಗುವುದಿಲ್ಲ ಎಂದು ಆರೋಪಿಸಿದರು.
'ವಿವಿಧ ರಾಜ್ಯಗಳಲ್ಲಿನ ಅನೇಕ ವಿಭಿನ್ನ ಸಮುದಾಯಗಳು ಭಾರತ ಸರ್ಕಾರದ ವಿರುದ್ಧ ದಂಗೆ ಏಳುತ್ತಿರುವುದು ವರದಿಯಾಗಿದೆ. ಅವರು ಬಿಜೆಪಿ ಮತ್ತು ಆರೆಸ್ಸೆಸ್ ಸಿದ್ಧಾಂತದ ವಿರುದ್ಧ ದಂಗೇಳುತ್ತಿದ್ದಾರೆ' ಎಂದು ಹೇಳಿದರು.
ದಿನಪತ್ರಿಕೆ ಓದಿ ಬೆಚ್ಚಿಬೀಳುತ್ತಿದ್ದಾರೆ
'ದಿನಪತ್ರಿಕೆಗಳನ್ನು ಓದಿದಾಗ ಹೆಣ್ಣುಮಕ್ಕಳು, ಸಹೋದರಿಯರು ಮತ್ತು ತಾಯಂದಿರು ಪ್ರತಿದಿನವೂ ಒಬ್ಬ ಹೆಣ್ಣಮಗಳನ್ನು ಅತ್ಯಾಚಾರ ಎಸಗುತ್ತಿರುವುದು ಅಥವಾ ಕೊಲ್ಲುತ್ತಿರುವ ಸುದ್ದಿ ಕಂಡು ಬೆಚ್ಚಿಬೀಳುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಕಳವಳ ವ್ಯಕ್ತಪಡಿಸಿದರು.