ಕೇರಳ ವಿಧಾನಸಭೆಯಲ್ಲಿ ಕನ್ನಡ ಕಂಪು !
ಕೊಚ್ಚಿ, ಅಕ್ಟೋಬರ್ 29: ಕೇರಳ ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಮಂಜೇಶ್ವರ ಕ್ಷೇತ್ರದ ಯುಡಿಎಫ್ ಶಾಸಕ ಎಂ. ಸಿ ಕಮರುದ್ದೀನ್ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿ ಕನ್ನಡಿಗರ ಗಮನ ಸೆಳೆದಿದ್ದಾರೆ.
ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಎಂ.ಸಿ ಕಮರುದ್ದೀನ್ ಚೊಚ್ಚಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಆಯ್ಕೆಯಾದ ಐವರು ನೂತನ ಶಾಸಕರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು.
ಮಹಾರಾಷ್ಟ್ರ, ಕೇರಳದಲ್ಲಿ ಪ್ರಚಾರಕ್ಕೆ ಹೋಗಿದ್ದ ಸಿದ್ದರಾಮಯ್ಯ ಕಾಲ್ಗುಣ! ಆ ಕ್ಷೇತ್ರಗಳ ಫಲಿತಾಂಶ
ವಿ.ಕೆ.ಪ್ರಶಾಂತ್, ಕೆ.ಯು.ಜೆನಿಶ್ ಕುಮಾರ್, ಟಿ.ಜೆ.ವಿನೋದ್, ಶನಿಮೋಲ್ ಉಸ್ಮಾನ್ ಮತ್ತು ಕಮರುದ್ದೀನ್ ಸ್ಪೀಕರ್ ಪಿ.ಶ್ರೀರಾಮಕೃಷ್ಣನ್ ಅವರ ಸಮ್ಮುಖದಲ್ಲಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು.ಕಮರುದ್ದೀನ್ ಅವರು ಕನ್ನಡದಲ್ಲಿ ಹಾಗೂ ಇತರ ನಾಲ್ವರು ಶಾಸಕರು ಮಲಯಾಳಂ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಶಾಸಕರಾಗಿದ್ದ ಪಿ. ಬಿ ಅಬ್ದುಲ್ ರಝಾಕ್ ನಿಧನದಿಂದ ತೆರವಾಗಿದ್ದ ಕ್ಷೇತ್ರಕ್ಕೆ ಅಕ್ಟೋಬರ್ 21ರಂದು ಉಪಚುನಾವಣೆ ನಡೆದಿತ್ತು. ಉಪಚುನಾವಣೆಯಲ್ಲಿ 7923 ಮತಗಳ ಅಂತರದಿಂದ ಕಮರುದ್ದೀನ್ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಎಂ.ಸಿ. ಕಮರುದ್ದೀನ್ ಅವರ ಯುಡಿಎಫ್ಗೆ ಇಲ್ಲಿ ಗೆಲುವು ನಿರೀಕ್ಷಿತವಾಗಿತ್ತು. ಕಮರುದ್ದೀನ್ ಅವರು 65, 407 ಮತಗಳನ್ನು ಗಳಿಸಿ ಗೆಲುವು ಸಾಧಿಸಿದ್ದು, ಎನ್ಡಿಎ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು 57484 ಮತಗಳನ್ನು ಗಳಿಸಿದ್ದಾರೆ.ಎಲ್ಡಿಎಫ್ ಅಭ್ಯರ್ಥಿ ಶಂಕರ ರೈ 38233 ಮತಗಳನ್ನು ಪಡೆದಿದ್ದು ,ಇದೊಂದು ತ್ರಿಕೋನ ಸ್ಪರ್ಧೆಯ ಕ್ಷೇತ್ರವಾಗಿತ್ತು.
ಕರ್ನಾಟಕಕ್ಕೆ ತಾಗಿಕೊಂಡಿರುವ ಕ್ಷೇತ್ರವೂ ಆಗಿರುವ ಮಂಜೇಶ್ವರದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರೂ ಪ್ರಚಾರಕ್ಕೂ ಹೋಗಿದ್ದರು.ಮುಸ್ಲಿಂ ಲೀಗ್ ,ಕಾಂಗ್ರೆಸ್ ಬೆಂಬಲಿತ ಯುಡಿಎಫ್ ಅಭ್ಯರ್ಥಿಯನ್ನು ಈ ಬಾರಿ ಶತಾಯಗತಾಯ ಸೋಲಿಸಿ ಬಿಜೆಪಿ ಧ್ವಜ ಹಾರಿಸಲೇಬೇಕೆಂದು ಬಿಜೆಪಿ ತೀರ್ಮಾನಿಸಿತ್ತು.
ರಾಜ್ಯ ಬಿಜೆಪಿ ಅಧ್ಯಕ್ಷರಾಗಿರುವ ನಳಿನ್ ಕುಮಾರ್ ಗೂ ಮಂಜೇಶ್ವರ ಕ್ಷೇತ್ರವನ್ನು ಗೆಲ್ಲಿಸಿ ಕೊಡುವುದು ಪ್ರತಿಷ್ಠೆ ವಿಷಯವಾಗಿತ್ತು.ಆದರೆ ಜಾತ್ಯತೀತ ಮತಗಳ ಧೃವೀಕರಣದಿಂದ ಎಂ.ಸಿ ಕಮರುದ್ದೀನ್ ಗೆಲುವಿನ ನಗೆ ಬೀರಿದ್ದಾರೆ.
ಮಾತ್ರವಲ್ಲ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಗಡಿ ಜಿಲ್ಲೆ ದಕ್ಷಿಣ ಕನ್ನಡ ಮತ್ತು ಇಡೀ ರಾಜ್ಯದ ಕನ್ನಡಿಗರು ಹೆಮ್ಮೆ ಪಡುವಂತೆ ಮಾಡಿದ್ದಾರೆ.