ಬಕ್ರೀದ್ ಕಾರಣ ಕೋವಿಡ್ ನಿರ್ಬಂಧ ಸಡಿಲಿಕೆಯ ಕೇರಳ ಸರ್ಕಾರ ನಿರ್ಧಾರಕ್ಕೆ ಐಎಂಎ ಟೀಕೆ
ನವದೆಹಲಿ, ಜು.18: "ಅನಿವಾರ್ಯ, ಸನ್ನಿಹಿತವಾದ ಮೂರನೇ ಅಲೆ" ಮುಂಚಿತವಾಗಿ ಈದ್ ಅಲ್-ಅಧಾ ಅಥವಾ ಬಕ್ರೀದ್ ಕಾರಣದಿಂದಾಗಿ ಕೊರೊನಾವೈರಸ್ ನಿರ್ಬಂಧಗಳನ್ನು ಸಡಿಲಿಸುವ ಕೇರಳ ಸರ್ಕಾರದ ನಿರ್ಧಾರವನ್ನು ಐಎಂಎ ಟೀಕೆ ಮಾಡಿದೆ.
ಭಾರತದ ಉನ್ನತ ವೈದ್ಯರ ಸಂಸ್ಥೆ, ಭಾರತೀಯ ವೈದ್ಯಕೀಯ ಸಂಘ ಅಥವಾ ಐಎಂಎ ಭಾನುವಾರ ಕೇರಳ ಸರ್ಕಾರಕ್ಕೆ ಕೋವಿಡ್ ಹೆಚ್ಚಳದ ಎಚ್ಚರಿಕೆ ನೀಡಿದೆ. ಈ ಆದೇಶವನ್ನು ಹಿಂತೆಗೆದುಕೊಳ್ಳದಿದ್ದರೆ, "ಕೇರಳ ಸರ್ಕಾರದ ಆದೇಶದ ವಿರುದ್ಧ ನಾವು ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತೇವೆ," ಎಂದು ಐಎಂಎ ಹೇಳಿದೆ.
ಕೇರಳ ಕೋವಿಡ್ ಹೆಚ್ಚಳ 3 ನೇ ಅಲೆಯ ಸೂಚನೆಯೇ, ಅಧ್ಯಯನ ವರದಿ ಹೇಳಿದ್ದೇನು?
ರಾಜ್ಯದಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ಮಧ್ಯೆ ಕೇರಳ ಸರ್ಕಾರದ ಈ ನಿರ್ಧಾರದಿಂದ "ನೋವುಂಟಾಗಿದೆ" ಎಂದು ಐಎಂಎ ಹೇಳಿದೆ. ಇನ್ನು ಕೊರೊನಾ ಕಾರಣದಿಂದಾಗಿ ಹಲವಾರು ರಾಜ್ಯಗಳು ಧಾರ್ಮಿಕ ಕಾರ್ಯಕ್ರಮಗಳನ್ನು ರದ್ದು ಮಾಡಿದೆ. ಉತ್ತರ ಪ್ರದೇಶ ಸರ್ಕಾರವು ಸುಪ್ರೀಂ ಕೋರ್ಟ್ ಚಾಟಿ ಬೆನ್ನಲ್ಲೇ ಕನ್ವರ್ ಯಾತ್ರೆಗೆ ನೀಡಲಾಗಿದ್ದ ಅನುಮತಿಯನ್ನು ರದ್ದು ಮಾಡಿದೆ.
ಇನ್ನು ಈ ಬಗ್ಗೆ ಹೇಳಿಕೆ ನೀಡಿರುವ ಐಎಂಎ, "ಜೆ & ಕೆ, ಉತ್ತರ ಪ್ರದೇಶ, ಮತ್ತು ಉತ್ತರಾಂಚಲ್ ನಂತಹ ಅನೇಕ ಉತ್ತರದ ರಾಜ್ಯಗಳು ಸಾರ್ವಜನಿಕ ಸುರಕ್ಷತೆಯ ಪ್ರಜ್ಞೆಯೊಂದಿಗೆ ಸಾಂಪ್ರದಾಯಿಕ ಮತ್ತು ಜನಪ್ರಿಯ ಯಾತ್ರೆಗಳನ್ನು ರದ್ದು ಮಾಡಿದೆ. ಹಾಗಿರುವಾಗ ಸುಶಿಕ್ಷಿತ ಕೇರಳ ರಾಜ್ಯವು ಈ ಕೋವಿಡ್ ನಿರ್ಬಂಧ ಸಡಿಲಿಕೆಯ ನಿರ್ಧಾರ ಕೈಗೊಂಡಿರುವುದು ದುರದೃಷ್ಟಕರ," ಎಂದು ತಿಳಿಸಿದೆ.
ರಾಜ್ಯದಲ್ಲಿ ಬುಧವಾರ ಬಕ್ರೀದ್ ಆಚರಣೆ ನಡೆಯಲಿದೆ. ಈ ಹಿನ್ನೆಲೆ ಭಾನುವಾರದಿಂದ ಮೂರು ದಿನಗಳವರೆಗೆ ರಾಜ್ಯದಲ್ಲಿ ಲಾಕ್ಡೌನ್ ನಿರ್ಬಂಧವನ್ನು ಸಡಿಲಿಸಲಾಗುವುದು ಎಂದು ಕೇರಳ ಸರ್ಕಾರ ಘೋಷಿಸಿತ್ತು. ಬಟ್ಟೆ, ಪಾದರಕ್ಷೆಗಳು, ಆಭರಣಗಳು, ಉಡುಗೊರೆ ವಸ್ತುಗಳು, ಗೃಹೋಪಯೋಗಿ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ದುರಸ್ತಿ ಮಳಿಗೆಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ತೆರೆಯಲು ಅನುಮತಿಸಲಾಗುವುದು ಎಂದು ಹೇಳಿತ್ತು.
ಇತರೆ ರಾಜ್ಯಗಳಂತೆ ಕೇರಳದಲ್ಲಿ ಕೋವಿಡ್ ಪ್ರಕರಣ ಕುಸಿದಿಲ್ಲವೇಕೆ?
ಕೇರಳ ಸರ್ಕಾರದ ಈ ನಿರ್ಧಾರವು ಆನ್ಲೈನ್ನಲ್ಲಿ ತೀವ್ರ ಚರ್ಚೆಗೆ ನಾಂದಿ ಹಾಡಿದೆ. ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ಕನ್ವರ್ ಯಾತ್ರೆ ರದ್ದತಿಗೆ ಹೋಲಿಕೆ ಮಾಡಲಾಗಿದೆ. ಇನ್ನು ಬಕ್ರೀದ್ ಸಂದರ್ಭ ಈ ಅಂಗಡಿಗಳನ್ನು ತೆರೆಯಲು ಮಾತ್ರವಲ್ಲದೇ, ಚಲನಚಿತ್ರ ಶೂಟಿಂಗ್ ಮತ್ತು ಪೂಜಾ ಸ್ಥಳಗಳಲ್ಲಿ ನಿರ್ಬಂಧ ಸಡಿಲಿಕೆಯನ್ನೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶನಿವಾರ ಘೋಷಿಸಿದ್ದರು. "ಕೇರಳ ಎದುರಿಸುತ್ತಿರುವ ಗಂಭೀರ ಪರಿಸ್ಥಿತಿಯನ್ನು ನಿವಾರಿಸಲು ನಿರ್ಬಂಧಗಳ ಅಗತ್ಯವೂ ಇದೆ," ಎಂದು ಹೇಳಿದ್ದರು.
"ಲಾಕ್ಡೌನ್ಗಳು ಸೇರಿದಂತೆ ನಿರ್ಬಂಧಗಳು ಎಷ್ಟೇ ಸೀಮಿತವಾಗಿದ್ದರೂ ಭಾರಿ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಉಂಟುಮಾಡುತ್ತಿವೆ. ಆದ್ದರಿಂದ ಕೋವಿಡ್ ಸೋಂಕಿನ ಪ್ರತಿದಿನದ ಅಂಕಿ ಅಂಶವನ್ನು ಮೌಲ್ಯಮಾಪನ ಮಾಡಿದ ನಂತರ ಕೆಲವು ರಿಯಾಯಿತಿಗಳನ್ನು ಅನುಮತಿಸಲಾಗುತ್ತಿದೆ," ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದರು.
ಕೇರಳದಲ್ಲಿ ಶನಿವಾರ 16,148 ಹೊಸ ಕೋವಿಡ್ ಪ್ರಕರಣಗಳು ಮತ್ತು 114 ಸಾವುಗಳು ವರದಿಯಾಗಿದೆ. ರಾಜ್ಯದಲ್ಲಿ ಒಟ್ಟು ಸಕಾರಾತ್ಮಕತೆಯು ಶೇ.10.76 ರಷ್ಟಿದೆ.
(ಒನ್ಇಂಡಿಯಾ ಸುದ್ದಿ)