"ಖಾಲಿ ಬಲೆಯೊಂದಿಗೆ ವಾಪಸ್ಸಾಗುವ ನಿಮ್ಮ ನಿರಾಸೆ ಈಗ ಅರ್ಥವಾಯ್ತು"
ತಿರುವನಂತಪುರಂ, ಫೆಬ್ರವರಿ 24; ಮೊನ್ನೆಯಷ್ಟೇ ಕೇರಳದ ವೈನಾಡಿನಲ್ಲಿ ಕೃಷಿ ಕಾಯ್ದೆ ವಿರುದ್ಧ ಟ್ರ್ಯಾಕ್ಟರ್ ಜಾಥಾ ನಡೆಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬುಧವಾರ ಇಲ್ಲಿನ ಮೀನುಗಾರರನ್ನು ಭೇಟಿಯಾಗಿ ಅವರೊಂದಿಗೆ ಕೆಲ ಸಮಯ ಕಳೆದರು.
ಕೊಲ್ಲಂ ಜಿಲ್ಲೆಯ ತಾಂಗಸ್ಸೆರಿ ಬೀಚ್ನಲ್ಲಿ ಮೀನುಗಾರರ ಜೊತೆ ಸಂವಾದ ನಡೆಸಿದ ರಾಹುಲ್ ಗಾಂಧಿ, ಮೀನುಗಾರರೊಂದಿಗೆ ಬೋಟ್ನಲ್ಲಿ ಸಮುದ್ರಕ್ಕೆ ತೆರಳಿದರು. ಬೆಳಿಗ್ಗೆ 4.30ರ ಹೊತ್ತಿಗೆ ವಾಡಿ ಬೀಚ್ನಿಂದ ಪ್ರಯಾಣ ಆರಂಭಿಸಿ ಸುಮಾರು ಒಂದು ಗಂಟೆಗಳ ಸಮಯ ಕಳೆದರು. ಅವರೊಂದಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹಾಗೂ ಟಿ.ಎನ್. ಪ್ರಥಪನ್ ಅವರು ರಾಹುಲ್ ಅವರ ಜೊತೆಗಿದ್ದರು. ಈ ಸಂದರ್ಭ ಹಲವು ವಿಷಯಗಳ ಕುರಿತು ರಾಹುಲ್ ಮಾತನಾಡಿದರು.
"ಮೀನುಗಾರರ ಜೀವನ ತಿಳಿದುಕೊಳ್ಳಬೇಕಿತ್ತು"
ಮೀನುಗಾರರ ಜೀವನ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಬಯಸಿದ್ದೆ. ಆ ಅನುಭವ ನನಗೆ ಬೇಕಿತ್ತು. ಅದನ್ನು ಇಂದು ಪಡೆದೆ. ಮೀನುಗಾರರೊಂದಿಗೆ ಬೋಟಿನಲ್ಲಿ ತೆರಳಿದ್ದೆ. ಅವರ ಜೀವನಶೈಲಿಯ ಬಗ್ಗೆಯೂ ಸ್ವಲ್ಪ ತಿಳಿದುಕೊಂಡೆ ಎಂದು ಹೇಳಿದ್ದಾರೆ. ಇಂದಿನ ದಿನ ಆಸಕ್ತಿದಾಯಕವಾಗಿತ್ತು. ನಾವು ಕೇರಳದಲ್ಲಿ ಅಧಿಕಾರಕ್ಕೆ ಬಂದರೆ ಮೀನುಗಾರರಿಗೆ ನಿಶ್ಚಿತ ಆದಾಯದ ಖಾತರಿ ನೀಡುತ್ತೇವೆ ಎಂದು ಭರವಸೆ ನೀಡಿದರು.
ವಯನಾಡಿನಲ್ಲಿ ರಾಹುಲ್ ಗಾಂಧಿ ಟ್ರ್ಯಾಕ್ಟರ್ ರ್ಯಾಲಿ
"ನಾನೂ ಮೀನು ಹಿಡಿದೆ"
ನನ್ನ ಸಹೋದರರೊಂದಿಗೆ ನಾನು ಬೆಳಿಗ್ಗೆ ಸಮುದ್ರಕ್ಕೆ ತೆರಳಿದ್ದೆ. ಸಮುದ್ರಕ್ಕೆ ಬೋಟ್ ಇಳಿಸಿ ವಾಪಸ್ ಬರುವವರೆಗೂ ಅವರ ಕಷ್ಟ, ಜವಾಬ್ದಾರಿ ಎಷ್ಟಿರುತ್ತದೆ ಎಂಬುದು ನನಗೆ ಅರ್ಥವಾಯಿತು. ನಾನು ಕೂಡ ಅವರೊಂದಿಗೆ ಮೀನು ಹಿಡಿಯಲು ಹೋಗಿದ್ದೆ. ಆದರೆ ಒಂದೇ ಒಂದು ಮೀನು ಬಲೆಗೆ ಸಿಕ್ಕಿತು ಎಂದಿದ್ದಾರೆ.
"ನಿಮ್ಮ ನಿರಾಸೆ ನನಗೀಗ ಅರ್ಥವಾಯಿತು"
ಇಂದು ಮೀನುಗಾರಿಕೆಗೆ ಹೋಗಿ ಖಾಲಿ ಬಲೆಯೊಂದಿಗೆ ವಾಪಸ್ ಬಂದೆವು. ಇದು ನನ್ನ ಇಂದಿನ ಅನುಭವ. ದಿನನಿತ್ಯ ಮೀನುಗಾರರದ್ದು ಇದೇ ಕಥೆಯಾಗಿರಬಹುದು. ಖಾಲಿ ಬಲೆಯೊಂದಿಗೆ ವಾಪಸ್ಸಾಗುವ ಅವರ ನಿರಾಸೆ ನನಗೀಗ ಅರ್ಥವಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭ ಸಮುದ್ರದಾಳದ ಮೀನುಗಾರಿಕೆ ವಿವಾದದ ಕುರಿತು ಚರ್ಚೆ ನಡೆಸಿದ್ದಾರೆ.
"ಕೇರಳದಲ್ಲಿ ಕುಸ್ತಿ, ದೆಹಲಿಯಲ್ಲಿ ದೋಸ್ತಿ; ರಾಹುಲ್ ಇದೇನು ನಿಮ್ಮ ಕಥೆ?"
ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯದ ಪ್ರಸ್ತಾವ
ಕೇಂದ್ರದಲ್ಲಿ ಮೀನುಗಾರಿಕೆಗೆಂದೇ ಪ್ರತ್ಯೇಕ ಸಚಿವಾಲಯ ರೂಪಿಸಬೇಕಿದೆ ಎಂದು ಹೇಳಿದ ರಾಹುಲ್ ಗಾಂಧಿ, ಹಾಗಾದಾಗ ಮೀನುಗಾರ ಸಮುದಾಯದ ಕಷ್ಟಗಳು ಗೊತ್ತಾಗುತ್ತದೆ. ಈ ಬಗ್ಗೆ ರಾಜ್ಯದಲ್ಲಿ ಚರ್ಚೆ ನಡೆಯಬೇಕಿದೆ. ಅವರಿಗೆಂದೇ ಪ್ರತ್ಯೇಕ ಪ್ರಣಾಳಿಕೆಯನ್ನು ನಾವು ಸಿದ್ಧಪಡಿಸುತ್ತೇವೆ ಎಂದು ಹೇಳಿದ್ದಾರೆ. ರೈತರು ಭೂಮಿಯಲ್ಲಿ ಊಳುವಂತೆ, ನೀವು ಸಮುದ್ರದಲ್ಲಿ ಕೆಲಸ ಮಾಡುತ್ತೀರಿ. ರೈತರಿಗೆ ಪ್ರತ್ಯೇಕ ಸಚಿವಾಲಯವಿದೆ, ಆದರೆ ನಿಮಗಿಲ್ಲ. ಈ ಬಗ್ಗೆ ಚಿಂತಿಸಬೇಕಿದೆ ಎಂದರು.