ಸುಪ್ರೀಂ ತೀರ್ಪು ನಂತರ ಶಬರಿಮಲೆ ಪ್ರವೇಶಿಸಿದ ಮಹಿಳೆಯರೆಷ್ಟು?
ತಿರುವನಂತಪುರಂ, ಜನವರಿ 18: ಶಬರಿಮಲೆಗೆ ಎಲ್ಲ ವಯಸ್ಸಿನ ಮಹಿಳೆಯರಿಗೂ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಕಳೆದ ವರ್ಷ ಸುಪ್ರೀಂ ಕೋರ್ಟ್ ನಿಂದ ತೀರ್ಪು ಬಂದ ನಂತರ 51 ಮಹಿಳೆಯರು ದೇಗುಲ ಪ್ರವೇಶ ಮಾಡಿದ್ದಾರೆ ಎಂದು ಕೇರಳ ರಾಜ್ಯ ಸರಕಾರವು ದೇಶದ ಸರ್ವೋಚ್ಚ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.
ಇದೇ ಮೊದಲ ಬಾರಿಗೆ ಒಟ್ಟಾರೆಯಾಗಿ ಎಷ್ಟು ಮಹಿಳೆಯರು ಅಯ್ಯಪ್ಪ ದೇಗುಲವನ್ನು ಪ್ರವೇಶ ಮಾಡಿದ್ದಾರೆ ಎಂಬ ಮಾಹಿತಿಯನ್ನು ಕೇರಳ ಸರಕಾರ ನೀಡಿದೆ. ಶಬರಿಮಲೆ ದೇಗುಲ ಪ್ರವೇಶಿಸಿದ ಬಿಂದು ಅಮ್ಮಿಣಿ ಹಾಗೂ ಕನಕ ದುರ್ಗಾ ಅವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಯುವ ವೇಳೆ ಸರಕಾರ ಈ ಹೇಳಿಕೆ ನೀಡಿದೆ.
ಶಬರಿಮಲೆ ಪ್ರವೇಶಿಸಿದ್ದ ಇಬ್ಬರು ಮಹಿಳೆಯರಿಗೆ 24 ಗಂಟೆ ಭದ್ರತೆ ಕೊಡಿ: ಸುಪ್ರೀಂ
ದೇವಾಲಯವನ್ನು ಪ್ರವೇಶಿಸಿದ ಎರಡು ವಾರಕ್ಕೂ ಹೆಚ್ಚು ಕಾಲ ತಲೆ ಮರೆಸಿಕೊಂಡಿದ್ದ ಅವರಿಬ್ಬರು, ಭದ್ರತೆ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಕನಕ ದುರ್ಗಾ ಮೇಲೆ ಆಕೆಯ ಅತ್ತೆ ಹಲ್ಲೆ ನಡೆಸಿದ್ದು, ಆಸ್ಪತ್ರೆಯಲ್ಲಿ ಇದ್ದಾರೆ. "ಈ ವೇಳೆ ಇತರ ವಿಚಾರಗಳ ಬಗ್ಗೆ ಚರ್ಚೆ ನಡೆಸುವ ಅಗತ್ಯವಿಲ್ಲ ಎಂದು ಕೋರ್ಟ್ ಭಾವಿಸುತ್ತದೆ" ಎಂಬ ಮಾತನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಕೇರಳ ಪರ ವಕೀಲರಿಗೆ ಹೇಳಿದ್ದಾರೆ.
ಎಲ್ಲ ವಯೋಮಾನದ ಮಹಿಳೆಯರಿಗೂ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಪ್ರವೇಶ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ತೀರ್ಪು ನೀಡಿತ್ತು. ಆ ನಂತರ ಈ ತೀರ್ಪಿಗೆ ಸಂಪ್ರದಾಯವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಹಲವು ಮಹಿಳೆಯರು ದೇಗುಲ ಪ್ರವೇಶಕ್ಕೆ ಯತ್ನಿಸಿದ್ದರು. ಆದರೆ ಅವರನ್ನು ದೇಗುಲಕ್ಕೆ ಬಹಳ ಹಿಂದೆಯೇ ತಡೆದು ವಾಪಸ್ ಕಳುಹಿಸಲಾಗಿತ್ತು.