ಕೇರಳದಲ್ಲಿ ಹೊಸ ಆತಂಕ ಸೃಷ್ಟಿಸುತ್ತಾ ಕೊರೊನಾ ವೈರಸ್ 3ನೇ ಅಲೆ?
ತಿರುವನಂತಪುರಂ, ಮೇ.12: ನೊವೆಲ್ ಕೊರೊನಾ ವೈರಸ್ ಸೋಂಕಿನ ವಿರುದ್ಧ ಸಮರ್ಥವಾಗಿ ಹೋರಾಡುತ್ತಿರುವ ಕೇರಳದಲ್ಲಿ ಮತ್ತೊಂದು ಸವಾರು ಎದುರಾಗಿದೆ. ದೇಶದಲ್ಲೇ ಮೊದಲ ಸೋಂಕಿತ ವ್ಯಕ್ತಿ ಕಾಣಿಸಿಕೊಂಡ ದೇವರನಾಡಿನಲ್ಲಿ ಕೊರೊನಾ ದೆವ್ವದಂತೆ ಜನರನ್ನು ಕಾಡುತ್ತಿದೆ.
ಕೇರಳದಲ್ಲಿ ಸೋಮವಾರದ ಅಂಕಿ-ಅಂಶಗಳ ಪ್ರಕಾರ 520 ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದರೆ ಈ ಪೈಕಿ 489 ಸೋಂಕಿತರು ಗುಣಮುಖರಾಗಿದ್ದಾರೆ. ರಾಜ್ಯದಲ್ಲೇ ಇದುವರೆಗೆ ನಾಲ್ಕು ಮಂದಿ ಕೊವಿಡ್-19 ನಿಂದ ಪ್ರಾಣ ಬಿಟ್ಟಿದ್ದರೆ, ಬಾಕಿ ಉಳಿದ 27 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಕೇರಳದಲ್ಲಿ 25 ಕೊರೊನಾ ಸೋಂಕಿತರ ಹಿಂದಿನ ಇತಿಹಾಸ ಭಯಾನಕ!
ಮೊದಲ ಎರಡು ಹಂತಗಳಲ್ಲಿ ಕೊರೊನಾ ವೈರಸ್ ಸೋಂಕು ಹರಡುವಿಕೆಗೆ ಕಡಿವಾಣ ಹಾಕಿದ ಕೇರಳ ಸರ್ಕಾರಕ್ಕೆ ಹೊಸ ಸವಾಲು ಎದುರಾಗಿದೆ. ವಿದೇಶ ಮತ್ತು ಅಕ್ಕ-ಪಕ್ಕದ ರಾಜ್ಯಗಳಿಂದ ವಲಸೆ ಬರುತ್ತಿರುವ ಕಾರ್ಮಿಕರು ಹಾಗೂ ಜನರನ್ನು ಸೂಕ್ತ ವೈದ್ಯಕೀಯ ತಪಾಸಣೆ ನಡೆಸಲೇಬೇಕಾದ ಅನಿವಾರ್ಯತೆ ಎದುರಾಗಿದೆ.
ಮೂರನೇ ಹಂತವನ್ನು ಎದುರಿಸುತ್ತದೆಯಾ ಕೇರಳ?
ವಿದೇಶ ಹಾಗೂ ನೆರೆ ರಾಜ್ಯಗಳಿಂದ ವಲಸೆ ಬರುತ್ತಿರುವ ಜನರಲ್ಲಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಳ್ಳುತ್ತಿರುವುದು ಆತಂಕ ಸೃಷ್ಟಿಸಿದೆ. ಎಲ್ಲ ವಲಸಿಗರನ್ನು ಆಂಟಿಬಾಡಿ ಕೊರೊನಾ ವೈರಸ್ ತಪಾಸಣೆಗೆ ಒಳಪಡಿಸಲೇಬೇಕೆಂದು ಕೇರಳ ತೀರ್ಮಾನಿಸಿದೆ.
ಆಂಟಿಬಾಡಿ ಕೊರೊನಾ ವೈರಸ್ ತಪಾಸಣೆ ಅರ್ಥವೇನು?
ಮನುಷ್ಯನ ದೇಹದಲ್ಲಿ ಇರುವ ರೋಗ ನಿರೋಧಕ ಶಕ್ತಿಯನ್ನು ಪತ್ತೆ ಮಾಡುವ ವೈದ್ಯಕೀಯ ವಿಧಾನವನ್ನು ಆಂಟಿಬಾಯಿ ಕೊರೊನಾ ವೈರಸ್ ತಪಾಸಣೆ ಎಂದು ಕರೆಯಲಾಗುತ್ತದೆ. ಬೇರೆ ಸೋಂಕು ಪತ್ತೆಗೂ ಕೊರೊನಾ ವೈರಸ್ ಸೋಂಕಿತರ ವೈದ್ಯಕೀಯ ತಪಾಸಣೆಗೂ ಸಾಕಷ್ಟು ವ್ಯತ್ಯಾಸವಿದೆ. ಈ ಹಿನ್ನೆಲೆ ಕೊವಿಡ್19 ಸೋಂಕು ಪತ್ತೆಗೆ ಆಂಟಿಬಾಡಿ ತಪಾಸಣೆ ನಡೆಸಲಾಗುತ್ತದೆ. ವೈರಸ್ ಮನುಷ್ಯನ ದೇಹವನ್ನು ಹೊಕ್ಕ ನಂತರದಲ್ಲಿ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ. ಒಂದು ವಾರದಲ್ಲಿ ಸೋಂಕಿತನಲ್ಲಿ ಜ್ವರ, ಶೀತ ಮತ್ತು ಕೆಮ್ಮಿನಂತಾ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ಪ್ರಾಥಮಿಕ ಹಂತದಲ್ಲಿ ತಿಳಿದು ಬಂದಿದೆ.
ಕೇರಳದಲ್ಲಿ ಕೊರೊನಾ ಸೋಂಕಿತರೆಲ್ಲ ಗುಣಮುಖ: ವಿಶ್ವಕ್ಕೆ ಮಾದರಿಯಾದ ಭಾರತ
'ವಂದೇ ಭಾರತ್ ಮಿಷನ್' ನಿಂದ ಹೆಚ್ಚಿದ ಭೀತಿ
ಕೊರೊನಾ ವೈರಸ್ ಸೋಂಕು ಹರಡುವಲ್ಲಿ ಕೇರಳಕ್ಕೆ ಆತಂಕ ಹೆಚ್ಚುವಂತೆ ಮಾಡಿರುವುದೇ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಂದೇ ಭಾರತ್ ಮಿಷನ್. ಈ ಯೋಜನೆ ಮೂಲಕ ಗಲ್ಫ್ ರಾಷ್ಟ್ರಗಳು ಸೇರಿದಂತೆ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ವಾಪಸ್ ಕರೆ ತರಲಾಗುತ್ತಿದೆ. ಹೀಗೆ ಬೇರೆ ದೇಶ ಮತ್ತು ನೆರೆರಾಜ್ಯಗಳಿಂದ ಕೇರಳಕ್ಕೆ ವಾಪಸ್ ಆದ ಜನರಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಕಳೆದ ಐದು ದಿನಗಳಲ್ಲಿ ಮೂವರಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದರೆ, ಆರು ಮಂದಿಯಲ್ಲಿ ಸೋಂಕಿತ ಲಕ್ಷಣಗಳು ಕಂಡು ಬಂದಿವೆ.
ಕೇರಳಕ್ಕೆ ಹೊರರಾಜ್ಯಗಳಿಂದ ವಾಪಸ್ಸಾದ ನಾಲ್ವರಿಗೆ ಕೊರೊನಾ
ಮೇ ತಿಂಗಳ ಆರಂಭದಲ್ಲೇ ಹೊರ ರಾಜ್ಯಗಳಿಂದ ಕೇರಳಕ್ಕೆ ವಾಪಸ್ಸಾದ ನಾಲ್ವರಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಇದರ ಜೊತೆಗೆ ಕಳೆದ ಮೂರು ದಿನಗಳಲ್ಲಿ ಇದೇ ರೀತಿ ವಲಸೆ ಬಂದ ಐವರಿಗೆ ಕೊವಿಡ್-19 ಸೋಂಕು ಇರುವುದು ದೃಢಪಟ್ಟಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
ಕೇರಳಕ್ಕೆ 2 ದೇಶಗಳಿಂದ ಕೊರೊನಾ ಹೊತ್ತ ತಂದರಾ 6 ಮಂದಿ?
ಕೇರಳಕ್ಕೆ ವಾಪಸ್ಸಾಗುತ್ತಿರುವ ಪ್ರಜೆಗಳೇ ತಲೆನೋವು ತಂದೊಡ್ಡುವ ಆತಂಕ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಏಕೆಂದರೆ ಇತ್ತೀಚಿಗಷ್ಟೇ ಬೆಹ್ರಾನ್ ನಿಂದ ಕೊಚಿಕೋಡ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಾಲ್ವರು ಹಾಗೂ ದುಬೈನಿಂದ ಕೊಚ್ಚಿಗೆ ಆಗಮಿಸಿದ ಇಬ್ಬರಲ್ಲಿ ಕೊರೊನಾ ವೈರಸ್ ಸೋಂಕಿತ ಲಕ್ಷಣಗಳು ಕಾಣಿಸಿಕೊಂಡಿವೆ. ಈ ಹಿನ್ನೆಲೆ ಆರು ಮಂದಿ ಶಂಕಿತರನ್ನು ಮೇ.11ರಂದು ಕೊಚಿಕೋಡ್ ನಲ್ಲಿರುವ ಕಲಾಮಸ್ಸೇರಿ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಂಕಿತ ಆರು ಮಂದಿಯನ್ನು ಐಸೋಲೇಟೆಡ್ ವಾರ್ಡ್ ಗಳಲ್ಲಿ ಇರಿಸಿ ವೈದ್ಯಕೀಯ ತಪಾಸಣೆ ನಡೆಸಲಾಗುತ್ತಿದೆ.
ಗಲ್ಫ್ ರಾಷ್ಟ್ರದಿಂದ ಆಗಮಿಸಿದ ನಾಲ್ವರಿಗೆ ಕೊರೊನಾ ವೈರಸ್
ಕೇರಳಕ್ಕೆ ಗಲ್ಫ್ ರಾಷ್ಟ್ರಗಳಿಂದ ಆಗಮಿಸಿದ ನಾಲ್ವರಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ. ಕಳೆದ ಮೇ.07ರಿಂದ ವಂದೇ ಭಾರತ್ ಮಿಷನ್ ಹಾಗೂ ಸಮುದ್ರ ಸೇತು ಯೋಜನೆ ಅಡಿಯಲ್ಲಿ ಪ್ರತಿನಿತ್ಯವೂ ವಿದೇಶಗಳಿಂಗ ಕೇರಳಕ್ಕೆ ಜನರು ಆಗಮಿಸುತ್ತಲೇ ಇದ್ದಾರೆ. ಕೇರಳಕ್ಕೆ ವಾಪಸ್ ಆಗಲು 217 ರಾಷ್ಟ್ರಗಳ 4.42 ಲಕ್ಷ ಜನರು ಹೆಸರು ನೊಂದಾಯಿಸಿಕೊಂಡಿದ್ದಾರೆ.
ಮೂರನೇ ಬಾರಿ ಕೇರಳದಲ್ಲಿ ಕೊರೊನಾ ವೈರಸ್ ಅಲೆ
ನೊವೆಲ್ ಕೊರೊನಾ ವೈರಸ್ ಸೋಂಕಿತರು ಗುಣಮುಖರಾದರು ಎನ್ನುವಷ್ಟರಲ್ಲೇ ಕೇರಳದಲ್ಲಿ ಕೊವಿಡ್-19 ಮೂರನೇ ಅಲೆ ಎಬ್ಬಿಸುವ ಲಕ್ಷಣಗಳು ಗೋಚರಿಸುತ್ತಿವೆ. ಭಾರತದಲ್ಲಿ ರೈಲ್ವೆ ಸೇವೆ ಆರಂಭಿಸಿದ್ದು ಕೊರೊನಾ ಹಾಟ್ ಸ್ಪಾಟ್ ಆಗಿರುವ ಮುಂಬೈ ಹಾಗೂ ನವದೆಹಲಿ ನಗರಗಳಿಂದ ವೈರಸ್ ಸೋಂಕು ಬೇರೆ ಪ್ರದೇಶಗಳಲ್ಲಿಯೂ ಹರಡುವ ಅಪಾಯ ಹೆಚ್ಚಾಗಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮೋದಿ ಜೊತೆ ಸಂವಾದದ ಸಂದರ್ಭದಲ್ಲಿ ಕೇರಳ ಸಿಎಂ ಸಲಹೆ
ಇನ್ನು, ಮೇ.11ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಜೊತೆಗಿನ ವಿಡಿಯೋ ಸಂವಾದದ ಸಂದರ್ಭದಲ್ಲಿ ಆಂಟಿಬಾಯಿ ಕೊರೊನಾ ವೈರಸ್ ತಪಾಸಣೆ ಕಡ್ಡಾಯಗೊಳಿಸುವಂತೆ ಕೇರಳ ಸಿಎಂ ಪಿಣರಾಯಿ ವಿಜಯನ್ ಮನವಿ ಮಾಡಿಕೊಂಡಿದ್ದರು. ಪ್ರತಿ ವಿಮಾನಗಳಲ್ಲೂ ಗರ್ಭಿಣಿಯರು ಹಾಗೂ ಅನಾರೋಗ್ಯಕ್ಕೆ ತುತ್ತಾದ ಜನರನ್ನು ಕರೆ ತರಲಾಗುತ್ತಿದ್ದು, ಫ್ಲೈಟ್ ಏರುವ ಮುನ್ನ ಎಲ್ಲರನ್ನೂ ಆಂಟಿಬಾಡಿ ಕೊರೊನಾ ವೈರಸ್ ತಪಾಸಣೆಗೆ ಒಳಪಡಿಸಬೇಕು. ಏಕೆಂದರೆ ಒಬ್ಬರಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದರೂ ಸರಿ, ಉಳಿದ ಎಲ್ಲರಿಗೂ ಮಹಾಮಾರಿ ಅಂಟಿಕೊಳ್ಳುವ ಅಪಾಯವಿರುತ್ತದೆ ಎಂದು ಸಿಎಂ ಪಿಣರಾಿ ವಿಜಯನ್ ಮನವಿ ಮಾಡಿಕೊಂಡಿದ್ದರು.
ರಾಜ್ಯದಲ್ಲಿ ಕೇವಲ 16 ಮಂದಿಗೆ ಸೋಂಕು
ಕಳೆದ ಮೇ.08ರಂದು 16 ಮಂದಿ ಕೊರೊನಾ ವೈರಸ್ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಅಲ್ಲಿಗೆ ಶನಿವಾರದ ಅಂಕಿ-ಅಂಶಗಳ ಪ್ರಕಾರ ಕೇರಳದಲ್ಲಿ ಕೇವಲ 16 ಮಂದಿ ಕೊರೊನಾ ವೈರಸ್ ಸೋಂಕಿತರಿದ್ದರು. ಕಾಸರಗೂಡು ಕೊರೊನಾ ವೈರಸ್ ಮುಕ್ತ ಜಿಲ್ಲೆಯಾಗಿ ಘೋಷಣೆಯಾಯಿತು. ಆದರೆ ಅದಾಗಿ 48 ಗಂಟೆಗಳಲ್ಲೇ ರಾಜ್ಯದಲ್ಲಿ 11 ಹೊಸ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.