ಕೇರಳದಲ್ಲಿ 2018ರಂತೆ ಭೀಕರ ಪ್ರವಾಹ ಸಾಧ್ಯತೆ!
ತಿರುವನಂತಪುರಂ,ಆಗಸ್ಟ್ 5: ಮಧ್ಯ ಕೇರಳದಲ್ಲಿ ಬೀಸುತ್ತಿರುವ ಬಲವಾದ ಮಾನ್ಸೂನ್ ಮಾರುತಗಳಿಂದ ಉಂಟಾದ ಹೆಚ್ಚಿನ ತೀವ್ರತೆಯ ಮಳೆಯಿಂದಾಗಿ ಕೇರಳಕ್ಕೆ ಮತ್ತೊಮ್ಮೆ 2018ರ ರೀತಿಯ ಪ್ರವಾಹದಂತಹ ಪರಿಸ್ಥಿತಿ ಮರುಕಳಿಸುವಂತಿದೆ.
ಬಂಗಾಳಕೊಲ್ಲಿಯಲ್ಲಿ ಭಾನುವಾರದ ವೇಳೆಗೆ ಕಡಿಮೆ ಒತ್ತಡದ ವಾತಾವರಣ ನಿರ್ಮಾಣವಾಗಲಿದ್ದು, ಮಳೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಪರಿಸ್ಥಿತಿ ಅನಿಶ್ಚಿತವಾಗಿದ್ದು, ವಿಶೇಷವಾಗಿ ಮಧ್ಯ ಕೇರಳದಲ್ಲಿ ಉಕ್ಕುತ್ತಿರುವ ನದಿಗಳು ಈಗಾಗಲೇ ಹಲವಾರು ತಗ್ಗು ಪ್ರದೇಶಗಳನ್ನು ಮುಳುಗಿಸಲು ಪ್ರಾರಂಭಿಸಿವೆ.
Breaking: ಭಾರಿ ಮಳೆ, ಕೇರಳದ 8 ಜಿಲ್ಲೆಗಳಲ್ಲಿ ರೆಡ್ ಅಲರ್ಟ್
2018 ರ ಪ್ರವಾಹದ ಕಹಿ ಅನುಭವವು ಮತ್ತೆ ಮಧ್ಯ ಕೇರಳ ಜಿಲ್ಲೆಗಳಲ್ಲಿ ಗುರುವಾರ ಮಧ್ಯಾಹ್ನ ನೆನಪಿಗೆ ಬಂದಿತು. ಅಧಿಕ ಮಳೆಯಿಂದಾಗಿ ಪ್ರವಾಹ ಪೀಡಿತ ಪ್ರದೇಶಗಳಿಂದ ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲು ಪ್ರಾರಂಭಿಸಲಾಗಿದೆ. 6,411 ಜನರನ್ನು 221 ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಗುರುವಾರದಂದು ಮಳೆಯಿಂದ ವಿವಿಧ ಘಟನೆಗಳಲ್ಲಿ ಮೂರು ಜನರು ಸಾವನ್ನಪ್ಪಿದ್ದಾರೆ. ಕೇರಳದಲ್ಲಿ ಕಳೆದ ಐದು ದಿನಗಳಲ್ಲಿ ಒಟ್ಟು 22 ಜನರು ಮೃತಪಟ್ಟಿದ್ದಾರೆ. ತೀವ್ರ ಮಳೆಯಿಂದಾಗಿ ಡ್ಯಾಂಗಳು ಭರ್ತಿಯಾಗಿದ್ದು, ನದಿಗಳು ತುಂಬಿ ಹರಿಯುತ್ತಿದ್ದು, ಆತಂಕಕಾರಿ ಸನ್ನಿವೇಶವನ್ನು ಸೃಷ್ಟಿಯಾಗಿದೆ.
ಪರಂಬಿಕುಲಂ ಮತ್ತು ತೂನಕ್ಕಡವು ಅಣೆಕಟ್ಟುಗಳಿಂದ ಪೋರಿಂಗಲ್ಕುತ್ತು ಅಣೆಕಟ್ಟಿಗೆ ನೀರನ್ನು ಬಿಡುಗಡೆ ಮಾಡಿದ ಪರಿಣಾಮವಾಗಿ ಚಲಕುಡಿ ನದಿಯು ಹಲವೆಡೆ ಕಟ್ಟೆ ಒಡೆದಿದೆ. ತ್ರಿಶೂರ್ ಮತ್ತು ಎರ್ನಾಕುಲಂನಲ್ಲಿ ಜಿಲ್ಲಾಡಳಿತವು ನದಿಯ ದಡದಿಂದ ಜನರನ್ನು ಸ್ಥಳಾಂತರಿಸುವ ಕಾರ್ಯ ಕೈಗೊಂಡಿದೆ.
ಶೋಲಾಯರ್ ಡ್ಯಾಂ ಅನ್ನು ಮಧ್ಯಾಹ್ನ 3 ಗಂಟೆಗೆ ತೆರೆಯಲಾಗುವುದು ಎಂದು ಅಧಿಕಾರಿಗಳು ಘೋಷಿಸಿದ್ದರಿಂದ ಚಾಲಕುಡಿ ನದಿಗೆ ರಾತ್ರಿಯೊಳಗೆ ನೀರಿನ ಒಳಹರಿವು ಹೆಚ್ಚಾಗಲಿದೆ ಎಂದು ತಿಳಿಸಲಾಗಿದೆ. ತಮಿಳುನಾಡು ಶೋಲಯಾರ್ನಿಂದ ಕೇರಳಕ್ಕೆ ಒಳಹರಿವು ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಮುಲ್ಲಪೆರಿಯಾರ್ ಅಣೆಕಟ್ಟಿನಿಂದ ನೀರು ಬಿಡುವುದನ್ನು ನಿಯಂತ್ರಿಸಲು ಕ್ರಮಕೈಗೊಳ್ಳುವಂತೆ ಕೇರಳದ ಜಲಸಂಪನ್ಮೂಲ ಸಚಿವ ರೋಶಿ ಆಗಸ್ಟಿನ್ ತಮಿಳುನಾಡು ಸಚಿವ ಎಸ್. ದುರೈಮುರುಗನ್ಗೆ ಪತ್ರ ಬರೆದಿದ್ದಾರೆ.
ಮಧ್ಯ ತಿರುವಾಂಕೂರಿನ ಮೀನಾಚಿಲ್, ಪಂಪಾ, ಮಣಿಮಾಲಾ, ಅಚೆನ್ಕೋಯಿಲ್ ಮತ್ತು ಪುಲ್ಲಕಾಯರ್ ಸೇರಿದಂತೆ ತ್ರಿಶೂರ್ನ ಮನಾಲಿ, ಕುರುಮಾಲಿ ಮತ್ತು ಕರುವನ್ನೂರ್ ಸೇರಿದಂತೆ ನದಿಗಳು ಉಕ್ಕಿ ಹರಿಯುತ್ತಿದ್ದು, ಜನರನ್ನು ಸ್ಥಳಾಂತರಿಸಲು ಪ್ರಾರಂಭಿಸಲಾಗಿದೆ. ಪತ್ತನಂತಿಟ್ಟದ ಅಂಗಮೂಝಿ- ವಂಡಿಪೆರಿಯಾರ್ ಮಾರ್ಗದಲ್ಲಿ ಕೂಟ್ಟಿಕಲ್, ವಾಗಮೋನ್ ಮತ್ತು ಅರಣಮುಡಿ ಬಳಿಯ ಕೊಡಂಗದಲ್ಲಿ ಭೂಕುಸಿತ ವರದಿಯಾಗಿದೆ. ಪಂಪಾದಲ್ಲಿ ಹರಿಯುವ ಪ್ರವಾಹದ ನೀರು ಕೆಲವೇ ದಿನಗಳಲ್ಲಿ ಎರಡನೇ ಬಾರಿಗೆ ಅರಾಯಂಜಿಲಿಮೋನ್ನಲ್ಲಿ ಕಾಸ್ವೇ ಅನ್ನು ಮುಳಗಿಸಿದೆ. ಪೆರುಮ್ತೇನರುವಿ ಜಲಪಾತದ ಮೇಲ್ಭಾಗದಲ್ಲಿರುವ ಕುರುಬನ್ಮುಜಿಯ ಕಾಸ್ವೇ ಮುಳುಗಡೆಯಾಗಿದೆ.
ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ
ಮಳೆಯ ಗಂಭೀರ ಪರಿಸ್ಥಿತಿಯನ್ನು ಪರಿಗಣಿಸಿ ಶಬರಿಮಲೆಯಲ್ಲಿ ನೀರಪುತರಿ ಆಚರಣೆಯಲ್ಲಿ ಪಾಲ್ಗೊಳ್ಳಲು ಪಂಪಾ-ತ್ರಿವೇಣಿ ಬೇಸ್ ಕ್ಯಾಂಪ್ಗೆ ಆಗಮಿಸಿದ ಭಕ್ತರಿಗೆ ಮಧ್ಯಾಹ್ನ 3 ಗಂಟೆಯ ನಂತರ ಬೆಟ್ಟದ ಮೇಲೆ ಚಾರಣ ಮಾಡುವುದನ್ನು ನಿಷೇಧಿಸಲಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಅಧಿಕಾರಿಗಳ ಸೂಚನೆಯಂತೆ ದುರ್ಬಲ ಪ್ರದೇಶಗಳ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡಿದ್ದಾರೆ.
ಕೇರಳ ಮಳೆಗೆ ಭೂಕುಸಿತ ಶಂಕೆ: ಜನರಿಗೆ ಎಚ್ಚರಿಕೆ
ಗಂಟೆಗೆ 65 ಕಿ. ಮೀ. ವೇಗದ ಗಾಳಿ
2018 ರ ಪ್ರವಾಹದ ಸಮಯದಲ್ಲಿ ಜನರು ಸ್ಥಳಾಂತರಗೊಂಡ ಪ್ರದೇಶಗಳಲ್ಲಿ ವಿಶೇಷವಾಗಿ ತ್ರಿಶೂರ್ ಮತ್ತು ಎರ್ನಾಕುಲಂ ಜಿಲ್ಲೆಗಳ ತಗ್ಗು ಪ್ರದೇಶಗಳಲ್ಲಿರುವವರು ಶಿಬಿರಗಳಿಗೆ ತೆರಳಬೇಕು ಎಂದು ಸಿಎಂ ಪಿಣರಾಯಿ ವಿಜಯನ್ ಕರೆ ನೀಡಿದರು. ಕೇರಳ ಮತ್ತು ಲಕ್ಷದ್ವೀಪದ ಕರಾವಳಿಯಲ್ಲಿ ಗಂಟೆಗೆ 65 ಕಿ. ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.
ರಕ್ಷಣಾ ಭದ್ರತಾ ದಳದ ಕೋರಿಕೆ
ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ (ಎನ್ಡಿಆರ್ಎಫ್) ಒಂಬತ್ತು ತಂಡಗಳನ್ನು ಈಗಾಗಲೇ ವಿವಿಧ ಭಾಗಗಳಲ್ಲಿ ನಿಯೋಜಿಸಲಾಗಿದೆ ರಾಜ್ಯವು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್ಡಿಎಂಎ) ಮತ್ತು ರಕ್ಷಣಾ ಭದ್ರತಾ ದಳದಿಂದ ತಲಾ ಎರಡು ತಂಡಗಳನ್ನು ಮತ್ತು ಸೇನೆ ಮತ್ತು ನೌಕಾಪಡೆಯ ಒಂದು ಪಡೆಯನ್ನು ಕೋರಿದೆ. ಭಾರೀ ಮಳೆಯ ಮುನ್ಸೂಚನೆಯಲ್ಲಿ ತ್ರಿಶೂರ್, ಪತ್ತನಂತಿಟ್ಟ, ಇಡುಕ್ಕಿ, ಕೊಟ್ಟಾಯಂ, ಅಲಪ್ಪುಳ, ಪಾಲಕ್ಕಾಡ್ ಮತ್ತು ವಯನಾಡಿನಲ್ಲಿ ವೃತ್ತಿಪರ ಕಾಲೇಜುಗಳು ಸೇರಿದಂತೆ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.
24 ಗಂಟೆಗಳಲ್ಲಿ14 ಸೆಂ. ಮೀ. ಮಳೆ
ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯ ಹವಾಮಾನ ಬುಲೆಟಿನ್ ಶುಕ್ರವಾರ ಐದು ಜಿಲ್ಲೆಗಳಾದ ಇಡುಕ್ಕಿ, ಕೋಯಿಕ್ಕೋಡ್, ವಯನಾಡು, ಕಣ್ಣೂರು ಮತ್ತು ಕಾಸರಗೋಡುಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಭಾನುವಾರದ ವೇಳೆಗೆ ರೂಪುಗೊಳ್ಳುವ ಸಾಧ್ಯತೆಯಿರುವ ಕಡಿಮೆ ಒತ್ತಡವು ರಾಜ್ಯ ಮತ್ತು ಉತ್ತರ ಕೇರಳದ ಘಟ್ಟ ಪ್ರದೇಶಗಳಲ್ಲಿ ಮಳೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಏತನ್ಮಧ್ಯೆ, ಕೊಲ್ಲಂನ ಆರ್ಯಂಕಾವು ಮತ್ತು ಇಡುಕ್ಕಿಯ ಪೀರುಮೇಡು ಕಳೆದ 24 ಗಂಟೆಗಳಲ್ಲಿ14 ಸೆಂ. ಮೀ. ಮಳೆಯಾಗಿದೆ.
Recommended Video