ಎಂಥವರಿಗೂ ಕಣ್ಣೀರು ಹಾಕಿಸುತ್ತದೆ ಈ ಪ್ರೇಮಿಗಳ ಲವ್ ಸ್ಟೋರಿ
ತಿರುವನಂತಪುರಂ, ನವೆಂಬರ್.19: ಪ್ಯಾರ್, ಇಷ್ಕ್, ಮೊಹಬ್ಬತ್, ಪ್ರೀತಿಗೆ ಅರ್ಥಗಳು ನೂರೆಂಟು. ಆದರೆ ಭಾಷೆ ಒಂದೇ. ಎರಡು ಹೃದಯಗಳ ನಡುವೆ ಬೆಸೆಯುವ ಮಧುರ ಬಾಂಧವ್ಯಕ್ಕೆ ಕಣ್ಣುಗಳೇ ಸಂದೇಶ. ಆದರೆ, ಇದೇ ಪ್ರೀತಿಯ ಬಗ್ಗೆ ಕೇಳಿದರೆ ಹೆತ್ತವರ ಎದೆಯಲ್ಲಿ ಢವಢವ ಜೋರಾಗುತ್ತದೆ. ಅದಕ್ಕೆ ಕಾರಣವೇ ಪ್ರೀತಿಯ ಸುತ್ತಲೂ ಆವರಿಸಿರುವ ಪ್ರಶ್ನೆಗಳು. ನಿಜವಾದ ಪ್ರೀತಿ ಎಂದರೇನು ಎಂಬ ಪ್ರಶ್ನೆಗೆ ಇಂದಿಗೂ ಉತ್ತರ ಸಿಕ್ಕಿಲ್ಲ.
ಮಕ್ಕಳ ಮೇಲಿನ ಹೆತ್ತವರ ಸಂಬಂಧ, ಅಣ್ಣನೊಂದಿಗೆ ತಮ್ಮಂದಿರ ಬಾಂಧವ್ಯ, ಅಕ್ಕ-ತಂಗಿಯರ ನಡುವಿನ ಕಿತ್ತಾಟದಲ್ಲಿ ಅಡಗಿರುವ ಪ್ರೀತಿಗೆ ಒಂದು ಚೌಕಟ್ಟು ಇದೆ. ಇದರ ಮಧ್ಯೆ ಗೊತ್ತಿಲ್ಲದೇ ಎರಡು ಹೃದಯಗಳನ್ನು ಬೆಸೆಯುವ ಪ್ರೀತಿಗೆ ಯಾವುದೇ ಚೌಕಟ್ಟು ಇರುವುದಿಲ್ಲ. ಹೀಗೆ ಹುಟ್ಟುವ ಪ್ರೀತಿ ಕೆಲವರ ಪಾಲಿಗೆ ಬಲೆಯಾಗುತ್ತದೆ. ಇನ್ನು, ಕೆಲವರ ಪಾಲಿಗೆ ಬದುಕಿನ ಸೆಲೆ ಆಗುತ್ತದೆ.
ಮನ ಮೆಚ್ಚಿದಾಕೆಯ ಬದುಕಿಗೆ ಆಸರೆಯಾಗಿ ನಿಂತ ಪತಿಯ ಪ್ರೀತಿ ಇದೀಗ ದೇಶಾದ್ಯಂತ ಸುದ್ದಿ ಆಗಿದೆ. ಪ್ರೇಮಿಗಳು ಅಂದಾಕ್ಷಣ ರೋಮಿಯೋ-ಜೂಲಿಯಟ್, ಲೈಲಾ-ಮಜನು ನೆನಪಿಗೆ ಬರುತ್ತಾರೆ. ಈ ಪ್ರೇಮಿಗಳ ಕಥೆಯನ್ನೂ ಈ ದಂಪತಿಯ ಮೀರಿ ನಿಂತಿದ್ದಾರೆ.
ಕೇರಳದ ಥ್ರಿಸ್ಸುರ್ ನಗರದ ಶಾನ್ ಇಬ್ರಾಹಿಂ ಬಾದ್ ಶಹಾ ಹಾಗೂ ಶೃತಿ ಎಂಬ ಯುವತಿ ಪ್ರೀತಿಸಿ ಮದುವೆಯಾಗಿರುತ್ತಾರೆ. ಇಬ್ಬರ ದಾಂಪತ್ಯ ಬದುಕನ್ನು ಕಂಡ ದೇವರಿಗೂ ಅಸೂಯೆ ಹುಟ್ಟಿದಂತೆ ಕಾಣುತ್ತದೆ. ಹೀಗಾಗಿ ಮದುವೆಯಾದ ಒಂದೇ ವರ್ಷದಲ್ಲಿ ಶೃತಿ ಮಾರಕ ರೋಗ ಕ್ಯಾನ್ಸರ್ ಗೆ ತುತ್ತಾಗುತ್ತಾರೆ.
ಪತ್ನಿಗೆ ಆತ್ಮಸ್ಥೈರ್ಯ ತುಂಬಿದ ಶಾನ್, ಆಕೆಯ ಚಿಕಿತ್ಸೆಗಾಗಿ ತಾನು ಬರೆದ ಪೇಟಿಂಗ್ಸ್ ಗಳನ್ನೆಲ್ಲ ಮಾರಾಟ ಮಾಡುತ್ತಾರೆ. ಇತ್ತೀಚಿಗೆ ಕ್ಯಾನ್ಸರ್ ನಿಂದ ಬಳಲುತ್ತಿರುವ ಶೃತಿ ತಲೆಗೂದಲು ಉದರುತ್ತಿದ್ದು, ವೈದ್ಯರು ಆಕೆಯ ತಲೆಗೂದಲನ್ನು ಸಂಪೂರ್ಣವಾಗಿ ತೆಗೆಸುವಂತೆ ಸೂಚನೆ ನೀಡಿರುತ್ತಾರೆ.
ಈ ವೇಳೆ ಪತ್ನಿ ಶೃತಿ ಜೊತೆಗೆ ಶಾನ್ ಕೂಡಾ ತಮ್ಮ ತಲೆ ಕೂದಲನ್ನು ಸಂಪೂರ್ಣವಾಗಿ ತೆಗೆಸಿದ್ದಾರೆ. ಆ ಮೂಲಕ ಪತ್ನಿಯ ಕಷ್ಟ-ಸುಖ, ನೋವು-ನಲಿವಿನಲ್ಲಿ ಸದಾ ತಾವು ಜೊತೆಯಾಗಿ ಇರುವುದಾಗಿ ಅಭಯ ನೀಡಿದ್ದಾರೆ. ಆ ಮೂಲಕ ನಿಜವಾದ ಪ್ರೀತಿಯ ಅರ್ಥವನ್ನು ಸಾರಿ ಹೇಳಿದ್ದಾರೆ. ಇದೀಗ ಈ ಪ್ರೇಮಿಗಳ ಕಥೆ ಇದೀಗ ರಾಷ್ಟ್ರಾದ್ಯಂತ ಸದ್ದು ಮಾಡುತ್ತಿದೆ.