ಹೆಚ್ಚಿದ ಕೋವಿಡ್ ಪ್ರಕರಣ: ಕಂಟೇನ್ಮೆಂಟ್ ವಲಯವಾಗುತ್ತದೆಯೇ ಶಬರಿಮಲೆ ಸನ್ನಿಧಿ?
ತಿರುವನಂತಪುರಂ, ಡಿಸೆಂಬರ್ 31: ಶಬರಿಮಲೆಯಲ್ಲಿ ಮಕರವಿಳಕ್ಕು ಅವಧಿಯ ಎರಡನೆಯ ಮತ್ತು ಅಂತಿಮ ಹಂತದ ಪೂಜಾ ವಿಧಾನಗಳು ಬುಧವಾgf fರದಿಂದ ಆರಂಭವಾಗಿದ್ದು, ಗುರುವಾರ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಆದರೆ ದೇವಸ್ಥಾನದ ಇಬ್ಬರು ಅರ್ಚರಕರು ಸೇರಿದಂತೆ ಸನ್ನಿಧಾನದ ಸಮೀಪ 37 ಕೋವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗಿರುವುದು ಆತಂಕ ಮೂಡಿಸಿದೆ.
ಶಬರಿಮಲೆ ದೇವಸ್ಥಾನದ ಮುಖ್ಯ ಅರ್ಚಕ ವಿ.ಕೆ. ಜಯರಾಜ್ ಪೊಟ್ಟಿ ಮತ್ತು ಅವರ ಆರು ಮಂದಿ ಸಹಾಯಕರು ಕೊರೊನಾ ವೈರಸ್ ಪಾಸಿಟಿವ್ ಕಂಡುಬಂದ ಮೂವರು ಸೋಂಕಿತರ ಜತೆಗೆ ಸಂಪರ್ಕಕ್ಕೆ ಬಂದ ಹಿನ್ನೆಲೆಯಲ್ಲಿ ಅವರನ್ನು ಕ್ವಾರೆಂಟೈನ್ಗೆ ಒಳಪಡಿಸಲಾಗಿದೆ ಎಂದು ಟ್ರ್ಯಾವೆಂಕೋರ್ ದೇವಸ್ವಂ ಮಂಡಳಿ ತಿಳಿಸಿದೆ.
ಶಬರಿಮಲೆ ಪೂಜೆ ಪುನರಾರಂಭ: ಮುಖ್ಯ ಅರ್ಚಕ ಕ್ವಾರೆಂಟೈನ್
ಸನ್ನಿಧಾನದಲ್ಲಿನ ಒಬ್ಬ ಅರ್ಚಕರಲ್ಲಿ ಕೊರೊನಾ ವೈರಸ್ ಸೋಂಕಿನ ಲಕ್ಷಣಗಳು ಕಂಡು ಬಂದ ಕೂಡಲೇ ಮುಖ್ಯ ಅರ್ಚಕ ಮತ್ತು ಇತರೆ ಆರು ಮಂದಿ ಅರ್ಚಕರನ್ನು ತಪಾಸಣೆಗೆ ಒಳಪಡಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸನ್ನಿಧಾನದಲ್ಲಿ ತ್ವರಿತ ಪರೀಕ್ಷೆ ಕಾರ್ಯ ನಡೆಸುವ ವೇಳೆ ಮುಖ್ಯ ಅರ್ಚಕರಿಗೆ ಅಡುಗೆ ಮಾಡುವ ವ್ಯಕ್ತಿ ಹಾಗೂ ಇಬ್ಬರು ಕಿರಿಯ ಅರ್ಚಕರಲ್ಲಿ ಪಾಸಿಟಿವ್ ಕಂಡುಬಂದಿದೆ. ಹೀಗಾಗಿ ಮೆಲ್ಸಂತಿ (ಮುಖ್ಯ ಅರ್ಚಕ) ಮತ್ತು ಅವರ ಸಹಾಯಕರನ್ನು ಕ್ವಾರೆಂಟೈನ್ನಲ್ಲಿ ಇರುವಂತೆ ಸೂಚಿಸಲಾಗಿದೆ. ಶಬರಿಮಲೆ ಯಾತ್ರೆ ನಿಗದಿಯಂತೆ ಮುಂದುವರಿಯಲಿದೆ ಎಂದು ಟಿಡಿಬಿ ವಕ್ತಾರರು ತಿಳಿಸಿದ್ದಾರೆ.
ಸನ್ನಿಧಾನದಲ್ಲಿ ಹೆಚ್ಚಿನ ಕೋವಿಡ್ ಪ್ರಕರಣಗಳು ವರದಿಯಾಗಿರುವುದರಿಂದ ಯಾತ್ರಾ ವಲಯವನ್ನು ಕಂಟೇನ್ಮೆಂಟ್ ಝೋನ್ ಎಂದು ಘೋಷಿಸಬೇಕೇ ಅಥವಾ ಬೇಡವೇ ಎಂಬ ಗೊಂದಲ ಆರೋಗ್ಯ ಹಾಗೂ ಕಂದಾಯ ಅಧಿಕಾರಿಗಳಲ್ಲಿ ಉಂಟಾಗಿದೆ.
ಶಬರಿಮಲೆ ಕೋವಿಡ್ ಪರೀಕ್ಷೆ ಕ್ರಮ: ಅಯ್ಯಪ್ಪ ಸ್ವಾಮಿ ಭಕ್ತರಿಗೆ ಕೊಂಚ ನಿರಾಳ
ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಅಂತಹ ಘೋಷಣೆ ಬಹಳ ಮುಖ್ಯವಾಗಿದೆ. ಅದನ್ನು ಜಾರಿಗೆ ತರಲು ನಮಗೆ ಈಗಾಗಲೇ ಶಿಫಾರಸು ಬಂದಿದೆ. ಅದು ಜಾರಿಯಾದರೆ ಯಾತ್ರಾ ಅವಧಿಯ ಮೇಲೆ ತೀವ್ರ ಪರಿಣಾಮ ಉಂಟಾಗಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.