ಕೇರಳ ಅಕ್ರಮ ಚಿನ್ನ ಸಾಗಣೆ ಪ್ರಕರಣ ಬೆಂಗಳೂರಿಗೆ ವರ್ಗಾವಣೆಗೆ ಶಿವಶಂಕರ್ ವಿರೋಧ
ತಿರುವನಂತಪುರಂ, ಜುಲೈ24: ಯುಎಇ ರಾಯಭಾರಿ ಕಚೇರಿ ಮೂಲಕ ಚಿನ್ನ ಕಳ್ಳಸಾಗಣೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಕೇರಳ ಮುಖ್ಯಮಂತ್ರಿಯ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಜಾರಿ ನಿರ್ದೇಶನಾಲಯದ (ಇಡಿ) ಪ್ರಕರಣವನ್ನು ರಾಜ್ಯದ ಹೊರಗೆ ಸ್ಥಳಾಂತರಿಸುವ ಪ್ರಯತ್ನದ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಆಕ್ಷೇಪಣೆ ಅರ್ಜಿ ಸಲ್ಲಿಸಿದ್ದಾರೆ.
ಪ್ರಕರಣವನ್ನು ವಿವರವಾಗಿ ಆಲಿಸದೆ ಪ್ರಕರಣವನ್ನು ವರ್ಗಾಯಿಸಲು ಇಡಿ ಅರ್ಜಿಯ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳದಂತೆ ನ್ಯಾಯಾಲಯವನ್ನು ಎಂ.ಶಿವಶಂಕರ್ ಕೋರಿದ್ದಾರೆ. ಈ ಕ್ರಮ ರಾಜಕೀಯ ಪ್ರೇರಿತವಾಗಿದ್ದು, ಆರೋಪಪಟ್ಟಿ ಸಲ್ಲಿಸಿದ ಬಳಿಕ ಪ್ರಕರಣವನ್ನು ಬೇರೆ ರಾಜ್ಯಕ್ಕೆ ವರ್ಗಾಯಿಸುವುದು ಸರಿಯಲ್ಲ ಎಂದರು. ಈ ಬಗ್ಗೆ ರಾಜ್ಯ ಸರ್ಕಾರ ಇನ್ನೂ ನಿರ್ಧಾರ ಪ್ರಕಟಿಸಿಲ್ಲ.
ಚಿನ್ನದ ಸ್ಮಗಲಿಂಗ್ ಕೇಸ್ ಸಿಬಿಐಗೆ ಒಪ್ಪಿಸಿ, ಪಿಎಂಗೆ ಸ್ವಪ್ನ ಸುರೇಶ್ ಪತ್ರ
ಸಿಆರ್ಪಿಸಿಯ 164 ರ ಅಡಿಯಲ್ಲಿ ಹಗರಣ ಪ್ರಧಾನ ಆರೋಪಿ ಸ್ವಪ್ನಾ ಸುರೇಶ್ ಅವರ ಇತ್ತೀಚಿನ ಹೇಳಿಕೆಯನ್ನು ಸಹ ಅದು ಉಲ್ಲೇಖಿಸಿದೆ. ಸ್ವಪ್ನಾ ಸುರೇಶ್ ಸಿಎಂ ಪಿಣರಾಯಿ ವಿಜಯನ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ತ್ವರಿತ ವಿಚಾರಣೆಗಾಗಿ ಪ್ರಕರಣವನ್ನು ಬೆಂಗಳೂರಿಗೆ ವರ್ಗಾಯಿಸಲು ಬಯಸುವುದಾಗಿ ಜಾರಿ ನಿರ್ದೇಶನಾಲಯ ಹೇಳಿದೆ.
ಇ.ಡಿ ಅಧಿಕಾರಿಗಳ ವಿರುದ್ಧ ಕೇರಳ ಪೊಲೀಸ್ ಪ್ರಕರಣ
ಪ್ರಕರಣವನ್ನು ದುರ್ಬಲಗೊಳಿಸಲು ಉದ್ದೇಶಪೂರ್ವಕ ಪ್ರಯತ್ನಗಳು ನಡೆಯುತ್ತಿವೆ ಎಂದು ಇ.ಡಿ ಕಳೆದ ವಾರ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿತ್ತು. ಇ.ಡಿ ಅಧಿಕಾರಿಗಳ ವಿರುದ್ಧ ಕೇರಳ ಪೊಲೀಸ್ ಪ್ರಕರಣ ಮತ್ತು ಕೇಂದ್ರೀಯ ಸಂಸ್ಥೆಯ ವಿರುದ್ಧ ನ್ಯಾಯಾಂಗ ಆಯೋಗವನ್ನು ಉಲ್ಲೇಖಿಸಿ, "ಪ್ರಭಾವಿ ವ್ಯಕ್ತಿಗಳು ಪ್ರಕರಣದಲ್ಲಿ ಭಾಗಿಯಾಗಿರುವುದರಿಂದ, ಮೊದಲಿನಿಂದಲೂ ಪ್ರತಿವಾದಿ ಸಂಖ್ಯೆ 4 (ಶಿವಶಂಕರ್) ಆದೇಶದ ಮೇರೆಗೆ ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ತನಿಖೆಯನ್ನು ತಡೆಯಲು ಮತ್ತು ಹಳಿತಪ್ಪಿಸಲು ಸಂಘಟಿತ ಪ್ರಯತ್ನ ನಡೆಯುತ್ತಿದೆ" ಎಂದುಇ.ಡಿ ಆರೋಪಿಸಿತ್ತು.
30 ಕೆ.ಜಿ. ಚಿನ್ನ ಇದ್ದ ಬ್ಯಾಗ್
ಜುಲೈ 5, 2020ರಲ್ಲಿ ಕೇರಳದ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು 15 ಕೋಟಿ ರುಪಾಯಿ ಮೌಲ್ಯದ 30 ಕೆ.ಜಿ. ಚಿನ್ನ ಇದ್ದ ಬ್ಯಾಗ್ ವಶಕ್ಕೆ ಪಡೆದಿದ್ದರು. ಈ ಬ್ಯಾಗ್ ಯುನೈಟೆಡ್ ಎಮಿರೇಟ್ಸ್ ಕಾನ್ಸುಲೇಟ್ ವಿಳಾಸ ಹೊಂದಿತ್ತು,
ದೂತಾವಾಸ ಕಚೇರಿಯ ವಿಶೇಷ ಸೌಲಭ್ಯ ದುರ್ಬಳಕೆ ಮಾಡಿಕೊಂಡು ಭಾರತಕ್ಕೆ ಚಿನ್ನ ಕಳ್ಳಸಾಗಣೆ ಮಾಡಲಾಗುತ್ತಿತ್ತು ಎಂದು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದರು. ಪ್ರಕರಣದಲ್ಲಿ ಸ್ವಪ್ನಾ ಸುರೇಶ್ ಪ್ರಮುಖ ಆರೋಪಿ ಎಂದು ಬಂಧಿಸಿದ್ದರು. ಆರೋಪಿಗೆ ಕೇರಳದ ಪ್ರಭಾವಿ ವ್ಯಕ್ತಿಗಳ ಸಂಪರ್ಕ ಇರುವುದು ಪತ್ತೆಯಾಗಿತ್ತು.
ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆ
ಬ್ಯಾಗ್ ಸ್ವೀಕರಿಸಲು ಬಂದಿದ್ದ ಕಾನ್ಸುಲೇಟ್ನ ಮಾಜಿ ಉದ್ಯೋಗಿ ಪಿ ಎಸ್ ಸರಿತ್ ಅವರನ್ನು ಅದೇ ದಿನ ಬಂಧಿಸಲಾಯಿತು ಮತ್ತು ಒಂದು ವಾರದ ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಸ್ವಪ್ನಾ ಸುರೇಶ್ ಮತ್ತು ಆಕೆಯ ಸಹಚರ ಸಂದೀಪ್ ನಾಯರ್ ಅವರನ್ನು ಬಂಧಿಸಿತು.
ಈ ಪ್ರಕರಣದಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್ ಕಾರ್ಯದರ್ಶಿ ಎಂ. ಶಿವಶಂಕರ್ ಕೂಡಾ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಅಮಾನತು ಮಾಡಲಾಗಿತ್ತು. ಮೂರು ತಿಂಗಳ ನಂತರ ಅವರನ್ನು ಕೇಂದ್ರೀಯ ಸಂಸ್ಥೆಗಳು ಬಂಧಿಸಿದವು. ಬಿಡುಗಡೆಯಾದ ನಂತರ ಅವರ ಅಮಾನತು ಹಿಂಪಡೆಯಲಾಯಿತು ಮತ್ತು 2022ರ ಜನವರಿಯಲ್ಲಿ ಮಾಜಿ ಅಧಿಕಾರಿಯನ್ನು ಸರ್ಕಾರಿ ಸೇವೆಗೆ ಮರುನೇಮಕ ಮಾಡಲಾಯಿತು.
Recommended Video
180 ಕೆಜಿ ಚಿನ್ನವನ್ನು ಕಳ್ಳಸಾಗಣೆ
ಈ ಪ್ರಕರಣದಲ್ಲಿ ಶಿವಶಂಕರ್ 29ನೇ ಆರೋಪಿಯಾಗಿದ್ದಾರೆ. ನವೆಂಬರ್ 2019 ಮತ್ತು ಜೂನ್ 2020 ರ ನಡುವೆ ದೂತಾವಾಸದ ಮೂಲಕ ಗ್ಯಾಂಗ್ ಸುಮಾರು 180 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡಿದೆ ಎಂದು ಚಾರ್ಜ್ ಶೀಟ್ನಲ್ಲಿ ಹೇಳಿದೆ.
ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಯುಎಇ ಕಾನ್ಸುಲೇಟ್ನಲ್ಲಿ ಮೊದಲು ಕಾರ್ಯ ನಿರ್ವಹಿಸಿದ್ದರು. ನಂತರ ಅವರನ್ನು ಕೇರಳದ ಐಟಿ ಇಲಾಖೆಯ ಯೋಜನೆಯೊಂದಕ್ಕೆ ಕಾರ್ಯ ನಿರ್ವಹಿಸಲು ನೇಮಕ ಮಾಡಲಾಗಿತ್ತು. ಕೇರಳ ಸಿಎಂ ಪಿಣರಾಯಿ ವಿಜಯನ್ ಕಾರ್ಯದರ್ಶಿ ಎಂ. ಶಿವಶಂಕರ್ ಈ ಇಲಾಖೆಯ ಉಸ್ತುವಾರಿ ಹೊತ್ತಿದ್ದರು.