ಎನ್ಐಎ ಕಸ್ಟಡಿಗೆ ಸ್ವಪ್ನ ಸುರೇಶ್: ಕೋರಮಂಗಲದಿಂದ ಕೊಚ್ಚಿ ತನಕ
ಕೊಚ್ಚಿ, ಜುಲೈ 12: ಕೇರಳದ ಚಿನ್ನ ಸ್ಮಗಲಿಂಗ್ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನ ಸುರೇಶ್ ಹಾಗೂ ಸಂದೀಪ್ ಅವರನ್ನು 14 ದಿನಗಳ ಕಾಲ ರಾಷ್ಟ್ರೀಯ ತನಿಖಾ ತಂಡ ( ಎನ್ಐಎ) ಕಸ್ಟಡಿಗೆ ನೀಡಲಾಗಿದೆ.
ಕೇರಳದಲ್ಲಿ ಸಂಚಲನ ಮೂಡಿಸಿರುವ ಚಿನ್ನದ ಸ್ಮಗಲಿಂಗ್ ಕೇಸಿನ ಪ್ರಮುಖ ಆರೋಪಿ ಸ್ವಪ್ನ ಸುರೇಶ್ ಹಾಗೂ ಸಂದೀಪ್ ಅವರು ಪ್ರಕರಣ ಬೆಳಕಿಗೆ ಬಂದ ಬಳಿಕ ನಾಪತ್ತೆಯಾಗಿದ್ದರು. ಎರ್ನಾಕುಲಂನಲ್ಲಿ ತಮ್ಮ ವಕೀಲರನ್ನು ಭೇಟಿ ಮಾಡಿದ್ದರು. ನಂತರ, ಬೆಂಗಳೂರಿಗೆ ಬಂದು ಅಡಗಿದ್ದು, ವಿದೇಶಕ್ಕೆ ಹಾರಲು ಯತ್ನಿಸಿದ್ದರು ಎಂದು ತಿಳಿದು ಬಂದಿದೆ.
ಸ್ವಪ್ನಾಗೆ ಜಾಮೀನಿಲ್ಲ, ಕೇರಳ ಸ್ಮಗಲಿಂಗ್ ಕೇಸಿಗೆ IS ಲಿಂಕ್?
ಬೆಂಗಳೂರಿನ ಕೋರಮಂಗಲದಲ್ಲಿ ಬಂಧಿತರಾಗಿದ್ದ ಆರೋಪಿಗಳನ್ನು ಭಾನುವಾರದಂದು ಕೊಚ್ಚಿಯಲ್ಲಿರುವ ಎನ್ಐಎ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯದಲ್ಲಿ ಎನ್ಐಎ ಕೋರಿಕೆ ಮೇರೆಗೆ ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು 14 ದಿನಗಳ ಕಾಲ ವಶಕ್ಕೆ ನೀಡಲಾಗಿದೆ.
ಕೊವಿಡ್ 19 ಪರೀಕ್ಷೆ ಕಡ್ಡಾಯ: ಇದಕ್ಕೂ ಮುನ್ನ ಎರ್ನಾಕುಲಂನ ಆಲುವ ಆಸ್ಪತ್ರೆಯಲ್ಲಿ ಕಡ್ಡಾಯವಾಗಿ ಆರೋಪಿಗಳಿಗೆ ಕೊವಿಡ್ 19 ಪರೀಕ್ಷೆ ನಡೆಸಲಾಯಿತು. ಸದ್ಯ ಕೊವಿಡ್19 ಪರೀಕ್ಷೆ ಫಲಿತಾಂಶ ಹೊರ ಬರುವ ತನಕ ಐಸೋಲೇಷನ್ ಕೇಂದ್ರದಲ್ಲಿರಿಸಲಾಗಿದೆ. ಸ್ವಪ್ನರನ್ನು ತ್ರಿಸ್ಸೂರಿನ ಅಂಬಿಲಿಕ್ಕಾಳ ಹಾಸ್ಟೆಲ್ ನಲ್ಲಿರಿಸಿದ್ದರೆ, ಸಂದೀಪ್ ಆಲುವಾದ ಕಾರುಕುಟ್ಟಿಯಲ್ಲಿದ್ದಾರೆ.
ಪ್ರತಿಭಟನೆಯ ಬಿಸಿ
ಆರೋಪಿಗಳಾದ ಸ್ವಪ್ನ ಸುರೇಶ್, ಸಂದೀಪ್ ನಾಯರ್ ಅವರನ್ನು ಎನ್ಐಎ ತಂಡವು ಬೆಂಗಳೂರಿನಿಂದ ಕೇರಳ ಗಡಿಗೆ ಕರೆದುಕೊಂಡು ಬರುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಎಲ್ ಡಿಎಫ್ ಸರ್ಕಾರದ ವಿರುದ್ಧ ಪ್ರತಿಭಟನೆ ಜೋರು ಮಾಡಿ, ವಾಹನಗಳಿಗೆ ಅಡ್ಡಿಪಡಿಸಿದರು. ವಲಯಾರ್ ಚೆಕ್ ಪೋಸ್ಟ್ ನಲ್ಲಿ ಎರಡು ಪ್ರತ್ಯೇಕ ವಾಹನಗಳಲ್ಲಿ ಇಬ್ಬರನ್ನು ಕರೆದೊಯ್ಯಲಾಯಿತು. ಕೊಚ್ಚಿಯ ಕಡವಂತ್ರಾ ಎನ್ಐಎ ಕಚೇರಿಗೆ ಮಧ್ಯಾಹ್ನ 2.30ಕ್ಕೆ ಆಗಮಿಸಿದರು. ಕಚೇರಿ ಮುಂದೆ ಕೂಡಾ ಪ್ರತಿಭಟನೆ ಎದುರಿಸಬೇಕಾಯಿತು. ಸಂಜೆ ಎನ್ಐಎ ನ್ಯಾಯಲಯಕ್ಕೆ ಹಾಜರುಪಡಿಸಿ ವಶಕ್ಕೆ ಪಡೆಯಲಾಯಿತು.
ಬೆಂಗಳೂರಲ್ಲಿ ಬಂಧನ
ಬೆಂಗಳೂರಿನ ಕೋರಮಂಗಲ ಅಪಾರ್ಟ್ಮೆಂಟ್ ನಲ್ಲಿ ಅಡಗಿ ಕುಳಿತ್ತಿದ್ದ ಸ್ವಪ್ನ ಹಾಗೂ ಸಂದೀಪ್ ರನ್ನು ಹೈದರಾಬಾದ್ ಎನ್ಐಎ ತಂಡದ ಅಧಿಕಾರಿಗಳು ಶನಿವಾರ ಸಂಜೆ 7ಕ್ಕೆ ಸುಮಾರಿಗೆ ಬಂಧಿಸಿದ್ದರು. ಬಂಧಿತ ಬಳಿ ಇದ್ದ 2 ಲಕ್ಷ ರು ನಗದು, ಪಾಸ್ ಪೋರ್ಟ್ ವಶಪಡಿಸಿಕೊಂಡಿದ್ದರು. ಇಬ್ಬರು ಬೆಂಗಳೂರಿನಿಂದ ಎಸ್ಕೇಪ್ ಆಗಲು ಯೋಜನೆ ಹಾಕಿಕೊಂಡಿದ್ದರು ಎಂದು ತಿಳಿದು ಬಂದಿದೆ. ನಂತರ ಆರೋಪಿಗಳನ್ನು ದೊಮ್ಮಲೂರಿನ ಕಚೇರಿಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಹೇಳಿಕೆ ಪಡೆಯಲಾಯಿತು.
ಬಂಧನ ಸಾಧ್ಯವಾಗಿದ್ದು ಹೇಗೆ?
ಯುಎಇ ಕಾನ್ಸುಲೇಟ್ ಕಚೇರಿಯ ಪಿಆರ್ ಒ ಪಿಎಸ್ ಸರೀತ್ ಹೇಳಿಕೆ ಆಧಾರದ ಮೇಲೆ ಸ್ವಪ್ನಗಾಗಿ ಬಲೆ ಬೀಸಿದ್ದ ಎನ್ಐಎ ಅಧಿಕಾರಿಗಳಿಗೆ ನೆರವಾಗಿದ್ದು ಮಾತ್ರ ಒಂದು ಟೆಲಿಫೋನ್ ಟವರ್ ಟ್ರ್ಯಾಕಿಂಗ್. ಸ್ವಪ್ನ ಅವರ ಮಗಳು ಶನಿವಾರ ಮಧ್ಯಾಹ್ನ ಫೋನ್ ಆನ್ ಮಾಡುತ್ತಿದ್ದಂತೆ, ಹೈದರಾಬಾದಿನ ಎನ್ಐಎ ತಂಡ ಟ್ರೇಸ್ ಮಾಡತೊಡಗಿದೆ. ಜೊತೆಗೆ ಟಿವಿ ವಾಹಿನಿಯೊಂದಕ್ಕೆ ಸ್ವಪ್ನ ನೀಡಿದ್ದ ಆಡಿಯೋ ಪ್ರತಿಕ್ರಿಯೆ ಕೂಡಾ ಹುಡುಕಾಟದಲ್ಲಿ ನೆರವಾಗಿದೆ. ಐಪಿ ಅಡ್ರೆಸ್ ಟ್ರೇಸ್ ಮಾಡಿದ ಅಧಿಕಾರಿಗಳು ಕೋರಮಂಗಲದ ಸರ್ವೀಸ್ ಅಪಾರ್ಟ್ಮೆಂಟ್ ಮುಂದೆ ಬಂದು ನಿಂತಿದ್ದರು.
ಯಾರು ಯಾರು ಆರೋಪಿಗಳು
ಸ್ವಪ್ನ ಪ್ರಭ ಸುರೇಶ್, ಫಾಜೀಲ್ ಫರೀದ್, ಸಂದೀಪ್ ನಾಯರ್ ಹಾಗೂ ಸರೀತ್ ಕುಮಾರ್ ಅವರ ವಿಚಾರಣೆಗೆ ಅಗತ್ಯವಿದೆ ಎಂದು ಎನ್ಐಎ ಅಧಿಕಾರಿಗಳು ಚಾರ್ಜ್ ಶೀಟ್ ನಲ್ಲಿ ಹೇಳಿದ್ದಾರೆ. ಈ ಪೈಕಿ ಫಾಜೀರ್ ಫರೀದ್ ಇನ್ನೂ ಪತ್ತೆಯಾಗಿಲ್ಲ, ಯುಎಇ ಕಾನ್ಸುಲೇಟ್ ಕಚೇರಿಯ ಪಿಆರ್ ಒ ಪಿಎಸ್ ಸರೀತ್ ಮೊದಲಿಗೆ ಬಂಧನವಾಗಿದ್ದು, ಆತನ ಮೂಲಕವೇ ಸ್ವಪ್ನ ಈ ಕೇಸಿನಲ್ಲಿರುವುದು ಪತ್ತೆಯಾಗಿತ್ತು. ಸಿಎಂ ಪಿಣರಾಯಿ ವಿಜಯನ್ ಪ್ರಧಾನ ಕಾರ್ಯದರ್ಶಿ ಶಿವಶಂಕರ್ ಜೊತೆ ಸ್ವಪ್ನ ಸಂಪರ್ಕದಲ್ಲಿರುವುದು ಪತ್ತೆಯಾಯಿತು.
ಏನಿದು ಪ್ರಕರಣ
ರಾಜತಾಂತ್ರಿಕ ರಕ್ಷಣೆ ಹೊಂದಿರುವ ''ಡಿಪ್ಲೊಮ್ಯಾಟಿಕ್ ಬ್ಯಾಗೇಜ್'' ನಲ್ಲಿದ್ದ 30 ಕೆಜಿ ಚಿನ್ನವನ್ನು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶ ಪಡಿಸಿಕೊಂಡಿದ್ದರು. ಸುಮಾರು 15 ಕೋಟಿ ರೂಪಾಯಿ ಮೌಲ್ಯದ ಈ ಚಿನ್ನ ಅಕ್ರಮ ಸಾಗಣೆಯ ಆರೋಪಿ ರಾಜತಾಂತ್ರಿಕ ಕಚೇರಿಯ ಮಾಜಿ ಸಿಬ್ಬಂದಿ ಸ್ವಪ್ನ ಸುರೇಶ್ ಎಂದು ಆರೋಪಿಸಲಾಗಿದೆ.
ನಾಲ್ಕೈದು ದಿನಗಳಿಂದ ನಾಪತ್ತೆಯಾಗಿದ್ದ ಸ್ವಪ್ನ ಆನ್ ಲೈನ್ ಮೂಲಕ ಜಾಮೀನು ಅರ್ಜಿ ಹಾಕಿದ್ದರು. ಯುಎಪಿಎ ಕಾಯ್ದೆ 1967ಉಲ್ಲಂಘನೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಇಂದು ಜಾಮೀನು ಅರ್ಜಿ ವಿಚಾರಣೆ ಸಾಧ್ಯವಿಲ್ಲ ಎಂದು ಮುಂದಿನ ಮಂಗಳವಾರಕ್ಕೆ ಮುಂದೂಡಲಾಗಿದೆ.